The Kerala story, Supreme Court
The Kerala story, Supreme Court 
ಸುದ್ದಿಗಳು

ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ʼದ ಕೇರಳ ಸ್ಟೋರಿʼಗೆ ನಿಷೇಧ: ಮೇ 12ರಂದು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

Bar & Bench

ʼದ ಕೇರಳ ಸ್ಟೋರಿʼ ಚಲನಚಿತ್ರವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿರುವುದು ಮತ್ತು ತಮಿಳುನಾಡಿನಲ್ಲಿ ಅನಧಿಕೃತವಾಗಿ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಮೇ 12ರಂದು ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರೆದುರು ಅರ್ಜಿ ಪ್ರಸ್ತಾಪಿಸಿದರು.

ಚಿತ್ರ ತಯಾರಕರು ಪ್ರತಿದಿನವೂ ಹಣ ಕಳೆದುಕೊಳ್ಳುತ್ತಿದ್ದು ಈಗ ಮತ್ತೊಂದು ರಾಜ್ಯವೂ ನಿಷೇಧ ವಿಧಿಸುವುದಾಗಿ ಹೇಳುತ್ತಿದೆ ಎಂದು ಸಾಳ್ವೆ ಅವರು ತಿಳಿಸಿದಾಗ ಸಿಜೆಐ ಅವರು, ಶುಕ್ರವಾರದಂದು ಪ್ರಕರಣವನ್ನು ಆಲಿಸುವುದಾಗಿ ತಿಳಿಸಿ ಪಶ್ಚಿಮ ಬಂಗಾಳಕ್ಕೆ ನೋಟಿಸ್‌ ನೀಡುವಂತೆ ಸೂಚಿಸಿದರು.

ಅರ್ಜಿದಾರರ ಪರವಾಗಿ ವಕೀಲ ಹರ್ಷವರ್ಧನ್ ಝಾ ಮತ್ತು ಅಡ್ವೊಕೇಟ್ ಆನ್ ರೆಕಾರ್ಡ್ ಯುಗಂಧರ ಪವಾರ್ ಝಾ ಅವರೊಂದಿಗೆ ʼನಾಯಕ್ ನಾಯಕ್ʼ ವಕೀಲ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಅಮಿತ್ ನಾಯಕ್ ವಾದ ಮಂಡಿಸಿದರು.

ದ್ವೇಷ ಮತ್ತು ಹಿಂಸಾಚಾರದ ಘಟನೆ ತಪ್ಪಿಸಲು ರಾಜ್ಯದಲ್ಲಿ ವಿವಾದಾತ್ಮಕ ಚಲನಚಿತ್ರದ ಪ್ರದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಪಶ್ಚಿಮ ಬಂಗಾಳ ಸರ್ಕಾರ  ಮೇ 8ರಂದು ಆದೇಶಿಸಿತ್ತು.

ಪಶ್ಚಿಮ ಬಂಗಾಳದ ನಿಷೇಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯು ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯಬಹುದು ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ಚಲನಚಿತ್ರದ ಮೇಲೆ ವಿಧಿಸಿರುವ ಅನಧಿಕೃತ ನಿಷೇಧವನ್ನೂ ಪ್ರಶ್ನಿಸಿದೆ.