Delhi High Court
Delhi High Court 
ಸುದ್ದಿಗಳು

ಉನ್ನಾವ್‌ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗರ್ ಸಹೋದರ ಜೈದೀಪ್‌ ಶಿಕ್ಷೆ ರದ್ದುಗೊಳಿಸಲು ದೆಹಲಿ ಹೈಕೋರ್ಟ್ ನಕಾರ

Bar & Bench

ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಜೈದೀಪ್ ಸಿಂಗ್ ಸೆಂಗರ್ ಅಲಿಯಾಸ್ ಅತುಲ್ ಸಿಂಗ್‌ಗೆ ವಿಧಿಸಲಾದ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲು ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ.

ಜೈದೀಪ್ ಸಿಂಗ್ ಸೆಂಗರ್ ತನಗೆ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಬಾಕಿ ಇರುವುದರಿಂದ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿದ್ದರು. ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಅವರು ಸೆಂಗರ್ ಸುಮಾರು ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ, ಇದು ಮೇಲ್ಮನವಿದಾರರಿಗೆ ನೀಡಲಾದ ಒಟ್ಟು ಶಿಕ್ಷೆಯ ಅರ್ಧಕ್ಕಿಂತ ಕಡಿಮೆಯಾಗಿದೆ. ಮೇಲ್ಮನವಿದಾರರಿಗೆ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ ಎಂದರು.

"[ಈ ನ್ಯಾಯಾಲಯ] ಮೇಲ್ಮನವಿದಾರನು ಅನುಭವಿಸಿದ ಕಸ್ಟಡಿ ಅವಧಿ, ಅವನ ವೈದ್ಯಕೀಯ ಸ್ಥಿತಿ, ಅವನು ಮಾಡಿದ ಅಪರಾಧದ ತೀವ್ರತೆ ಮತ್ತು ಗಂಭೀರತೆಯನ್ನು ಪರಿಗಣಿಸುತ್ತದೆ. ಅದೇ ರೀತಿ, ಶಿಕ್ಷೆಯನ್ನು ಅಮಾನತುಗೊಳಿಸುವ ಅವನ ಅರ್ಜಿಯನ್ನು ನಿರ್ಧರಿಸುವ ಉದ್ದೇಶವು ನ್ಯಾಯಾಲಯಗಳೆಡೆಗಿನ ಸಾರ್ವಜನಿಕರ ವಿಶ್ವಾಸದ ಮೇಲೆ ಉಂಟಾಗುವ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಪರಿಗಣಿಸಿದಾಗ ನ್ಯಾಯಾಲಯವು ಅರ್ಜಿದಾರರ ಅರ್ಜಿಯಲ್ಲಿ ಯಾವುದೇ ಅರ್ಹತೆಯನ್ನು ಕಂಡಿಲ್ಲ ಹಾಗೂ ಈ ಹಂತದಲ್ಲಿ ಅದನ್ನು ಅನುಮತಿಸಲು ಒಲವು ತೋರುವುದಿಲ್ಲ," ಎಂದು ಮನವಿಯನ್ನು ತಿರಸ್ಕರಿಸುವ ಆದೇಶದಲ್ಲಿ ನ್ಯಾಯಮೂರ್ತಿ ಹೇಳಿದರು.

Justice Swarana Kanta Sharma

ಜೈದೀಪ್ ಸಿಂಗ್ ಸೆಂಗರ್ ಬಿಜೆಪಿ ಮಾಜಿ ನಾಯಕ ಕುಲದೀಪ್ ಸಿಂಗ್ ಸೆಂಗರ್ ಅವರ ಸಹೋದರ. ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ 17 ವರ್ಷದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಎಸಗಲಾಗಿತ್ತು. ಸಂತ್ರಸ್ತೆಯ ತಂದೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಜೈದೀಪ್ ದೋಷಿ ಎಂದು ಸಾಬೀತಾಗಿ, ಶಿಕ್ಷೆಗೆ ಗುರಿಯಾಗಿದ್ದಾನೆ. ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗರ್ 2019 ರ ಡಿಸೆಂಬರ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಮಾರ್ಚ್ 2020ರಲ್ಲಿ, ವಿಚಾರಣಾಧೀನ ನ್ಯಾಯಾಲಯವು ಸೆಂಗರ್ ಸಹೋದರರು ಸೇರಿದಂತೆ ಹಲವರನ್ನು ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿಗೆ ಕಾರಣವಾದ ಕೊಲೆಗೆ ಸಮವಲ್ಲದ ನರಹತ್ಯೆಗಾಗಿ ತಪ್ಪಿತಸ್ಥರೆಂದು ಘೋಷಿಸಿತ್ತು.

