UAPA, Delhi High Court  
ಸುದ್ದಿಗಳು

ಭಯೋತ್ಪಾದನೆ ವಿರುದ್ಧ ಕಠೋರ ಕ್ರಮ ಅಗತ್ಯ ಎಂದ ದೆಹಲಿ ಹೈಕೋರ್ಟ್‌: ಐಸಿಸ್ ಅಪರಾಧಿಯ ಮನವಿ ತಿರಸ್ಕೃತ

Bar & Bench

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತನಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಒಂದಾದ ಬಳಿಕ ಒಂದರಂತೆ ಜಾರಿಗೆ ತರುವ ಬದಲಿಗೆ ಏಕಕಾಲಕಜ್ಕೆ ಜಾರಿಗೊಳಿಸುವಂತೆ ಕೋರಿ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸದಸ್ಯನೆನ್ನಲಾದ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ [ಮೊಹ್ಸಿನ್ ಇಬ್ರಾಹಿಂ ಸಯ್ಯದ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ನಡುವಣ ಪ್ರಕರಣ].

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ದೋಷಿಯಾಗಿರುವ ಮೊಹ್ಸಿನ್ ಇಬ್ರಾಹಿಂ ಸಯ್ಯದ್ ತನ್ನ  ಭಯೋತ್ಪಾದನೆ ಕೃತ್ಯದ ಕುರಿತು ತಪ್ಪೊಪ್ಪಿಕೊಂಡಿದ್ದಾನೆ ಎಂಬುದನ್ನು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ   ಗಮನಿಸಿದರು.

ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆಯಡಿಯ (ಎನ್‌ಡಿಪಿಎಸ್‌ ಕಾಯಿದೆ) ಪ್ರಕರಣಗಳು ಸಮಾಜದ ಮೇಲೆ ಪರಿಣಾಮ ಬೀರುವುದರಿಂದ ಏಕಕಾಲಕ್ಕೆ ಶಿಕ್ಷೆ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದಾಗಿ ಹೈಕೋರ್ಟ್‌ ತಿಳಿಸಿತು. ಎರಡೂ ಪ್ರಕರಣಗಳಲ್ಲಿ ಸೈಯ್ಯದ್ ತಪ್ಪೊಪ್ಪಿಕೊಂಡಿದ್ದ.

ಭಯೋತ್ಪಾದನೆ ಪ್ರಕರಣಗಳನ್ನು ಹೆಚ್ಚು ಕಠೋರವಾಗಿ ನಿಭಾಯಿಸುವ ಅಗತ್ಯವಿದೆ ಎಂದು ನ್ಯಾ. ಶರ್ಮಾ ವಿಚಾರಣೆ ವೇಳೆ ತಿಳಿಸಿದರು.

ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡಿ ಹಾನಿ ಉಂಟು ಮಾಡುವ ಉದ್ದೇಶದಿಂದ ಕುಂಭಮೇಳದ ವೇಳೆ ಹರಿದ್ವಾರದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಮುಖ್ಯವಾಗಿ ಹಿಂದೂ ಮಹಾಸಭಾ ನಾಯಕನನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಯುಎಪಿಎ ಅಡಿ ನಿಗದಿಪಡಿಸಿದ ಆರೋಪಗಳನ್ನು ಅರ್ಜಿದಾರ ಖುದ್ದು ಒಪ್ಪಿದ್ದಾನೆ. ವಿಚಾರಣಾ ನ್ಯಾಯಾಲಯಗಳು ಪ್ರಕರಣದಲ್ಲಿ ಈಗಾಗಲೇ ಮೃದುವಾಗಿ ವರ್ತಿಸಿರುವುದರಿಂದ ಮುಂಬೈ ಮತ್ತು ದೆಹಲಿ ನ್ಯಾಯಾಲಯಗಳ ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೊಳಿಸಿ ತಾನು ವಿನಾಯಿತಿ ತೋರಲಾಗದು ಎಂಬುದಾಗಿ ನ್ಯಾಯಾಲಯ ವಿವರಿಸಿದೆ.

ಮುಂಬೈ ಮತ್ತು ದೆಹಲಿಯ ಎರಡೂ ನ್ಯಾಯಾಲಯಗಳು ಅವರಿಗೆ ಜೀವಾವಧಿ ಶಿಕ್ಷೆ. ಎಸಗಿದ ಕೃತ್ಯಗಳಿಗೆ ಗರಿಷ್ಠ ಶಿಕ್ಷೆಯನ್ನೂ ವಿಧಿಸಿಲ್ಲ. ಎರಡೂ ಶಿಕ್ಷೆ ಒಟ್ಟಿಗೆ ಜಾರಿಗೊಳಿಸಿದರೆ ಆತ ಕೇವಲ ಎಂಟು ವರ್ಷ ಶಿಕ್ಷೆ ಅನುಭವಿಸಿದಂತಾಗುತ್ತದೆ. ಆತನ ಅಪರಾಧದ ಗುರುತರತೆಯನ್ನು ಗಮನಿದಲ್ಲಿಟ್ಟುಕೊಂಡು ಎರಡೂ ಪ್ರಕರಣಗಳಲ್ಲಿ ಒಂದು ಶಿಕ್ಷೆ ಪೂರ್ಣಗೊಂಡ ನಂತರ ಒಂದರಂತೆ 15 ವರ್ಷಗಳ ಸೆರೆವಾಸ ವಿಧಿಸಿದರೆ ಅದು ಪೂರ್ವಾಗ್ರಹದ ನಿರ್ಧಾರವಾಗದು ಎಂದು ನ್ಯಾಯಾಲಯ ತಿಳಿಸಿತು.