Justice M Nagaprasanna and Karnataka HC 
ಸುದ್ದಿಗಳು

'ಭೋವಿ ನಿಗಮದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಏಕೆ ವಹಿಸಬಾರದು?' ಹೈಕೋರ್ಟ್‌

ಇದು ₹100 ಕೋಟಿಗೂ ಹೆಚ್ಚಿನ ಮೊತ್ತದ ಹಗರಣವಾಗಿದೆ. ತಪ್ಪಿತಸ್ಥರು ಒಂದೂವರೆ ವರ್ಷದಿಂದ ಹೊರಗಿದ್ದಾರೆ. ಸರ್ಕಾರ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ ಎಂದ ಹೈಕೋರ್ಟ್‌.

Bar & Bench

“ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ” ಎಂಬ ಅರ್ಜಿದಾರರ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್‌ “ಈ ಹಗರಣದ ತನಿಖೆಯನ್ನು ಸಿಬಿಐಗೆ ಏಕೆ ವಹಿಸಬಾರದು” ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಸಿದ್ದಾ‍ಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ತಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸುವಂತೆ ಕೋರಿ ನ್ಯೂ ಡ್ರೀಮ್ಸ್‌ ಎಂಟರ್‌ಪ್ರೈಸಸ್‌ ಮಾಲೀಕರಾದ ಎಂ ಯಶಸ್ವಿನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜೀವನ್‌ ಅವರು “ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆಯು ಪೂರ್ವಗ್ರಹ ಪೀಡಿತ ಭಾವನೆಯಿಂದ ಕೂಡಿದೆ. ಕಾರಣ ಎಫ್‌ಐಆರ್‌ ದಾಖಲಾಗಿ 20 ತಿಂಗಳು ಕಳೆದರೂ ಈತನಕ 1, 2, 3 ಮತ್ತು 5ನೇ ಅರೋಪಿಗಳನ್ನು ವಿಚಾರಣೆಗೆ ಕರೆದಿಲ್ಲ. ಆರೋಪಿಗಳು ಜಾಮೀನನ್ನೂ ಪಡೆದಿಲ್ಲ. ಹೀಗಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ” ಎಂದು ಆಕ್ಷೇಪಿಸಿದರು.

ಇದಕ್ಕೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ತನಿಖಾಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸಿದ್ದರು. ಆದರೆ, ಅವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದ ಕಾರಣ ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು “ಉಳಿದ ಆರೋಪಿಗಳನ್ನು ಏಕೆ ಬಿಟ್ಟಿದ್ದೀರಾ? ಜಾಮೀನು ಪಡೆಯದಿದ್ದರೂ ಅವರನ್ನು ಏಕೆ ಬಂಧಿಸಿಲ್ಲ. ಇಷ್ಟು ದೊಡ್ಡ ಮೊತ್ತದ ಹಗರಣ ನಡೆದಿದೆ ಎಂಬ ಆರೋಪ ಇರುವಾಗ ತನಿಖೆ ಯಾಕೆ ಬಸವನ ಹುಳವಿನಂತೆ ತೆವಳುತ್ತಿದೆ” ಎಂದು ಖಾರವಾಗಿ ಪ್ರಶ್ನಿಸಿತು.

“ಇದು ₹100 ಕೋಟಿಗೂ ಹೆಚ್ಚಿನ ಮೊತ್ತದ ಹಗರಣವಾಗಿದೆ. ತಪ್ಪಿತಸ್ಥರು ಒಂದೂವರೆ ವರ್ಷದಿಂದ ಹೊರಗಿದ್ದಾರೆ. ಸರ್ಕಾರ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ವಕೀಲೆ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಪೊಲೀಸ್‌ ಅಧಿಕಾರಿಯನ್ನು ಈತನಕ ಬಂಧಿಸಿಲ್ಲ. ಇದೇನಾ ರಾಜ್ಯ ಸರ್ಕಾರ ನಡೆಸುವ ತನಿಖೆ?” ಎಂದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಅಲ್ಲದೇ, ಸಿಬಿಐ ತನಿಖೆಗೆ ವಹಿಸಲು ಇದು ಅರ್ಹ ಪ್ರಕರಣ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿತು.