ಜನರಲ್ ನರ್ಸಿಂಗ್ ಹಾಗೂ ಮಿಡ್ವೈಫರಿ (ಪ್ರಸೂತಿಶಾಸ್ತ್ರ) ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಬದಲಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್ಜಿಯುಎಚ್ಎಸ್) ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ದಿ ಕರ್ನಾಟಕ ಸ್ಟೇಟ್ ಅಸೋಸಿಯೇಷನ್ ಆಫ್ ದಿ ಮ್ಯಾನೇಜ್ಮೆಂಟ್ ಆಫ್ ನರ್ಸಿಂಗ್ ಆ್ಯಂಡ್ ಆಲೈಡ್ ಹೆಲ್ತ್ ಸೈನ್ಸ್ ಇನ್ಸ್ಟಿಟ್ಯೂಷನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ಏಕಸದಸ್ಯ ಪೀಠ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ಪೀಠವು ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ನರ್ಸಿಂಗ್ ಪರೀಕ್ಷಾ ಮಂಡಳಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಇಂಡಿಯನ್ ನರ್ಸಿಂಗ್ ಕೌನ್ಸಿಲ್ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿತು.
ಡಿಪ್ಲೋಮಾ ನರ್ಸಿಂಗ್ ಕೋರ್ಸ್ಗಳ ಪರೀಕ್ಷೆಗಳನ್ನು ನಡೆಸಲೆಂದೇ ರಾಜ್ಯ ಶೂಶ್ರೂಷಾ ಪರೀಕ್ಷಾ ಮಂಡಳಿಯನ್ನು 1991ರಲ್ಲಿ ಸ್ಥಾಪಿಸಲಾಗಿದೆ. ಪಿಯುಸಿ ನಂತರದ ನರ್ಸಿಂಗ್ ಕೋರ್ಸ್ಗಳ ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹೊಂದಿದೆ. ಆದರೆ, ಜನರಲ್ ನರ್ಸಿಂಗ್ ಆ್ಯಂಡ್ ಮಿಡ್ವೈಫರಿ (ಜಿಎನ್ಎಂ) ಕೋರ್ಸ್ನ ಪರೀಕ್ಷೆಗಳನ್ನು ಶುಶ್ರೂಷಾ ಪರೀಕ್ಷಾ ಮಂಡಳಿ ಬದಲಿಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಬೇಕು ಎಂದು 2023ರ ಏಪ್ರಿಲ್ 21ರಂದು ಆದೇಶ ಹೊರಡಿಸಿದೆ. ಇದು ನರ್ಸಿಂಗ್ ಕಾಲೇಜುಗಳ ಹಿತ ಹಾಗೂ ಶುಶ್ರೂಷಾ ಪರೀಕ್ಷಾ ಮಂಡಳಿ ರಚನೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಆರ್ಜಿಯಲ್ಲಿ ದೂರಲಾಗಿದೆ.
ಫೆಬ್ರವರಿ 17ಕ್ಕೆ ಜಿಎನ್ಎಂ ಪರೀಕ್ಷೆಗಳು ನಿಗದಿಯಾಗಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಹಾಜರಾಗಲು ವಿದ್ಯಾರ್ಥಿಗಳು ದೂರದ ಪ್ರಯಾಣ ಮಾಡಬೇಕಾಗುತ್ತದೆ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳು ಕಲಿಯುತ್ತಿರುವ ನರ್ಸಿಂಗ್ ಸಂಸ್ಥೆಗಳಿಂದ ತುಂಬಾ ದೂರದಲ್ಲಿ ಇವೆ. ಆದ್ದರಿಂದ, ಪರೀಕ್ಷೆಗಳನ್ನು ಶುಶ್ರೂಷಾ ಪರೀಕ್ಷಾ ಮಂಡಳಿಯ ಬದಲಿಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಅಧಿಕಾರ ನೀಡಿ 2023ರ ಏಪ್ರಿಲ್ 21ರಂದು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಇದೇ ಫೆಬ್ರವರಿ 17ರಿಂದ ಪರೀಕ್ಷೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.