ಆರೋಪಿ ಜೈದೀಪ್‌ ಸೆಂಗರ್‌ ಪ್ರಕರಣದಲ್ಲಿ ಕ್ರೂರ ವರ್ತನೆಯನ್ನು ತೋರಿದ್ದರ ಬಗ್ಗೆ ವಿಚಾರಣಾ ನ್ಯಾಯಾಲಯವು ದಾಖಲಿಸಿತ್ತು. ಸಂತ್ರಸ್ತೆಯ ತಂದೆಯನ್ನು ಥಳಿಸುವ ಕ್ರೂರ ಆನಂದವನ್ನು ಜೈದೀಪ್ ಸಿಂಗ್ ಸೆಂಗರ್ ಆನಂದಿಸಿದ್ದಾನೆ. ಅಲ್ಲದೆ, ಆತನ ನಾಯಕತ್ವದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ ಎನ್ನುವುದನ್ನು ನ್ಯಾಯಾಲಯವು ದಾಖಲಿಸಿತ್ತು.

ತನಗೆ ಬಾಯಿಯ ಕ್ಯಾನ್ಸರ್ ಇದ್ದು ಶಸ್ತ್ರಚಿಕಿತ್ಸೆಯ ನಂತರವೂ ತನ್ನ ಸ್ಥಿತಿ ಕೆಟ್ಟದಾಗಿದೆ ಎಂದು ವಾದಿಸಿ ಸೆಂಗರ್ ತನ್ನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದನು. ತನಗೆ ಫಿಸಿಯೋಥೆರಪಿ ಅಗತ್ಯವಿದ್ದು ಅದು ಜೈಲಿನಲ್ಲಿ ಲಭ್ಯವಿಲ್ಲದ ಎಂದು ವಾದಿಸಿದ್ದ.

ಸೆಂಗರ್ ಪರ ಹಾಜರಾದ ವಕೀಲರು, ಹತ್ತು ವರ್ಷಗಳ ಶಿಕ್ಷೆಯಲ್ಲಿ ಅವರು ಈಗಾಗಲೇ ಮೂರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಇತರೆ ಐವರು ಆರೋಪಿಗಳ ಶಿಕ್ಷೆಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ವಾದಿಸಿದ್ದರು.

ನ್ಯಾಯಾಲಯವು ಈ ವಾದಗಳನ್ನು ತಿರಸ್ಕರಿಸಿತು ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಿದ ಅಪರಾಧಿಗಳು ಒಟ್ಟು ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಹೇಳಿತು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸಿದ್ಧಪಡಿಸಿದ ವರದಿಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಶರ್ಮಾ ಅವರು ಸೆಂಗರ್ ವೈದ್ಯಕೀಯ ಸ್ಥಿತಿಯು ಜೈಲಿನಲ್ಲಿ ಅವರಿಗೆ ನೀಡಲಾದ ಶಿಕ್ಷೆಯನ್ನು ಅನುಭವಿಸಲು ಸಾಧ್ಯವಿಲ್ಲದ ಸ್ವರೂಪದಲ್ಲಿಲ್ಲ ಎಂದು ತೀರ್ಮಾನಿಸಿದೆ. "ಅದರಂತೆ, ಪ್ರಸ್ತುತ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಆದೇಶಿಸಿದರು.

2017ರ ಜೂನ್ 11ರಿಂದ 20ರ ನಡುವೆ ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯನ್ನು ಕುಲದೀಪ್ ಸಿಂಗ್ ಸೆಂಗರ್ ಅಪಹರಿಸಿ ಅತ್ಯಾಚಾರ ಎಸಗಿದ್ದ. ನಂತರ ಆಕೆಯನ್ನು ₹ 60,000ಕ್ಕೆ ಮಾರಾಟ ಮಾಡಲಾಗಿತ್ತು. ತದನಂತರ ಆಕೆಯನ್ನು ಮಾಖಿ ಪೊಲೀಸ್ ಠಾಣೆಯ ಪೊಲೀಸರು ರಕ್ಷಿಸಿದ್ದರು. ಆದರೆ, ಘಟನೆಯ ಬಗ್ಗೆ ಬಾಯಿಬಿಡದಂತೆ ಸೆಂಗರ್ ಪೊಲೀಸ್ ಅಧಿಕಾರಿಗಳ ಮುಖೇನ ನಿರಂತರವಾಗಿ ಸಂತ್ರಸ್ತೆ ಮತ್ತವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದ. ಅಂತಿಮವಾಗಿ ಸೆಂಗರ್ ವಿರುದ್ಧ ಎಫ್ಐಆರ್ ದಾಖಲಿಸಿ, ಅಲಹಾಬಾದ್ ಹೈಕೋರ್ಟ್ ಹೊರಡಿಸಿದ ಆದೇಶಕ್ಕೆ ಅನುಸಾರವಾಗಿ ಬಂಧಿಸಲಾಗಿತ್ತು.

[ತೀರ್ಪು ಓದಿ]

Jaideep Singh Senger @ Atul Singh v CBI.pdf
Preview