ಕೇಂದ್ರ ಪರಿಹಾರ ಸಮಿತಿಗೆ ₹80 ಕೋಟಿ ಭಿಕ್ಷುಕರ ಸೆಸ್ ಬಾಕಿ; ಜಮೆ ಕುರಿತು ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿಗೆ ಸೂಚನೆ

"ಭಿಕ್ಷುಕರ ಸೆಸ್ ಹಣವನ್ನು ನೀವೇನು ಪಾಲಿಕೆ ಕಚೇರಿಯಲ್ಲಿ ಇಟ್ಟುಕೊಂಡಿರಲಿಲ್ಲ ಅಲ್ವಾ? ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುತ್ತೀರಿ. ಆ ಮೂಲಕ ಹಣವನ್ನು ಪಾಲಿಕೆ ‘ದುಡಿಸಿಕೊಂಡಿದೆ’, ಆ ಹಣದಿಂದ ‘ಲಾಭ’ ಪಡೆದುಕೊಂಡಿದೆ" ಎಂದ ಪೀಠ.
Karnataka High Court
Karnataka High Court

ಬಾಕಿ ಉಳಿದಿರುವ ₹80 ಕೋಟಿ ಭಿಕ್ಷುಕರ ಸೆಸ್ ಹಣವನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಮಕ್ಕಳನ್ನು ಆಟಿಕೆ ಸಾಮಾನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವ ವಿಚಾರವಾಗಿ ಲೆಟ್ಜ್‌‌ಕಿಟ್ ಫೌಂಡೇಷನ್ 2020ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ನಡೆಸಿತು.

ಬಿಬಿಎಂಪಿ ಪರ ವಕೀಲ ಎನ್ ಕೆ ರಮೇಶ್ ಅವರು, 2008-09ರಿಂದ 2023-24ರ ಇಲ್ಲಿಯ ತನಕ ಸಂಗ್ರಹ ಮಾಡಲಾದ ಭಿಕ್ಷುಕರ ಸೆಸ್‌ನ ಒಟ್ಟು ಮೊತ್ತದಲ್ಲಿ ₹470 ಕೋಟಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಲಾಗಿದೆ. ₹80 ಕೋಟಿ ಬಾಕಿ ಇದ್ದು, ಅದನ್ನು ಪಾವತಿಸಲು ಮೂರು ವಾರಗಳ ಕಾಲಾವಕಾಶಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ದೊಡ್ಡ ಮೊತ್ತವನ್ನು ಪಾವತಿ ಮಾಡಿದ್ದು, ಕೇವಲ ₹80 ಕೋಟಿಯಷ್ಟೇ ಬಾಕಿ ಉಳಿದಿದೆ. ಇಷ್ಟು ಸಣ್ಣ ಮೊತ್ತವನ್ನು ಪಾವತಿಸಲು ಮೂರು ವಾರ ಏಕೆ? ₹40 ರಂತೆ ಎರಡು ವಾರಗಳಲ್ಲಿ ₹80 ಕೋಟಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಬಹುದಲ್ಲವೇ ಎಂದು ಕೇಳಿತು.

ಅದಕ್ಕೆ ಬಿಬಿಎಂಪಿ ಪರ ವಕೀಲರು, ಪಾಲಿಕೆಯ ಆರ್ಥಿಕ ಸ್ಥಿತಿಯ ನೋಡಿ ಮುಂದಡಿ ಇಡಬೇಕಾಗುತ್ತದೆ ಎಂದರು. ಇದಕ್ಕೆ ಪೀಠವು, "ಎಷ್ಟು ದಿನ ಹೀಗೆ ಬಿಡಲು ಆಗುತ್ತದೆ. ಅಷ್ಟಕ್ಕೂ ಸಂಗ್ರಹವಾದ ಭಿಕ್ಷುಕರ ಸೆಸ್ ಹಣವನ್ನು ನೀವೇನು ಪಾಲಿಕೆ ಕಚೇರಿಯಲ್ಲಿ ಇಟ್ಟುಕೊಂಡಿರಲಿಲ್ಲ ಅಲ್ಲವೇ? ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುತ್ತೀರಿ. ಆ ಮೂಲಕ ಹಣವನ್ನು ಪಾಲಿಕೆ ‘ದುಡಿಸಿಕೊಂಡಿದೆ’ ಮತ್ತು ಆ ಹಣದಿಂದ ‘ಲಾಭ’ ಸಹ ಪಡೆದುಕೊಂಡಿರುತ್ತದೆ. ಹೀಗಿದ್ದಾಗ ತಕ್ಷಣ ಪಾವತಿಸಲು ಸಮಸ್ಯೆಯೇನು?" ಎಂದು ಪ್ರಶ್ನಿಸಿತು. ಬಾಕಿ ₹80 ಕೋಟಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ, ಅದನ್ನು ಆಧರಿಸಿ ಮುಂದಿನ ನಿರ್ದೇಶನ ನೀಡಲಾಗುವುದು ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಇದೇ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ರಾಜ್ಯದ ಉಳಿದ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಂದ ಬಾಕಿ ಬರಬೇಕಿದ್ದ ₹50 ಕೋಟಿ ಭಿಕ್ಷುಕರ ಸೆಸ್ ಪೈಕಿ ₹20 ಕೋಟಿ ವಸೂಲಿ ಮಾಡಲಾಗಿದೆ. ಉಳಿದ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು. ಅದಕ್ಕೂ ಪ್ರಮಾಣಪತ್ರ ಸಲ್ಲಿಸುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರಿಗೆ ಪೀಠ ಸೂಚಿಸಿತು.

ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್, ಭಿಕ್ಷುಕರ ಸೆಸ್‌ಗೆ ಸಂಬಂಧಿಸಿದಂತೆ ಪಾಲಿಕೆ ಹಿಂದಿನ ವಿಚಾರಣೆ ನೀಡಿದ್ದ ಅಂಕಿ-ಅಂಶಗಳಿಗೂ ಈಗ ಕೊಟ್ಟಿರುವ ಮಾಹಿತಿಗೂ ವ್ಯತ್ಯಾಸವಿದೆ ಎಂದರು. ಅದಕ್ಕೆ ನಿಮ್ಮ ಬಳಿ ಇರುವ ಸರಿಯಾದ ಮಾಹಿತಿಯೊಂದಿಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ, ಇದೇ ಅವಧಿಯಲ್ಲಿ ಬಿಬಿಎಂಪಿ ಅದಕ್ಕೆ ಆಕ್ಷೇಪಣೆ ಸಲ್ಲಿಸಲಿ ಎಂದು ಪೀಠ ಸೂಚನೆ ನೀಡಿತು.

Related Stories

No stories found.
Kannada Bar & Bench
kannada.barandbench.com