ಸುದ್ದಿಗಳು

ಬೆಳಗಾವಿಯಲ್ಲಿ ಇಂದಿನಿಂದ ವಿಧಾನ ಮಂಡಲ ಚಳಿಗಾಲದ ಅಧಿವೇಶನ: ಮತಾಂತರ ನಿಷೇಧ ಮಸೂದೆ ಮಂಡನೆಯ ಸುತ್ತ ಎಲ್ಲರ ಕಣ್ಣು

Bar & Bench

ಪರ- ವಿರೋಧದ ಚರ್ಚೆಗೆ ಕಾರಣವಾಗಿರುವ, ವಿವಾದವನ್ನೂ ಮೈಗಂಟಿಸಿಕೊಂಡಿರುವ ಮತಾಂತರ ನಿಷೇಧ ಮಸೂದೆ, ಇಂದಿನಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದ ಕೇಂದ್ರ ಬಿಂದುವಾಗಿದೆ.

ರಾಜ್ಯದ ಅಲ್ಲಲ್ಲಿ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ, ಅದಕ್ಕೆ ಸಾಮಾಜಿಕ, ರಾಜಕೀಯ ವಲಯದಲ್ಲಿ ಕೆಲ ತಿಂಗಳುಗಳಿಂದ ವ್ಯಕ್ತವಾದ ಪ್ರತಿರೋಧ ಹಾಗೂ ಆಡಳಿತಾರೂಢ ಪಕ್ಷದ ಕಾರ್ಯಸೂಚಿ ಅಂತಿಮವಾಗಿ ಮಸೂದೆಯನ್ನು ಅಧಿವೇಶನದ ಬಾಗಿಲಿಗೆ ತಂದು ನಿಲ್ಲಿಸಿದೆ ಎಂಬ ಮಾತುಗಳಿವೆ. ಇತ್ತ ಕಾಯಿದೆ ಜಾರಿಗೆ ತರುವ ಮೂಲಕ ವಿವಾಹ ನೋಂದಣಿ ಕಾಯಿದೆಯಂತೆ ಮತಾಂತರಕ್ಕೂ ನೋಂದಣಿ ಕಡ್ಡಾಯಗೊಳಿಸುವ ಚಿಂತನೆ ಇದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ. ಮಸೂದೆಯ ಪರವಾಗಿ ಸಚಿವ ಸಂಪುಟದಲ್ಲಿ ಉಗ್ರವಾಗಿ ಪ್ರತಿಪಾದನೆ ಮಾಡುವವರು ಇರುವಂತೆಯೇ, ಬಲವಂತದ ಮತಾಂತರದ ವಿರುದ್ಧ ಈಗಿರುವ ಕಾನೂನುಗಳನ್ನು ಪರಿಗಣಿಸಿ, ಅದನ್ನು ಹೇಗೆ ಬಲಪಡಿಸಬೇಕು ಎನ್ನುವ ನಿಟ್ಟಿನಲ್ಲಿ ನಿಧಾನವಾಗಿ ಹೆಜ್ಜೆ ಇಡಬೇಕು ಎನ್ನುವ ದನಿಯೂ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆದ ಬಳಿಕ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು ಎನ್ನುವ ಉತ್ತರ ನೀಡಿದ್ದಾರೆ.

ಇತ್ತ ಮಸೂದೆ ಬಗ್ಗೆ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಅಪಸ್ವರ ಎದ್ದಿದೆ. ಮುಖ್ಯವಾಗಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಯಿದೆ ಜಾರಿಗೆ ತರಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಬಿಜೆಪಿ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಪ್ರಸ್ತಾಪಿಸಿದ ನಂತರ ಕಳೆದ ಎರಡು ತಿಂಗಳಿನಲ್ಲಿ ಕ್ರೈಸ್ತ ಸಮುದಾಯದ ಮೇಲೆ ದಾಳಿಗಳು ಹೆಚ್ಚಾಗಿವೆ ಎಂದು ವಿವಿಧ ಸಾಮಾಜಿಕ ಸಂಸ್ಥೆಗಳ ಸತ್ಯಶೋಧನಾ ವರದಿ ಬಹಿರಂಗಪಡಿಸಿದೆ. ಕ್ರೈಸ್ತ ಸಮುದಾಯದ ಮೇಲೆ ಈ ವರ್ಷದ ಮೊದಲ 272 ದಿನಗಳಲ್ಲಿ ಇಂತಹ 27 ದಾಳಿಗಳು ನಡೆದಿದ್ದರೆ, ಅಕ್ಟೋಬರ್ ಮತ್ತು ನವೆಂಬರ್ ಮಧ್ಯದ ನಡುವೆ ಐದು ಘಟನೆಗಳು ನಡೆದಿವೆ ಎಂದು ವರದಿಯಾಗಿದೆ. ಮುಸ್ಲಿಂ ಹಾಗೂ ದಲಿತ ಸಮುದಾಯಗಳು ಕೂಡ ಸರ್ಕಾರದ ನಡೆಯನ್ನು ಗಮನಿಸುತ್ತಿವೆ.

ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ ಸೇರಿದಂತೆ ಕೆಲ ವಿರೋಧಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ. ಬಿಟ್‌ ಕಾಯಿನ್‌ ಹಗರಣ, ಕಮಿಷನ್‌ ದಂಧೆ, ಕೋವಿಡ್‌ ಪರಿಹಾರ ವಿಳಂಬ ಇತ್ಯಾದಿ ಅಸ್ತ್ರಗಳ ಜೊತೆಗೆ ವಿರೋಧಪಕ್ಷಗಳು ಈ ಮಸೂದೆಗೆ ಅಧಿವೇಶನದಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬ ಕುತೂಹಲವಿದೆ.