Nirmala Uppuganti and Bombay High Court
Nirmala Uppuganti and Bombay High Court 
ಸುದ್ದಿಗಳು

ಉಪಶಾಮಕ ಆರೈಕೆ ಪಡೆಯಲು ನರ್ಮದಾ ಅಕ್ಕ ಅವರನ್ನು ಆರೈಕೆ ಕೇಂದ್ರಕ್ಕೆ ವರ್ಗಾಯಿಸಿ: ಬಾಂಬೆ ಹೈಕೋರ್ಟ್ ನಿರ್ದೇಶನ

Bar & Bench

ಮಾರಣಾಂತಿಕ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾವೋವಾದಿ ನಾಯಕಿ ನರ್ಮದಾ ಅಕ್ಕ ಅಲಿಯಾಸ್‌ ನಿರ್ಮಲ ಉಪ್ಪುಗಂಟಿಯವರು ಉಪಶಾಮಕ ಆರೈಕೆ ಪಡೆಯಲು ಸೆಪ್ಟೆಂಬರ್‌ 15ರ ಒಳಗೆ ಅವರನ್ನು ಅಂತಿಮ ದಿನಗಳ ಆರೈಕೆ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ನಿರ್ದೇಶಿಸಿದೆ.

ಎರಡು ದಿನಗಳ ಹಿಂದೆ ವಾದ-ಪ್ರತಿವಾದವನ್ನು ವಿಸ್ತೃತವಾಗಿ ಆಲಿಸಿದ್ದ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಜೆ ಜಾಮ್‌ದಾರ್‌ ಅವರಿದ್ದ ವಿಭಾಗೀಯ ಪೀಠವು ಇಂದು ಆದೇಶ ಹೊರಡಿಸಿದೆ.

ನಿರ್ಮಲಾ ಅವರನ್ನು 2019ರಲ್ಲಿ ಗಡ್‌ಚಿರೋಲಿಯಲ್ಲಿ ನಡೆದ ನಕ್ಸಲ್‌ ದಾಳಿಗೆ ಸಂಬಂಧಿಸಿದಂತೆ ಅದೇ ವರ್ಷ ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ದಾಳಿಯಲ್ಲಿ ಹದಿನೈದು ಪೊಲೀಸರು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದರು.

ವಕೀಲ ಯುಗ್‌ ಮೋಹಿತ್ ಚೌಧರಿ ಮೂಲಕ ಸಲ್ಲಿಸಲಾಗಿರುವ ತಮ್ಮ ಮನವಿಯಲ್ಲಿ ನರ್ಮದಾ ಅವರು 2018ರಲ್ಲಿ ತಾವು ಸ್ತನ ಕ್ಯಾನ್ಸರ್‌ಗೆ ತುತ್ತಾಗಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. 2019ರಲ್ಲಿ ಮಹಾರಾಷ್ಟ್ರ ಪೊಲೀಸರು ತಮ್ಮನ್ನು ಅಕ್ರಮವಾಗಿ ಬಂಧನದಲ್ಲಿರಿಸಿದರು. ಇದರಿಂದಾಗಿ ಬಲವಂತವಾಗಿ ಕಿಮೊಥೆರಪಿ ಸರಣಿಯನ್ನು ತಪ್ಪಿಸಿಕೊಳ್ಳುವಂತಾಯಿತು ಹಾಗೂ ಆರೋಗ್ಯ ಪರಿಸ್ಥಿತಿ ಹದಗೆಡತೊಡಗಿತು ಎಂದು ತಿಳಿಸಿದ್ದರು.

ನರ್ಮದಾ ಅವರ ಪರವಾಗಿ ಹಾಜರಾಗಿದ್ದ ವಕೀಲೆ ಪಯೋಶಿ ರಾಯ್‌ ಅವರು, ನರ್ಮದಾ ಅವರು ಕ್ಯಾನ್ಸರ್‌ನ ನಾಲ್ಕನೇ ಹಂತದಲ್ಲಿದ್ದಾರೆ. ಮೂಳೆಗಳು ಹಾಗೂ ಶ್ವಾಸಕೋಶದ ಬಹು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅವರನ್ನು ಕೈದಿಗಳ ಸಾಂದ್ರತೆ ಹೆಚ್ಚಿರುವ ಜೈಲಿನಲ್ಲಿರಿಸಲಾಗಿದ್ದು ಬಿಸಿ ನೀರು, ಶೌಚಾಲಯ, ವೈದ್ಯಕೀಯ ಸೌಕರ್ಯಗಳಿಲ್ಲದೆ ಅವರು ನೆಲದ ಮೇಲೆ ಮಲಗುವಂತಾಗಿದೆ ಎಂದು ವಿವರಿಸಿದ್ದರು.

ಈ ಪರಿಸ್ಥಿತಿಯಲ್ಲಿ ಅವರಿಗೆ ಉಪಶಾಮಕ ಆರೈಕೆಯ (ಪ್ಯಾಲಿಯೇಟಿವ್ ಕೇರ್) ಅವಶ್ಯಕತೆ ಇದೆ. ಅವರಿಗೆ ತಮ್ಮ ಪತಿ ಹಾಗೂ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇತರ ಆರೋಪಿಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದ್ದರು.

ಅಕ್ಕ ಗುಣಮುಖರಾಗುವ ಹಂತದಿಂದ ದೂರ ಸಾಗಿದ್ದಾರೆ. ಕಿಮೋಥೆರಪಿ ಚಿಕಿತ್ಸೆಯು ಕೇವಲ ನೋವು ಶಮನಕ್ಕೆ ಮಾತ್ರವೇ ಮಾಡಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಂತಿಮವಾಗಿ ಪೀಠವು ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿತ್ತು.