Chief Justice Satish Chandra Sharma and Justice Subramonium Prasad
Chief Justice Satish Chandra Sharma and Justice Subramonium Prasad  
ಸುದ್ದಿಗಳು

ಸರ್ಕಾರ ಪಾಕಿಸ್ತಾನದಿಂದ ಬಂದಿರುವ ಹಿಂದೂ ವಲಸಿಗರ ಸ್ಥಿತಿ ಪರಿಶೀಲಿಸುತ್ತದೆ ಎಂಬ ನಂಬಿಕೆ ಇದೆ: ದೆಹಲಿ ಹೈಕೋರ್ಟ್

Bar & Bench

ಪಾಕಿಸ್ತಾನದಿಂದ ಭಾರತಕ್ಕೆ ಬಂದು ದೆಹಲಿಯ ಆದರ್ಶ್ ನಗರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಹಿಂದೂ ವಲಸಿಗರು ಎದುರಿಸುತ್ತಿರುವ ದುಃಸ್ಥಿತಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತದೆ ಎಂಬ ಭರವಸೆ ಮತ್ತು ನಂಬಿಕೆ ಇದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಹರಿಓಂ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ವಲಸೆ ಕುಟುಂಬಗಳ ಸ್ಥಿತಿಯನ್ನು ಎತ್ತಿ ತೋರಿಸುವ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಸಂಬಂಧಿಸಿದಂತೆ ಇನ್ನೆರಡು ವಾರಗಳಲ್ಲಿ ಸೂಕ್ತ ಅಫಿಡವಿಟ್‌ ಸಲ್ಲಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಪಾಕಿಸ್ತಾನದಿಂದ ವಲಸೆ ಬಂದು ದೆಹಲಿಯ ಆದರ್ಶನಗರ ಕೊಳೆಗೇರಿಗಳಲ್ಲಿ ವರ್ಷಗಳಿಂದ ವಾಸಿಸುತ್ತಿರುವ ಸುಮಾರು 200 ಕುಟುಂಬಗಳ ದುಃಸ್ಥಿತಿಯನ್ನು ಹರಿಓಂ ಎಂಬುವವರು ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ವಿವರಿಸಲಾಗಿದೆ. ಈ ಮಂದಿಗೆ ಆಧಾರ್‌ ಕಾರ್ಡ್‌ಗಳನ್ನು ನೀಡಲಾಗಿದ್ದು ಭಾರತ ಸರ್ಕಾರದ ದೀರ್ಘಾವಧಿ ವೀಸಾದ ಆಧಾರದಲ್ಲಿ ಅವರು ಇಲ್ಲಿ ನೆಲೆಸಿದ್ದಾರೆ ಎಂದು ವಿವರಿಸಲಾಗಿದೆ.

ಈ ಕುಟುಂಬಗಳಲ್ಲಿ ಸಣ್ಣ ಮಕ್ಕಳು ಮತ್ತು ಮಹಿಳೆಯರು ಇದ್ದು ವಿದ್ಯುತ್ ಇಲ್ಲದಿರುವುದರಿಂದ ಈ ಕುಟುಂಬಗಳು ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ವಿದ್ಯುತ್ ಪೂರೈಕೆ ಮಾಡುವಂತೆ ಟಾಟಾ ಪವರ್ ದೆಹಲಿ ಡಿಸ್ಟ್ರಿಬ್ಯೂಷನ್ ಲಿಮಿಟೆಡ್‌ಗೆ ವಿನಂತಿಸಿದ್ದರೂ ತಾಂತ್ರಿಕ ಕಾರಣಗಳಿಂದ ವಿದ್ಯುತ್‌ ಸಂಪರ್ಕ ದೊರೆತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ. ಆದರೆ ಕೊಳೆಗೇರಿಯ ವಿವಾದಿತ ಜಾಗ ಕೇಂದ್ರ/ರಕ್ಷಣಾ ಇಲಾಖೆ/ದೆಹಲಿ ಮೆಟ್ರೋಗೆ ಸೇರಿದ್ದು ಇವುಗಳಿಂದ ನಿರಾಕ್ಷೇಪಣಾ ಪತ್ರ ದೊರೆಯದೆ ವಿದ್ಯುತ್‌ ಸಂಪರ್ಕ ನೀಡಲಾಗದು ಎಂದು ಟಿಪಿಡಿಡಿಎಲ್‌ ನ್ಯಾಯಾಲಯಕ್ಕೆ ತಿಳಿಸಿದೆ. ಪ್ರಕರಣ ಮತ್ತೆ ಅಕ್ಟೋಬರ್‌ 6ರಂದು ವಿಚಾರಣೆಗೆ ಬರಲಿದೆ.