Mangaluru Court Complex
Mangaluru Court Complex megamedianews.com
ಸುದ್ದಿಗಳು

ಮಂಗಳೂರು ಮಸೀದಿ ವಿವಾದ: ನವೀಕರಣ ಕಾಮಗಾರಿಗೆ ಮಧ್ಯಂತರ ತಡೆ ನೀಡಿರುವ ಸಿವಿಲ್ ನ್ಯಾಯಾಲಯ

Bar & Bench

ಮಂಗಳೂರಿನ ಮಳಲಿಪೇಟೆ ಜುಮ್ಮಾ ಮಸೀದಿ ನವೀಕರಣ ವೇಳೆ ದೇಗುಲ ಶೈಲಿಯ ನಿರ್ಮಿತಿ ಪತ್ತೆಯಾದ ಪ್ರಕರಣ ದಿನೇ ದಿನೇ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವಂತೆ ನವೀಕರಣಕ್ಕೆ ಸಂಬಂಧಿಸಿದಂತೆ ನಗರದ ನ್ಯಾಯಾಲಯವೊಂದು ಕಳೆದ ತಿಂಗಳು ಮಧ್ಯಂತರ ತಡೆಯಾಜ್ಞೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ನವೀಕರಣ ಕಾರ್ಯಕ್ಕೆ ಶಾಶ್ವತ ತಡೆ ನೀಡುವಂತೆ ಕೋರಿ ಧನಂಜಯ್‌ ಮತ್ತು ಮನೋಜ್‌ ಕುಮಾರ್‌ ಎಂಬುವವರು ವಕೀಲ ಎಂ ಚಿದಾನಂದ ಕೇದಿಲಾಯ ಅವರ ಮೂಲಕ ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ 22.04.2022ರಂದು ಹೊರಡಿಸಿರುವ ಆದೇಶದಲ್ಲಿ , “ಪ್ರತಿವಾದಿಗಳು ಅವರ ಕಡೆಯವರು, ಪ್ರತಿನಿಧಿಗಳು, ಸೇವಕರು, ಅನುಯಾಯಿಗಳು ಅಥವಾ ಹಕ್ಕು ಸಾಧಿಸುವ ಯಾವುದೇ ವ್ಯಕ್ತಿಗಳು ಕಟ್ಟಡದಲ್ಲಿನ ದೇವಸ್ಥಾನದಂತಹ ರಚನೆಯನ್ನು ಮುಂದಿನ ವಿಚಾರಣೆಯವರೆಗೆ ಕಿತ್ತುಹಾಕುವಂತಿಲ್ಲ ಅಥವಾ ಹಾನಿಗೊಳಿಸುವಂತಿಲ್ಲ” ಎಂದು ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 03-06- 2022ಕ್ಕೆ ಪಟ್ಟಿ ಮಾಡುವಂತೆ ಸೂಚಿಸಿದೆ.

“ಮಸೀದಿ ಇರುವ ಜಾಗದಲ್ಲಿ ದೇವಸ್ಥಾನವಿತ್ತು. ಅದನ್ನು ತಮ್ಮ ಪೂರ್ವಜರು ಆರಾಧಿಸುತ್ತಿದ್ದರು. ಮುಸ್ಲಿಂ ಆಡಳಿತಗಾರರ ಆಕ್ರಮಣದ ಬಳಿಕ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಿ ಮಸೀದಿ ನಿರ್ಮಿಸಲಾಯಿತು” ಎಂದು ಅರ್ಜಿದಾರರು ವಾದಿಸಿದ್ದರು.

ಹೊಸ ಮಸೀದಿಯನ್ನು ನಿರ್ಮಿಸುವ ಸಲುವಾಗಿ ಮಸೀದಿಯ ಒಂದ ಭಾಗವನ್ನು 20.04.2022 ರಂದು ಕೆಡವಲಾಗಿದೆ. ಮಸೀದಿಯ ಭಾಗವನ್ನು ಕೆಡವುವ ವೇಳೆ ಅಲ್ಲಿ ದೇವಸ್ಥಾನದ ರೀತಿಯ ನಿರ್ಮಿತಿ ಕಂಡುಬಂದಿದ್ದು ಅದನ್ನು ಪ್ರತಿವಾದಿಗಳು ನಾಶಪಡಿಸುವ ಸಾಧ್ಯತೆ ಇರುವುದರಿಂದ ತಡೆ ನೀಡಬೇಕೆಂದು ಕೋರಲಾಗಿತ್ತು.

ಅದಕ್ಕೆ ಸಂಬಂಧಿಸಿದ ದಾಖಲೆಗಳು, ಛಾಯಾಚಿತ್ರಗಳನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಫಿರ್ಯಾದುದಾರರು "ಪ್ರಕರಣ ಭಾವನಾತ್ಮಕ ಸಮಸ್ಯೆಯಾಗಲಿದ್ದು ಧಾರ್ಮಿಕ ನಂಬಿಕೆಗಳು ಮತ್ತು ಧರ್ಮಗಳು ಪ್ರಕರಣದಲ್ಲಿ ಭಾಗಿಯಾಗಿವೆ…. ಇಂತಹ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿದೇ ಇದ್ದರೆ ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆಗಳಿದ್ದು ಕೋಮುಗಲಭೆ ಉಂಟಾಗಲಿದೆ" ಎಂದು ವಿವರಿಸಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ “ಹಿಂಸಾಚಾರ ತಪ್ಪಿಸಲು ಮತ್ತು ಜನರ ನಡುವೆ ನೆಮ್ಮದಿ ಕಾಪಾಡುವ ಸಲುವಾಗಿ ಮತ್ತು ಪ್ರಕ್ರಿಯೆಗಳು ಹೆಚ್ಚಾಗುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ಏಕಪಕ್ಷೀಯ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ತಿಳಿಸಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Dhananjay Vs Mangaluru Jumma Masjid Care.pdf
Preview