ಮಹಾರಾಷ್ಟ್ರದ ಪುರಸಭೆಯ ನಾಮಫಲಕದಲ್ಲಿ ಉರ್ದು ಬಳಸಿರುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ [ಶ್ರೀಮತಿ ವರ್ಷತಾಯಿ ಶ್ರೀ ಸಂಜಯ್ ಬಗಾಡೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಸಂವಿಧಾನದ ಅಡಿಯಲ್ಲಿ ಉರ್ದು ಮತ್ತು ಮರಾಠಿ ಭಾಷೆಗಳಿಗೆ ಸಮಾನ ಸ್ಥಾನಮಾನವಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ , ಮರಾಠಿ ಮಾತ್ರ ಬಳಸಬೇಕು ಎಂಬ ವಾದವನ್ನು ತಿರಸ್ಕರಿಸಿತು.
ಆ ಮೂಲಕ ಪಾತೂರು ಪುರಸಭೆಯ ನಾಮಫಲಕದಲ್ಲಿ ಉರ್ದು ಭಾಷೆ ಬಳಸುವುದನ್ನು ಪ್ರಶ್ನಿಸಿ ಪಾತೂರು ಪಟ್ಟಣದ ಮಾಜಿ ಕೌನ್ಸಿಲರ್ ವರ್ಷತಾಯಿ ಸಂಜಯ್ ಬಗಾಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.
ಬಗಾಡೆ ಅವರ ಮನವಿಯನ್ನು 2020ರಲ್ಲಿ ಸ್ಥಳೀಯಾಡಳಿತ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಯೂ ಮನವಿ ತಿರಸ್ಕೃತವಾಗಿದ್ದರಿಂದ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು
ಉರ್ದು ಭಾರತೀಯ ಮೂಲದ್ದಾಗಿದ್ದರೂ ಮುಸ್ಲಿಮರೊಂದಿಗೆ ತಳಕು ಹಾಕಿರುವುದು ವಾಸ್ತವಕ್ಕೆ ದೂರವಾದ ಸಂಗತಿ.
ಹಿಂದಿ ಮತ್ತು ಉರ್ದುವಿನ ಮೇಳೈಸುವಿಕೆಯು ಈ ಎರಡೂ ಭಾಷೆಗಳಲ್ಲಿರುವ ಸಂಪ್ರದಾಯವಾದಿ ಮನಸ್ಥಿತಿಯವರಿಂದಾಗಿ ಮುಂದುವರೆಯಲಿಲ್ಲ. ಇದರಿಂದಾಗಿ ಹಿಂದಿಯು ಹೆಚ್ಚು ಸಂಸ್ಕೃತೀಕರಣಗೊಂಡರೆ, ಉರ್ದು ಹೆಚ್ಚು ಪರ್ಶಿಯನೀಕರಣಗೊಂಡಿತು.
ಹಿಂದಿಯನ್ನು ಹಿಂದೂಗಳೊಂದಿಗೆ; ಉರ್ದುವನ್ನು ಮುಸ್ಲಿಮರೊಂದಿಗೆ ನಂಟು ಕಲ್ಪಿಸಿರುವುದು ವಸಾಹತುಶಾಹಿ ಶಕ್ತಿಗಳು.
ಈ ರೀತಿಯ ವಿಷಾದನೀಯ ಭೇದ ವಾಸ್ತವಿಕತೆಯಿಂದ, ವಿವಿಧತೆಯಲ್ಲಿ ಏಕತೆಯಿಂದ ಹಾಗೂ ವಿಶ್ವ ಭ್ರಾತೃತ್ವದಿಂದ ವಿಮುಖಗೊಳಿಸಿದೆ.
ಉರ್ದು ವಿದೇಶದ ಭಾಷೆಯಲ್ಲ. ಬದಲಿಗೆ ಅದರ ಬೇರುಗಳು ಭಾರತದಲ್ಲಿದ್ದು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಅದು ಸಂಬಂಧಿಸಿಲ್ಲ.
ಉರ್ದು ಭಾಷೆ ಭಾರತಕ್ಕೆ ಅನ್ಯವಾಗಿದೆ ಎಂಬ ತಪ್ಪು ಕಲ್ಪನೆಯಿಂದ ಉರ್ದು ವಿರುದ್ಧದ ಪೂರ್ವಾಗ್ರಹ ಹುಟ್ಟಿಕೊಂಡಿದೆ. ಮರಾಠಿ ಮತ್ತು ಹಿಂದಿಯಂತೆ ಉರ್ದು ಕೂಡ ಇಂಡೋ-ಆರ್ಯನ್ ಭಾಷೆಯಾಗಿರುವುದರಿಂದ ನಾವು ಭಯಪಡುತ್ತಿರುವ ಈ ಅಭಿಪ್ರಾಯ ತಪ್ಪು.
ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ತಮ್ಮೊಳಗೆ ಸಂವಹನ ನಡೆಸಲು ಬಯಸುವ ವಿಭಿನ್ನ ಸಾಂಸ್ಕೃತಿಕ ಪರಿಸರಕ್ಕೆ ಸೇರಿದ ಜನರ ಅಗತ್ಯದಿಂದಾಗಿ ಉರ್ದು ಭಾರತದಲ್ಲಿ ಅಭಿವೃದ್ಧಿ ಹೊಂದಿತು ಮತ್ತು ಪ್ರವರ್ಧಮಾನಕ್ಕೆ ಬಂದಿತು.
ಶತಮಾನಗಳ ಕಾಲ ಬೆಳೆಯುತ್ತ ಬಂದ ಇದು ಅನೇಕ ಕವಿಗಳ ನೆಚ್ಚಿನ ಭಾಷೆಯಾಯಿತು.
ಸಂವಿಧಾನದ VIIIನೇ ಪರಿಚ್ಛೇದದಡಿ ಮರಾಠಿ ಮತ್ತು ಉರ್ದು ಸಮಾನ ಸ್ಥಾನಮಾನ ಹೊಂದಿವೆ.
ಅರ್ಜಿಯನ್ನು ಕೌನ್ಸಿಲರ್ ಸಲ್ಲಿಸಿದ್ದಾರೆಯೇ ಹೊರತು ಮಹಾರಾಷ್ಟ್ರ ಮುನ್ಸಿಪಲ್ ಕೌನ್ಸಿಲ್ ಕಾಯ್ದೆಯಡಿಯಲ್ಲಿ ಆಕ್ಷೇಪಿಸಲು ಕಾನೂನುಬದ್ಧ ಅಧಿಕಾರ ಇರುವ ಮುಖ್ಯ ಅಧಿಕಾರಿಯಲ್ಲ.
ಉರ್ದು ಭಾಷೆಯಲ್ಲಿ ಫಲಕಗಳನ್ನು ಹಾಕುವುದು ರಾಜಕೀಯ ಅಥವಾ ಧರ್ಮದ ವಿಷಯವಲ್ಲ, ಬದಲಾಗಿ ಸಾರ್ವಜನಿಕ ಸಂವಹನ ಮತ್ತು ಪ್ರವೇಶಾತಿ ವಿಚಾರವಾಗಿದೆ.
ಭಾಷೆ ಧರ್ಮವನ್ನು ಪ್ರತಿನಿಧಿಸುವುದಿಲ್ಲ; ಬದಲಾಗಿ ಅದು ಒಂದು ಸಮುದಾಯ, ಪ್ರದೇಶ ಅಥವಾ ಜನರಿಗೆ ಸೇರಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಭಾರತೀಯ ಕಾನೂನು ಕ್ಷೇತ್ರ ಮತ್ತು ನ್ಯಾಯಾಲಯದ ಭಾಷೆಯಲ್ಲಿಯೂ ಉರ್ದು ಪ್ರಭಾವ ದೊಡ್ಡದು.
ಫಲಕಗಳಲ್ಲಿ ಉರ್ದುವಿನ ಅಸ್ತಿತ್ವ ಶಾಸನಬದ್ಧ ಇಲ್ಲವೇ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುವುದಿಲ್ಲ.
ಭಾರತದ ಭಾಷಾ ವೈವಿಧ್ಯದ ಜೊತೆಗೆ ಪ್ರಾಮಾಣಿಕವಾಗಿ ತೊಡಗಿಕೊಳ್ಳುವುದರೊಂದಿಗೆ ಭಾಷೆಗಳ ವಿರುದ್ಧದ ವೈಯಕ್ತಿಕ ತಪ್ಪು ಕಲ್ಪನೆಗಳು ಅಥವಾ ಪೂರ್ವಾಗ್ರಹಗಳನ್ನು ಎದುರಿಸುವ ಮತ್ತು ಮರುಮೌಲ್ಯಮಾಪನ ಮಾಡುವ ಅಗತ್ಯವಿದೆ.