A1
A1
ಸುದ್ದಿಗಳು

ಭ್ರಷ್ಟಾಚಾರ, ಮಾನವ ಹಕ್ಕುಗಳ ಉಲ್ಲಂಘನೆ ಆರೋಪದ ಮಾಹಿತಿಯನ್ನು ವಿಚಕ್ಷಣಾ ಇಲಾಖೆ ನಿರಾಕರಿಸುವಂತಿಲ್ಲ: ಒಡಿಶಾ ಹೈಕೋರ್ಟ್

Bar & Bench

ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪ ಕುರಿತಂತೆ ಸಾಮಾನ್ಯ ಆಡಳಿತ (ವಿಜಿಲೆನ್ಸ್) ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಮಾಹಿತಿ ಹಕ್ಕು ನಿಯಮಗಳಿಗೆ (ಆರ್‌ಟಿಐ) ವಿರುದ್ಧವಾಗಿದೆ. ಹೀಗಾಗಿ ಇದು ಸಮರ್ಥನೀಯವಲ್ಲ ಎಂದು ಒಡಿಶಾ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ [ಸುಭಾಷ್ ಮೊಹಾಪಾತ್ರ ಮತ್ತು ಒಡಿಶಾ ಸರ್ಕಾರ ನಡುವಣ ಪ್ರಕರಣ].

ರಾಜ್ಯ ವಿಚಕ್ಷಣಾ ಇಲಾಖೆ ಮತ್ತು ಅದರ ಸಂಸ್ಥೆಗಳಿಗೆ ಆರ್‌ಟಿಐ ಕಾಯಿದೆಯ ಯಾವುದೇ ನಿಯಮ ಅನ್ವಯವಾಗದು ಎಂದು ಒಡಿಶಾ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಮತ್ತು ನ್ಯಾಯಮೂರ್ತಿ ಆರ್‌ ಕೆ ಪಟ್ನಾಯಕ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಮಾಹಿತಿ ಬಹಿರಂಗಪಡಿಸುವುದು ಸಾಮಾನ್ಯ ಸಂಗತಿಯಾಗಬೇಕು ಅದನ್ನು ತಡೆಹಿಡಿಯುವುದು ಅಪವಾದವಾಗಬೇಕು ಎಂಬ ಆರ್‌ಟಿಐ ಕಾಯಿದೆ ಉದ್ದೇಶದ ಬಗ್ಗೆ ನ್ಯಾಯಾಲಯ ಗಮನ ಸೆಳೆಯಿತು. ಇನ್ನು ನಾಲ್ಕು ವಾರಗಳ ಒಳಗಾಗಿ ಸ್ಪಷ್ಟೀಕರಣ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಪೀಠ ಸರ್ಕಾರಕ್ಕೆ ನಿರ್ದೇಶಿಸಿತು.

ಅರ್ಜಿದಾರರು ಪ್ರಶ್ನಿಸಿರುವ ಅಧಿಸೂಚನೆಯನ್ನು ಸೆಕ್ಷನ್ 24(4)ರ ಅಡಿಯಲ್ಲಿ ಹೊರಡಿಸಲಾಗಿದ್ದು, ಇದು ಆರ್‌ಟಿಐ ಕಾಯಿದೆ ವ್ಯಾಪ್ತಿಗೆ ಬರದಂತಹ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳನ್ನು ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.