Divorce, Delhi High Court
Divorce, Delhi High Court 
ಸುದ್ದಿಗಳು

ಸಕಾರಣವಿಲ್ಲದೇ ಏಕಪಕ್ಷೀಯವಾಗಿ ವಿಚ್ಛೇದನ ಇತ್ಯರ್ಥದಿಂದ ಹಿಂದೆ ಸರಿಯುವುದು ಮಾನಸಿಕ ಕ್ರೌರ್ಯ: ದೆಹಲಿ ಹೈಕೋರ್ಟ್

Bar & Bench

ಪರಸ್ಪರ ಸಹಮತದ ವಿಚ್ಛೇದನ ಇತ್ಯರ್ಥ ಒಪ್ಪಂದದಿಂದ ಏಕಪಕ್ಷೀಯವಾಗಿ ಸಂಗಾತಿಯೊಬ್ಬರು ಹಿಂದೆ ಸರಿಯುವುದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರ ನೇತೃತ್ವದ ವಿಭಾಗೀಯ ಪೀಠವು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲೇಖಿಸಿ, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನವನ್ನು ಸಂಗಾತಿಗಳು ಒಪ್ಪಿಕೊಂಡಾಗ, ಯಾವುದೇ ನ್ಯಾಯಯುತ ಕಾರಣವಿಲ್ಲದೆ ಒಬ್ಬ ಸಂಗಾತಿಯು ಏಕಪಕ್ಷೀಯವಾಗಿ ಒಪ್ಪಿಗೆ ಹಿಂತೆಗೆದುಕೊಳ್ಳುವುದು ಇನ್ನೊಬ್ಬ ಸಂಗಾತಿಯು ಅನುಭವಿಸುತ್ತಿರುವ ಕ್ರೌರ್ಯವನ್ನು ಹೆಚ್ಚಿಸುತ್ತದೆ ಎಂದು ಒತ್ತಿಹೇಳಿತು.

"ಹೀಗಾಗಿ, ಪ್ರತಿವಾದಿಯನ್ನು ತಮ್ಮ ವಿವಾದಗಳು ಕೊನೆಗೊಳ್ಳಲಿವೆ ಎಂದು ನಂಬುವಂತೆ ಮಾಡುವಲ್ಲಿ ಮತ್ತು ನಂತರ ಇತ್ಯರ್ಥದ ಪ್ರಯತ್ನದಿಂದ ಹಿಂದೆ ಸರಿಯುವ ಮೂಲಕ ಮೇಲ್ಮನವಿದಾರೆ / ಹೆಂಡತಿಯ ಇಂತಹ ನಡವಳಿಕೆಯು ಪ್ರತಿವಾದಿಯ (ಪತಿ) ಮನಸ್ಸಿನಲ್ಲಿ ಅಸಮಾಧಾನ, ಕ್ರೌರ್ಯ ಮತ್ತು ಅನಿಶ್ಚಿತತೆಗೆ ಕಾರಣವಾಗಬಹುದು. ಪಕ್ಷಕಾರರ ನಡುವಿನ ಜಗಳವು ಯಾವುದೇ ಸಮರ್ಥನೀಯ ಆಧಾರದ ಮೇಲೆ ಅಲ್ಲದೆ, ಸಂಗಾತಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಬಯಕೆಯಿಂದ ಪ್ರಚೋದಿಸಲ್ಪಟ್ಟ ಅಹಂಕಾರಗಳ ಸಂಘರ್ಷವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನದಿಂದ ಏಕಪಕ್ಷೀಯವಾಗಿ ಹಿಂದೆ ಸರಿಯುವುದು ಕ್ರೌರ್ಯಕ್ಕೆ ಸಮನಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೋರಿದ್ದ ಪತಿಯ ಮನವಿಯನ್ನು ಅನುಮತಿಸಿ ಮಾರ್ಚ್ 20, 2017ರಂದು ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಆದೇಶದ ವಿರುದ್ಧ ಮಹಿಳೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸುವಾಗ ನ್ಯಾಯಾಲಯವು ಈ ತೀರ್ಪನ್ನು ಬದಲಿಸಿದೆ. ಈ ಜೋಡಿಯು ಡಿಸೆಂಬರ್ 2001ರಲ್ಲಿ ವಿವಾಹವಾಗಿದ್ದರು. ಆದರೆ ಜನವರಿ 2003ರಲ್ಲಿ ಅವರು ಬೇರ್ಪಟ್ಟಿದ್ದರಿಂದ ವಿವಾಹವು ಕೇವಲ ಹದಿಮೂರು ತಿಂಗಳು ಮಾತ್ರ ಉಳಿದಿತ್ತು.

