Karnataka High Court
Karnataka High Court 
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ಗೆ ಡಿ.19ರಿಂದ 31ರವರೆಗೆ ಚಳಿಗಾಲದ ರಜೆ; ರಜಾಕಾಲೀನ ಪೀಠಗಳಿಂದ ತುರ್ತು ಅರ್ಜಿಗಳ ವಿಚಾರಣೆ

Bar & Bench

ಕರ್ನಾಟಕ ಹೈಕೋರ್ಟ್‌ಗೆ ಡಿಸೆಂಬರ್‌ 19ರಿಂದ (ಸೋಮವಾರ) ಡಿಸೆಂಬರ್‌ 31ರವರೆಗೆ (ಶನಿವಾರ) ಚಳಿಗಾಲದ ರಜೆ ಇರಲಿದೆ. ವಾಸ್ತವದಲ್ಲಿ ನಾಳೆಯಿಂದ ಜನವರಿ 1ರವರೆಗೆ ರಜಾಕಾಲೀನ ಪೀಠಗಳನ್ನು ಹೊರತುಪಡಿಸಿ ಹೈಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ಇರುವುದಿಲ್ಲ.

ಚಳಿಗಾಲದ ರಜೆಯಲ್ಲಿ ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳು ಭೌತಿಕ ವಿಚಾರಣೆ ನಡೆಸುವುದಿಲ್ಲ. ವರ್ಚುವಲ್‌ ವಿಧಾನದ ಮೂಲಕ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ. ಬೆಂಗಳೂರು ಪೀಠದಲ್ಲಿ ಹೈಬ್ರಿಡ್‌ ವಿಧಾನದಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ಕಾಯಿದೆ ಸೆಕ್ಷನ್‌ 12ರ ಅಡಿ ಅಧಿಕಾರ ಬಳಸಿ, ಮುಖ್ಯ ನ್ಯಾಯಮೂರ್ತಿ ಅವರು ಬೆಂಗಳೂರಿನ ಪ್ರಧಾನ ಪೀಠದಿಂದ ರಜಾಕಾಲೀನ ಪೀಠದಲ್ಲಿ ಡಿಸೆಂಬರ್‌ 20, 22, 27 ಮತ್ತು 29ರಂದು ಕರ್ತವ್ಯ ನಿರ್ಹಿಸಲು ಕೆಳಗಿನ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದಾರೆ.

ಡಿಸೆಂಬರ್‌ 20ರಂದು ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ ಪ್ರಸಾದ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು 8ನೇ ಕೊಠಡಿಯಲ್ಲಿ ವಿಚಾರಣೆ ನಡೆಸಲಿದೆ. ನ್ಯಾ. ಅನಂತ್‌ ರಾಮನಾಥ್‌ ಹೆಗ್ಡೆ, ನ್ಯಾ. ಎಸ್‌. ರಾಚಯ್ಯ ಮತ್ತು ನ್ಯಾ. ಸಿ ಎಂ ಪೂಣಚ್ಚ ಅವರ ನೇತೃತ್ವದ ಏಸಕದಸ್ಯ ಪೀಠಗಳು ಕ್ರಮವಾಗಿ 9, 10 ಮತ್ತು 11ನೇ ಕೊಠಡಿಗಳಲ್ಲಿ ವಿಚಾರಣೆ ನಡೆಸಲಿವೆ.

ಡಿಸೆಂಬರ್‌ 22ರಂದು ನ್ಯಾಯಮೂರ್ತಿಗಳಾದ ಎಸ್‌ ಆರ್‌ ಕೃಷ್ಣ ಕುಮಾರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ, ನ್ಯಾ. ಎಸ್‌ ರಾಚಯ್ಯ, ನ್ಯಾ. ಕೆ ಎಸ್‌ ಹೇಮಲೇಖಾ ಮತ್ತು ನ್ಯಾ. ಸಿ ಎಂ ಪೂಣಚ್ಚ ಅವರ ಪೀಠಗಳು ಕರ್ತವ್ಯ ನಿರ್ವಹಿಸಲಿವೆ.

ಡಿಸೆಂಬರ್‌ 27ರಂದು ನ್ಯಾಯಮೂರ್ತಿಗಳಾದ ಎಸ್‌ ಸುನಿಲ್‌ ದತ್‌ ಯಾದವ್‌ ಮತ್ತು ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ಹಾಗೂ ನ್ಯಾಯಮೂರ್ತಿಗಳಾದ ಇ ಎಸ್‌ ಇಂದಿರೇಶ್‌, ಎಂ ಜಿ ಉಮಾ, ಅನಿಲ್‌ ಬಿ. ಕಟ್ಟಿ ಅವರು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಡಿಸೆಂಬರ್‌ 29ರಂದು ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌ ಮತ್ತು ಟಿ ಜಿ ಶಿವಶಂಕರೇ ಗೌಡ ಅವರ ವಿಭಾಗೀಯ ಪೀಠ ಹಾಗೂ ನ್ಯಾಯಮೂರ್ತಿಗಳಾದ ಸಚಿನ್‌ ಶಂಕರ್‌ ಮಗದುಮ್‌, ಅನಿಲ್‌ ಬಿ. ಕಟ್ಟಿ ಹಾಗೂ ಸಿ ಎಂ ಜೋಶಿ ಅವರ ನೇತೃತ್ವದ ಏಕಸದಸ್ಯ ಪೀಠಗಳು ಪ್ರಕರಣಗ ವಿಚಾರಣೆ ನಡೆಸಲಿವೆ ಎಂದು ವಿವರಿಸಲಾಗಿದೆ.

ತಡೆಯಾಜ್ಞೆ, ಮಧ್ಯಂತರ ನಿರ್ದೇಶನ, ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಪ್ರಕರಣಗಳನ್ನು ಮಾತ್ರ ರಜಾಕಾಲೀನ ಪೀಠಗಳು ವಿಚಾರಣೆ ನಡೆಸಲಿವೆ. ಮೇಲ್ಮನವಿ, ಅರ್ಜಿ ಅಥವಾ ಮನವಿ ಮತ್ತು ಬೇರಾವುದೇ ಸಿವಿಲ್‌ ರೂಪದ ಪ್ರಕರಣಗಳನ್ನು ನ್ಯಾಯಾಲಯ ವಿಚಾರಣೆ ನಡೆಸುವುದಿಲ್ಲ.