ಉತ್ತರಾಖಂಡ ಶಾಸಕ ಕುನ್ವರ್ ಪ್ರಣವ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ವಾಹನದ ಮೇಲೆ ಸೈರನ್ ಬಳಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ರಾಜ್ಯ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.
2017ರಿಂದ ಶಾಸಕರು ಮತ್ತು ಅವರ ಕುಟುಂಬದವರು ಸೈರನ್ ಬಳಸುತ್ತಿದ್ದರೂ ಚುನಾವಣೆ ಹೊಸ್ತಿಲಿನಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಇದು ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ನಾರಾಯಣ್ ಸಿಂಗ್ ಧನಿಕ್ ಅವರಿದ್ದ ವಿಭಾಗೀಯ ಪೀಠ ಅರ್ಜಿದಾರ ಉಮೇಶ್ ಕುಮಾರ್ ಅವರಿಗೆ ₹ 50,000 ದಂಡ ವಿಧಿಸಿತು.
ಎರಡು ವಾರದೊಳಗೆ ದಂಡದ ಮೊತ್ತ ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ತಿಳಿಸಲು ನ್ಯಾಯಾಲಯ ನ್ಯಾಯಾಂಗ ವಿಭಾಗದ ರಿಜಸ್ಟ್ರಾರ್ ಅವರಿಗೆ ನಿರ್ದೇಶನ ನೀಡಿತು.