ಪತಿ, ಪತ್ನಿ ನಡುವೆ ವಿವಾದಗಳು ಮದುವೆಯ ಬೆನ್ನಿಗೇ ಮೂಡಿದ್ದರಿಂದ ದಂಪತಿಗಳು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಒಪ್ಪಿಕೊಂಡರು. ಒಪ್ಪಂದದ ಭಾಗಶಃ ಅನುಷ್ಠಾನದ ಭಾಗವಾಗಿ, 5 ಲಕ್ಷ ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಪತ್ನಿ ಸ್ವೀಕರಿಸಿದರು. ಆದಾಗ್ಯೂ, ಅವಳು ನಂತರ ಅದನ್ನು ಹಿಂದಿರುಗಿಸಿದಳು. ನಂತರ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.

ಪ್ರಕರಣವನ್ನು ಪರಿಗಣಿಸಿದ ನಂತರ, ತನ್ನ ಪತಿ ಅನೇಕ ಹುಡುಗಿಯರೊಂದಿಗೆ ಸ್ನೇಹ ಹೊಂದಿದ್ದಾನೆ ಮತ್ತು ವ್ಯಭಿಚಾರ ಸಂಬಂಧಗಳನ್ನು ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದರೂ, ವ್ಯಭಿಚಾರದ ಯಾವುದೇ ಆರೋಪವನ್ನು ಸಾಬೀತುಪಡಿಸಲು ತನ್ನ ಬಳಿ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಅವಳು ತನ್ನ ಪಾಟೀಸವಾಲಿನಲ್ಲಿ ಒಪ್ಪಿಕೊಂಡಿದ್ದಾಳೆ ಎಂದು ಹೈಕೋರ್ಟ್ ಹೇಳಿದೆ.

ಆರೋಪಿಸಲಾದ ಎಲ್ಲಾ ಘಟನೆಗಳನ್ನು ಒಟ್ಟಿಗೆ ನೋಡಿದಾಗ, "ಪತಿಯೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ಅವಮಾನಿಸದೆ ಪರಿಹರಿಸುವ ಪ್ರಬುದ್ಧತೆ ಇಲ್ಲದ ಹೆಂಡತಿಯ ಹೊಂದಾಣಿಕೆಯಿಲ್ಲದ ಮನೋಭಾವವನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ, ಇದರಿಂದಾಗಿ ಪ್ರತಿವಾದಿ (ಪತಿ) ಮಾನಸಿಕ ಕ್ರೌರ್ಯವನ್ನು ಅನುಭವಿಸಿದ್ದಾರೆ" ಎಂದು ನ್ಯಾಯಾಲಯ ತೀರ್ಮಾನಿಸಿದೆ.

"ಮೇಲಿನ ಚರ್ಚೆಗಳನ್ನು ಗಮನದಲ್ಲಿಟ್ಟುಕೊಂಡು, ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13 (1) (ಐಎ) ಅಡಿಯಲ್ಲಿ ಪ್ರತಿವಾದಿ / ಪತಿಗೆ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡಿದ ಪ್ರಧಾನ ನ್ಯಾಯಾಧೀಶರ 20.03.2017ರ ತೀರ್ಪಿನಲ್ಲಿ ಯಾವುದೇ ನ್ಯೂನತೆ ಇಲ್ಲ ಎಂದು ನಾವು ತೀರ್ಮಾನಿಸುತ್ತೇವೆ" ಎಂದು ನ್ಯಾಯಾಲಯ ಹೇಳಿದೆ. ಈ ನೆಲೆಯಲ್ಲಿ ಹೆಂಡತಿಯ ಮನವಿಯನ್ನು ತಿರಸ್ಕರಿಸಲಾಗಿದೆ.

[ತೀರ್ಪು ಓದಿ]

RS v VS.pdf
Preview