Allahabad High Court
Allahabad High Court 
ಸುದ್ದಿಗಳು

ರೈತರಿಂದ ದುಬಾರಿ ಮೊತ್ತದ ವೈಯಕ್ತಿಕ ಬಾಂಡ್ ಷರತ್ತು ಹಿಂಪಡೆದ ಉತ್ತರಪ್ರದೇಶ ಸರ್ಕಾರ

Bar & Bench

ರೈತರ ಮೇಲೆ 50,000 ದಿಂದ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಬಾಂಡ್‌ ವಿಧಿಸುವ ಎಲ್ಲಾ ಷರತ್ತುಗಳನ್ನು ಹಿಂಪಡೆಯುವುದಾಗಿ ಉತ್ತರಪ್ರದೇಶ ಸರ್ಕಾರ ಮಂಗಳವಾರ ಅಲಾಹಾಬಾದ್‌ ಹೈಕೋರ್ಟ್‌ಗೆ ಮಾಹಿತಿ ನೀಡಿತು. ಅರ್ಜಿಯನ್ನು ವಿಲೇವಾರಿ ಮಾಡಿದ ಹೈಕೋರ್ಟ್‌ “ಆದೇಶ ನೀಡುವಾಗ ಜಾಗರೂಕವಾಗಿರಬೇಕು,” ಎಂದು ಸೀತಾಪುರದ ಜಿಲ್ಲಾ ದಂಡಾಧಿಕಾರಿ ಮತ್ತ ಉಪ ವಿಭಾಗೀಯ ದಂಡಾಧಿಕಾರಿಗಳಿಗೆ ಬುದ್ಧಿ ಹೇಳಿತು.

ಜನವರಿ 19ರಂದು ವಿವಿಧ ರೈತರಿಗೆ ಸಿಆರ್‌ಪಿಸಿ ಸೆಕ್ಷನ್‌ 111ರ ಅಡಿ ನೀಡಲಾಗಿದ್ದ ವಿವಿಧ ನೋಟಿಸ್‌ಗಳನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನುನ್ಯಾಯಮೂರ್ತಿಗಳಾದ ರಮೇಶ್ ಸಿಂಘಾ ಮತ್ತು ರಾಜೀವ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ದುಬಾರಿ ಮೊತ್ತದ ವೈಯಕ್ತಿಕ ಬಾಂಡ್‌ ಕೇಳಿದ್ದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವನ್ನು ಈ ಹಿಂದಿನ ವಿಚಾರಣೆ ವೇಳೆಯೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.

ಶಾಂತಿ ಭಂಗ ಮತ್ತು ಅಡಚಣೆ ಉಂಟು ಮಾಡುವ ಸಂಭವ ಇಲ್ಲದಿರುವುದರಿಂದ 162 ಜನರಿಗೆ ನೋಟಿಸ್ ನೀಡಲಾಗಿದ್ದರೂ ಅವರ ವಿರುದ್ಧದ ತನಿಖೆಯನ್ನು ಕೈಬಿಡಲಾಗಿದೆ ಎಂದು ಹೆಚ್ಚುವರಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ ಕೆ ಶಾ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ವಿಲೇವಾರಿ ಮಾಡಿತು.

ಸಾಮಾಜಿಕ ಕಾರ್ಯಕರ್ತೆ ಅರುಂಧತಿ ಧುರು ಅವರ ಪರವಾಗಿ ವಕೀಲರಾದ ಇಶಾನ್ ಬಾಗೆಲ್ ಮತ್ತು ವೀಣಾ ವಿಜಯನ್ ರಾಜೇಸ್ ಅವರು ವಾದ ಮಂಡಿಸಿದರು. ಎಜಿಎ ಅನುರಾಗ್‌ ವರ್ಮಾ ಅವರು ಶಾ ಅವರಿಗೆ ವಿಚಾರಣೆ ವೇಳೆ ಸಹಾಯ ಮಾಡಿದರು.