ಸುದ್ದಿಗಳು

ಪ್ರಕರಣಗಳನ್ನೆಲ್ಲಾ ಮುಂದೂಡಲು ವಕೀಲರು ಕೇಳಿದರೆ ಬೆಳಗಿನಿಂದಲೂ ಇಲ್ಲಿ ಕುಳಿತು ಏನು ಉಪಯೋಗ? ನ್ಯಾ. ಖಾನ್ವಿಲ್ಕರ್ ಬೇಸರ

Bar & Bench

ಪ್ರಕರಣಗಳನ್ನು ಆಗಾಗ್ಗೆ ಮುಂದೂಡುವಂತೆ ಮತ್ತು ಮರುನಿಗದಿಪಡಿಸುವಂತೆ ಕೋರುವ ವಕೀಲರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್‌ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಗುರುವಾರ ನ್ಯಾಯಮೂರ್ತಿಗಳೆದುರು ಪಟ್ಟಿ ಮಾಡಲಾದ ಬಹುತೇಕ ಪ್ರಕರಣಗಳನ್ನು ವಕೀಲರು ಮುಂದೂಡುವಂತೆ ಕೋರಿದ್ದರು. ಇದರಿಂದ ಬೇಸರಗೊಂಡ ನ್ಯಾ. ಖಾನ್ವಿಲ್ಕರ್‌ , “ವಕೀಲರು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದರು.

“ ಬೆಳಿಗ್ಗೆ 10.30 ರಿಂದ ಇಲ್ಲಿಯೇ ಕುಳಿತಿದ್ದೇವೆ. ಏನೂ ಮಾಡಿಲ್ಲ. ಹಾಗಾದರೆ ಇಲ್ಲಿದ್ದು ಏನುಪಯೋಗ? ಪ್ರತಿ ಪ್ರಕರಣದಲ್ಲೂ ಇಂತಹ ವಿನಂತಿ ಇರುತ್ತದೆ. ವಕೀಲ ಸಮುದಾಯ ಇದನ್ನು ಈಗಲೇ ಅರಿತುಕೊಳ್ಳಬೇಕು” ಎಂದರು.

ಸುಪ್ರೀಂ ಕೋರ್ಟ್ ವಕೀಲರರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಅವರಿಗೂ ನ್ಯಾಯಾಲಯ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿತು. ನಮ್ಮಷ್ಟಕ್ಕೆ ನಾವೇ ಅಡ್ಜಸ್ಟ್‌ ಮಾಡಿಕೊಳ್ಳುವುದು ಇನ್ನೆಷ್ಟು ಕಾಲ ಮುಂದುವರೆಯಬೇಕು? ಬೆಳಿಗ್ಗೆಯಿಂದಲೂ ಇದೇ ನಡೆಯುತ್ತಿದೆ” ಎಂದು ನ್ಯಾಯಮೂರ್ತಿಗಳು ಸಿಟ್ಟಾದರು. ಆಗ ಸಿಂಗ್‌ ಅವರು "ಒಬ್ಬ ವಕೀಲರು ಲಭ್ಯವಿಲ್ಲದಿದ್ದರೆ ಇನ್ನೊಬ್ಬ ವಕೀಲರು ವಾದಿಸುವ ವ್ಯವಸ್ಥೆ ನಿಜವಾಗಿಯೂ ಇರಬೇಕು" ಎಂದು ಸಲಹೆ ನೀಡಿದರು.

ವಿದೇಶಿ ತಬ್ಲೀಘಿ ಜಮಾತ್ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸುವ ಮತ್ತು ಅಂತಹ ವಿದೇಶಿಗರು ವೀಸಾ ನಿರಾಕರಣೆಯನ್ನು ಪ್ರಶ್ನಿಸಬಹುದೇ ಎನ್ನುವ ವಿಷಯದ ಕುರಿತಾದ ಪ್ರಕರಣವನ್ನು ಆಲಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅಸಮಾಧಾನ ಹೊರಹಾಕಿದರು.