Umar Khalid, Sharjeel Imam, Gulfisha Fatima, and Meeran Haider and Supreme Court  
ಸುದ್ದಿಗಳು

ಬುದ್ಧಿಜೀವಿಗಳಲ್ಲ ದೇಶ ವಿರೋಧಿಗಳು: ಶಾರ್ಜಿಲ್, ಉಮರ್ ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ ಪೊಲೀಸರ ಆರೋಪ

ಬುದ್ಧಿಜೀವಿಗಳು ಭಯೋತ್ಪಾದಕರಾದರೆ ಹೆಚ್ಚು ಅಪಾಯಕಾರಿ ಎಂದು ಪೊಲೀಸರು ತಿಳಿಸಿದರು.

Bar & Bench

ದೆಹಲಿ ಗಲಭೆ ಪಿತೂರಿ ಪ್ರಕರಣದ ಆರು ಆರೋಪಿಗಳು ಹಿಂಸಾಚಾರದ ಮೂಲಕ ಸರ್ಕಾರ ಉರುಳಿಸಲು ಯತ್ನಿಸಿದ ರಾಷ್ಟ್ರವಿರೋಧಿಗಳು ಎಂದು ದೆಹಲಿ ಪೊಲೀಸರು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಆರೋಪಿಗಳು ಬುದ್ಧಿಜೀವಿಗಳಲ್ಲ, ರಾಷ್ಟ್ರವಿರೋಧಿಗಳು ಎಂಬುದನ್ನು ಅರ್ಥಮಾಡಿಕೊಳ್ಳದೆ ವಿದೇಶಿ ಪತ್ರಿಕೆಗಳು ಸಹ ಅವರ ಬಗ್ಗೆ ಸಹಾನುಭೂತಿಯ ಸುದ್ದಿ ಪ್ರಕಟಿಸುತ್ತವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಅವರು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠಕ್ಕೆ ತಿಳಿಸಿದರು.

ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಾದಾಬ್ ಅಹ್ಮದ್ ಹಾಗೂ ಮೊಹಮ್ಮದ್ ಸಲೀಮ್ ಖಾನ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಪೊಲೀಸರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ವಿದೇಶಿ ಮಾಧ್ಯಮಗಳು (ನ್ಯೂಯಾರ್ಕ್‌ ಟೈಮ್ಸ್‌)  ಇವರು ಬುದ್ಧಿಜೀವಿ ಸೋಗಿನಲ್ಲಿರುವ ದೇಶ ವಿರೋಧಿಗಳು  ಎಂಬುದನ್ನುಅರ್ಥಮಾಡಿಕೊಳ್ಳದೆ ಇವರನ್ನು ಬುದ್ಧಿಜೀವಿಗಳಂತೆ ಬಿಂಬಿಸುತ್ತಿವೆ.  ಸರ್ಕಾರವನ್ನು ಉರುಳಿಸಿ ಆರ್ಥಿಕ ಅರಾಜತೆ ಉಂಟು ಮಾಡುವುದು ಇವರ ಉದ್ದೇಶವಾಗಿತ್ತು. 2020ರ ದೆಹಲಿ ಗಲಭೆಗಳಲ್ಲಿ 53 ಜನರು ಮೃತಪಟ್ಟಿದ್ದು, 530ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು ಎಂದಿದ್ದಾರೆ.

ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿ ವೇಳೆ ಪ್ರತಿಭಟನೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಾಯಿತು.  ಬುದ್ಧಿಜೀವಿಗಳೆನಿಸಿಕೊಂಡವರು ಭಯೋತ್ಪಾದನೆಗೆ ತೊಡಗಿದರೆ ಅವರು ಇನ್ನೂ ಹೆಚ್ಚಿನ ಅಪಾಯಕಾರಿಗಳಾಗುತ್ತಾರೆ. ಎಂದು ಅವರು ಹೇಳಿದರು. ರಸ್ತೆ ತಡೆ, ಹಿಂಸಾತ್ಮಕ ಪ್ರತಿಭಟನೆ ಕುರಿತಂತೆ ಶಾರ್ಜಿಲ್‌ ಇಮಾಮ್‌ ಮಾಡಿದ್ದಾರೆನ್ನಲಾದ ಭಾಷಣದ ದೃಶ್ಯಾವಳಿಯನ್ನು ಇದೇ ವೇಳೆ ನ್ಯಾಯಾಲಯದಲ್ಲಿ ಪ್ರದರ್ಶಿಸಲಾಯಿತು.

ಮುಸ್ಲಿಂ ಸ್ಟೂಡೆಂಟ್ಸ್‌ ಆಫ್‌ ಜೆಎನ್‌ಯು, ಜಾಮಿಯಾ ಕೋ-ಆರ್ಡಿನೇಷನ್ ಕಮಿಟಿ ಮುಂತಾದ ವಾಟ್ಸಾಪ್‌ ಗುಂಪುಗಳ ಮೂಲಕ ಸಂಚು ರೂಪಿಸಿದರು. ಮತ್ತೊಂದೆಡೆ ವಿಚಾರಣೆ ವಿಳಂಬಕ್ಕೆ ಆರೋಪಿಗಳೇ ಕಾರಣವಾದ್ದರಿಂದ ವಿಳಂಬ ಆಧರಿಸಿ ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಆದರೆ ತಾವು ಹಿಂಸಾಚಾರಕ್ಕೆ ಕರೆ ನೀಡಿರಲಿಲ್ಲ. ಶಾಂತಿಯುತ ಪ್ರತಿಭಟನೆಗೆ ಮಾತ್ರ ಕರೆ ನೀಡಿದ್ದೆವು ಎಂದು ಅರ್ಜಿದಾರರು ವಾದಿಸಿದರು. ಗಲಭೆಗಳು ನಡೆಯುವ ಸಮಯದಲ್ಲಿ ಖಾಲಿದ್ ದೆಹಲಿಯಲ್ಲೇ ಇರಲಿಲ್ಲ ಎಂದು ಉಮರ್‌ ಖಾಲಿದ್‌ ಪರ ವಕೀಲರು ಹೇಳಿದರು. ಇತ್ತ ಶಾರ್ಜೀಲ್‌ ಪರ ವಾದ ಮಂಡಿಸಿದ ವಕೀಲ ಸಿದ್ಧಾರ್ಥ ದವೆ ತಮ್ಮ ಕಕ್ಷಿದಾರ ಹಿಂಸಾ ವಿರೋಧಿ. ಅವರು ಕೇವಲ ರಸ್ತೆ ತಡೆಗೆ ಮಾತ್ರ ಕರೆ ನೀಡಿದ್ದರು ಎಂದರು.