Atul Subhash 
ಸುದ್ದಿಗಳು

ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ: ನಾಲ್ಕನೇ ಆರೋಪಿ ಸುಶೀಲ್‌ ಸಿಂಘಾನಿಯಾನಿಗೂ ಜಾಮೀನು ಮಂಜೂರು

ಪ್ರಕರಣದಲ್ಲಿ ಸಂತ್ರಸ್ತ ಅತುಲ್‌ ಪತ್ನಿ ನಿಖಿತಾ, ಅತ್ತೆ ನಿಶಾ ಮತ್ತು ಭಾವ ಮೈದುನ ಅನುರಾಗ್‌ಗೆ ಜನವರಿ 4ರಂದು ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.

Bar & Bench

ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಸುಶೀಲ್‌ ಕುಮಾರ್‌ ಸಿಂಘಾನಿಯಾಗೆ ಬೆಂಗಳೂರಿನ ಮೆಯೋ ಹಾಲ್‌ನಲ್ಲಿರುವ ಸತ್ರ ನ್ಯಾಯಾಲಯವು ಈಚೆಗೆ ಜಾಮೀನು ಮಂಜೂರು ಮಾಡಿದೆ.

ಅತುಲ್‌ ಪತ್ನಿ ನಿಖಿತಾ ಸಿಂಘಾನಿಯಾಯಾ ಸಂಬಂಧಿಯಾದ ಸುಶೀಲ್‌ ಕುಮಾರ್‌ ಸಿಂಘಾನಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಮೆಯೋ ಹಾಲ್‌ನಲ್ಲಿರುವ 29ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಬಾಳಪ್ಪ ಅಪ್ಪಣ್ಣ ಜರಗು ಪುರಸ್ಕರಿಸಿದ್ದಾರೆ.

ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಡೆಯಾಗಬೇಕಿದೆ. ಪ್ರಕರಣದಲ್ಲಿ ಸಂತ್ರಸ್ತ ಅತುಲ್‌ ಪತ್ನಿ ನಿಖಿತಾ, ಅತ್ತೆ ನಿಶಾ ಮತ್ತು ಭಾವ ಮೈದುನ ಅನುರಾಗ್‌ಗೆ ಜನವರಿ 4ರಂದು ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಈಗ ಸುಶೀಲ್‌ಗೆ ಜಾಮೀನು ದೊರೆತಿರುವುದರೊಂದಿಗೆ ಎಲ್ಲರಿಗೂ ಜಾಮೀನು ಸಿಕ್ಕಂತಾಗಿದೆ.

ದೂರಿನಲ್ಲಿ ಏನಿದೆ?: ಅತುಲ್‌ ಸುಭಾಷ್‌ 2019ರಲ್ಲಿ ನಿಖಿತಾ ಸಿಂಘಾನಿಯಾ ಅವರನ್ನು ಮದುವೆಯಾಗಿದ್ದು, ಅವರಿಗೆ ಒಂದು ಗಂಡು ಮಗುವಿದೆ. ನಿಖಿತಾ ಅವರ ತಾಯಿ ನಿಶಾ, ಸಹೋದರ ಅನುರಾಗ್‌ ಮತ್ತು ಅವರ ಸಂಬಂಧಿ ಸುಶೀಲ್‌ ಸಿಂಘಾನಿಯಾ ಅವರು ಅಣ್ಣನಾದ ಅತುಲ್‌ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು. ಇವುಗಳ ಇತ್ಯರ್ಥಕ್ಕಾಗಿ 3 ಕೋಟಿ ರೂಪಾಯಿ ಹಣ ನೀಡಬೇಕು ಎಂದು ಅತುಲ್‌ ಸಹೋದರ ದೆಹಲಿಯ ನಿವಾಸಿ ಬಿಕಾಸ್‌ ಕುಮಾರ್‌ ಅವರು ಡಿಸೆಂಬರ್‌ 9ರಂದು ಮಾರತ್‌ಹಳ್ಳಿ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಣ್ಣ ತನ್ನ ಪುತ್ರನನ್ನು ಭೇಟಿ ಮಾಡಲು 30 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನ್ಯಾಯಾಲಯದ ಕಲಾಪದಲ್ಲಿ ಹಾಜರಾಗದ ಅತ್ತಿಗೆ ನಿಖಿತಾ ಮತ್ತು ಆಕೆಯ ಮನೆಯವರು ಅಣ್ಣನಿಗೆ 3 ಕೋಟಿ ರೂಪಾಯಿ ನೀಡಬೇಕು, ಇಲ್ಲದಿದ್ದರೆ ಬದುಕಬೇಡ ಆತ್ಮಹತ್ಯೆ ಮಾಡಿಕೋ ಎಂದು ಅಣಕಿಸಿದ್ದರು. ಇದರಿಂದ ಜರ್ಜರಿತನಾಗಿದ್ದ ಅಣ್ಣ ಅತುಲ್‌ ಮಾನಸಿಕ ಮತ್ತು ದೈಹಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದರು.

ಇದನ್ನು ಆಧರಿಸಿ ಮಾರತಹಳ್ಳಿ ಪೊಲೀಸ್‌ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 108 (ಆತ್ಮಹತ್ಯೆಗೆ ಪ್ರಚೋದನೆ), 3(5) (ಏಕ ಉದ್ದೇಶದಿಂದ ಅನೇಕ ಮಂದಿ ಕ್ರಿಮಿನಲ್‌ ಕೃತ್ಯದಲ್ಲಿ ತೊಡಗುವುದು) ಅಡಿ ನಿಖಿತಾ, ನಿಶಾ, ಅನುರಾಗ್‌ ಮತ್ತು ಸುಶೀಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.