Karnataka HC and Minister R Ashok
Karnataka HC and Minister R Ashok 
ಸುದ್ದಿಗಳು

[ಮೈದಾನ ವಿವಾದ] ಸಚಿವ ಅಶೋಕ್‌ ಕುಮ್ಮಕ್ಕಿನ ಬಗ್ಗೆ ಪ್ರಸ್ತಾಪ; ಅವರನ್ನು ಪಕ್ಷಕಾರನ್ನಾಗಿಸಬೇಕಲ್ಲವೇ ಎಂದ ಹೈಕೋರ್ಟ್‌

Bar & Bench

ಪದ್ಮನಾಭನಗರ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಕಾರ್ಮೆಲ್‌ ಕನ್ನಡ ಶಾಲೆಗೆ ಅಂಟಿಕೊಂಡ ಮೂರು ಸಾವಿರ ಚದರಡಿಯ ಆಟದ ಮೈದಾನವನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕು ಎಂದು ಕೋರಿ ಬಿಡಿಎಗೆ (ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಬಿಬಿಎಂಪಿ ಬರೆದಿರುವ ಪತ್ರ ಮತ್ತು ಈ ಸಂಬಂಧದ ಪರಭಾರೆ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆ ನೀಡಿದೆ.

ಜಯನಗರ ಕೋ–ಆಪರೇಟಿವ್‌ ಹೌಸಿಂಗ್ ಸೊಸೈಟಿ ಲಿಮಿಟೆಡ್‌ ಕಾರ್ಯದರ್ಶಿ ಎಂ.ಶಿವಣ್ಣ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಈ ಆದೇಶ ಮಾಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್ ದಳವಾಯಿ ಅವರು “ಖಾಸಗಿ ಕನ್ನಡ ಮಾಧ್ಯಮ ಶಾಲೆಯಾದ ಕಾರ್ಮೆಲ್ ವಿದ್ಯಾಸಂಸ್ಥೆಯಲ್ಲಿ ಎಲ್‌ಕೆಜಿ ಯಿಂದ ಏಳನೇ ತರಗತಿಯವರಿಗೆ ಸುಮಾರು 400 ಮಕ್ಕಳು ಕಲಿಯುತ್ತಿದ್ದಾರೆ. 15 ಜನರ ಬೋಧಕ ವರ್ಗವಿದೆ. ಈಗ ಏಕಾಏಕಿ ಈ ಪ್ರದೇಶವನ್ನು ಬಿಡಿಎ ತನಗೆ ಹಸ್ತಾಂತರಿಸಬೇಕು ಎಂದು ಬಿಬಿಎಂಪಿ ಕೋರಿದೆ. ಈ ಕೋರಿಕೆಯ ಹಿಂದೆ ಸ್ಥಳೀಯ ಶಾಸಕರೂ ಆದ ಕಂದಾಯ ಸಚಿವ ಆರ್.ಅಶೋಕ್‌ ಅವರ ನೇರ ಕುಮ್ಮಕ್ಕು ಇದೆ. ಆದ್ದರಿಂದ, ಈ ಜಾಗದ ಪರಭಾರೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಪೀಠವು “ಹಾಗಾದರೆ ಸಚಿವ ಅಶೋಕ ಅವರನ್ನೂ ಇದರಲ್ಲಿ ಪಕ್ಷಕಾರನ್ನಾಗಿಸಬೇಕಲ್ಲವೇ” ಎಂದು ಪ್ರಶ್ನಿಸಿತು. ಇದಕ್ಕೆ ದಳವಾಯಿ ಅವರು “ಸಚಿವರು ಸೂಚನೆ ನೀಡಿರುವುದಕ್ಕೆ ದಾಖಲೆ ಇಲ್ಲ. ಆದ್ದರಿಂದ, ಅವರ ಬದಲಿಗೆ ಈಗಿರುವ ಪ್ರತಿವಾದಿಗಳಿಗೇ ಆದೇಶ ಮಾಡಬಹುದು” ಎಂದರು.

ಇದಕ್ಕೆ ಸಮ್ಮತಿಸಿದ ಪೀಠವು ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಬಿಡಿಎ ಸಹಾಯಕ ಕಾರ್ಯಪಾಲಕ ಎಂಜನಿಯರ್ ಮತ್ತು ಬಿಡಿಎ ಪ್ರದೇಶಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಬಿಬಿಎಂಪಿಯ 182ನೇ ವಾರ್ಡ್‌ನಲ್ಲಿ ಕಾರ್ಮೆಲ್‌ ಶಾಲೆ ನಡೆಸಲು ಬಿಡಿಎ ವತಿಯಿಂದ ಅನುಮತಿ ನೀಡಿದೆ. ಅನುಮತಿಯ ಅವಧಿ 2022ರ ಫೆಬ್ರವರಿಗೆ ಮುಕ್ತಾಯಗೊಂಡಿರುವುದರಿಂದ ಮುಂದಿನ ಅವಧಿಗೆ ವಿದ್ಯಾಸಂಸ್ಥೆ ನಡೆಸಲು ಅನುಮತಿ ನೀಡಬಾರದು ಎಂದು ಸ್ಥಳೀಯ ಶಾಸಕರೂ ಆದ ಸಚಿವರು ಸೂಚಿಸಿರುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಬಿಡಿಎಗೆ ಪತ್ರ ಬರೆದು ಮೈದಾನವನ್ನು ಹಸ್ತಾಂತರಿಸಲು ಕೋರಿದ್ದಾರೆ.

ಸಾರ್ವಜನಿಕರು ಹಾಗೂ ಪಾಲಿಕೆಯ ಆಸ್ತಿಯನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಅತ್ಯವಶ್ಯವಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಕಳೆದ ತಿಂಗಳ 10ರಂದು ಪತ್ರ ಬರೆದಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಕಂದಾಯ ಸಚಿವರ ಸೂಚನೆಯಂತೆ ಈ ಪ್ರದೇಶವನ್ನು ಪಾಲಿಕೆಗೆ ಹಸ್ತಾಂತರಿಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಇದನ್ನು ಆಧರಿಸಿ ಮುಂದುವರಿದ ಪ್ರಕ್ರಿಯೆಗಳನ್ನು ಪ್ರಶ್ನಿಸಿರುವ ಅರ್ಜಿದಾರರು, ‘ಪದ್ಮನಾಭನಗರ ಲೇಔಟ್‌ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೊಸೈಟಿ ಬಿಡಿಎ ವತಿಯಿಂದ ಅನುಮತಿ ಪಡೆದಿದೆ. ಈ ಅನುಮತಿಯನ್ನು 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಈ 30 ವರ್ಷಗಳ ಅನುಮತಿ ಮುಂದುವರಿಕೆ ಅಥವಾ ನವೀಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿರುವ ಮಧ್ಯದಲ್ಲೇ ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು, ಜಾಗ ಒಪ್ಪಿಸುವಂತೆ ಬಿಡಿಎ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಒತ್ತಡದ ಹಿಂದೆ ಸ್ಥಳೀಯ ಶಾಸಕರೂ ಆದ ಕಂದಾಯ ಸಚಿವ ಆರ್ ಅಶೋಕ್‌ ಅವರ ನೇರ ಹಸ್ತಕ್ಷೇಪ ಇದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.