
“ನ್ಯಾಯಮೂರ್ತಿಗಳು ಹನಿಟ್ರ್ಯಾಪ್ನಲ್ಲಿ ಸಿಲುಕಿದ್ದಾರೆ ಮತ್ತು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ” ಎಂಬ ಮಾಧ್ಯಮ ವರದಿಗಳ ಬೆನ್ನಲ್ಲೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಬೆಂಗಳೂರು ವಕೀಲರ ಸಂಘವು (ಎಎಬಿ) ಮಾರ್ಚ್ 24ರಂದು ಸರ್ವಸದಸ್ಯರ ತುರ್ತು ಸಭೆ ಕರೆದಿದೆ.
ನ್ಯಾಯಾಂಗ ವ್ಯವಸ್ಥೆಯ ಕೆಲವು ಗಂಭೀರ ವಿಚಾರಗಳನ್ನು ಚರ್ಚಿಸುವ ಅಗತ್ಯ ನಿರ್ಮಾಣವಾಗಿದ್ದು, ಬೆಂಗಳೂರು ವಕೀಲರ ಸಂಘದ ಬೈ–ಲಾದ (ಉಪ ನಿಯಮ) ಸೆಕ್ಷನ್ 17ಎ ಅಡಿಯಲ್ಲಿ ಸರ್ವಸದಸ್ಯರ ತುರ್ತು ಸಭೆ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಶುಕ್ರವಾರ ಆಡಳಿತ ಮಂಡಳಿ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
ನನ್ನನ್ನು ಹನಿಟ್ರ್ಯಾಪ್ನಲ್ಲಿ ಸಿಲುಕಿಸಲಾಗಿದೆ ಎಂದು ರಾಜ್ಯ ಸಚಿವ ಸಂಪುಟದ ಮಂತ್ರಿಯೊಬ್ಬರು ರಾಜ್ಯ ವಿಧಾನಸಭೆಯಲ್ಲಿ ಹೇಳಿಕೆ ನೀಡುವ ವೇಳೆ, ‘ಒಟ್ಟು 48 ಜನ ರಾಜಕಾರಣಿಗಳು, ಪ್ರಮುಖರು ಈ ಬಲೆಯಲ್ಲಿ ಸಿಲುಕಿದ್ದಾರೆ. ಈ 48 ಜನರಲ್ಲಿ ನ್ಯಾಯಮೂರ್ತಿಗಳು ಇದ್ದಾರೆ” ಎಂದು ಹೇಳಿರುವುದು ದುರದೃಷ್ಟಕರ.
ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ತೀರಾ ಕಳವಳಕಾರಿಯಾಗಿದೆ. ವಿಚಾರಣಾ ಹಂತದ ನ್ಯಾಯಾಲಯಗಳಲ್ಲಿಯೂ ಭ್ರಷ್ಟಾಚಾರದ ಆರೋಪಗಳು ಮೇರೆ ಮೀರಿದ್ದು, ಇದನ್ನು ತಡೆಗಟ್ಟಲು ಸೂಕ್ತ ಕ್ರಮಗಳ ಅಗತ್ಯದ ಬಗ್ಗೆ ಚರ್ಚಿಸಬೇಕಿದೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಕಳೆದ ರೋಸ್ಟರ್ ವೇಳೆ ಆರ್ಎಸ್ಎ ವಿಭಾಗದಲ್ಲಿ ನಿಯುಕ್ತಿಗೊಂಡು ಪ್ರಕರಣಗಳ ವಿಚಾರಣೆ ನಡೆಸಿದಾಗ ನೂರಾರು ಪ್ರಕರಣಗಳನ್ನು ಅರ್ಧಂಬರ್ಧ ವಿಚಾರಣೆ ನಡೆಸಿ ಅವುಗಳನ್ನು ಮುಂದಿನ ವಿಚಾರಣೆಗಾಗಿ ತಮ್ಮ ಬಳಿಯೇ ಇರಿಸಿಕೊಳ್ಳುವ ಮೂಲಕ ʼಪಾರ್ಟ್ ಹರ್ಡ್ʼ ಪ್ರಕ್ರಿಯೆ ನಡೆಸಿರುವುದು ಆಘಾತಕಾರಿಯಾಗಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಗಮನ ಹರಿಸಬೇಕಿದೆ.
ವಿಚಾರಣಾಧೀನ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಮೇಳೈಸಿದ್ದು, ಅದನ್ನು ತಡೆಗಟ್ಟಲು ಸೂಕ್ತ ವ್ಯವಸ್ಥೆಯನ್ನು ರೂಪಿಸಬೇಕಿದೆ.
ನ್ಯಾಯ ಮಂಡಳಿಗಳನ್ನೂ ಒಳಗೊಂಡು ಉನ್ನತ ಮತ್ತು ವಿಚಾರಣಾಧೀನ ನ್ಯಾಯಾಂಗದಲ್ಲಿ ಉನ್ನತ ಮತ್ತು ಕಠಿಣ ಹೊಣೆಗಾರಿಕೆ ಗುಣಮಟ್ಟ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಮತ್ತು ಭಾರತ ಸರ್ಕಾರಕ್ಕೆ ಮನವಿ ಮತ್ತು ಬೇಡಿಕೆ ಇಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.
ನ್ಯಾಯಮೂರ್ತಿಗಳು ತಮ್ಮ ಆಸ್ತಿಯನ್ನು ಸಾರ್ವಜನಿಕಗೊಳಿಸಲು ವ್ಯವಸ್ಥೆ ಜಾರಿಗೊಳಿಸಬೇಕು. ಭ್ರಷ್ಟ ನ್ಯಾಯಮೂರ್ತಿಗಳನ್ನು ವ್ಯವಸ್ಥೆಯಿಂದ ಕಿತ್ತೊಗೆಯಲು ಅತ್ಯುನ್ನತ ಹೊಣೆಗಾರಿಕೆ ನಿಯಮಗಳನ್ನು ಒಳಗೊಂಡ ವ್ಯವಸ್ಥೆ ಜಾರಿಗೊಳಿಸಬೇಕು.
ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಚಟುವಟಿಕೆಗಳಿಗೆ ಅಕ್ರಮ ಹಣ ವರ್ಗಾವಣೆ ಕಾಯಿದೆ ಅನ್ವಯಿಸಬೇಕು ಮತ್ತು ಅದನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಮೇಲ್ವಿಚಾರಣೆ ನಡೆಸಬೇಕು. ಭ್ರಷ್ಟ ನ್ಯಾಯಮೂರ್ತಿಗಳು ಖುಲಾಸೆಗೊಳ್ಳುವವರೆಗೆ ಅವರಿಗೆ ಯಾವುದೇ ತೆರನಾದ ನ್ಯಾಯಾಂಗ ಕೆಲಸ ನೀಡದಿರಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಬೇಕು.
ಉನ್ನತ ಮತ್ತು ಕೆಳ ಹಂತದ ನ್ಯಾಯಾಂಗದಲ್ಲಿ ಭ್ರಷ್ಟಾಚಾರಕ್ಕೆ ತಡೆಯೊಡ್ಡಲು ಪಾರದರ್ಶಕ ನಂಬಿಕೆ ಟ್ರಸ್ಟ್ ಸ್ಥಾಪಿಸುವ ಮೂಲಕ ವ್ಯವಸ್ಥೆ ಸರಿಪಡಿಸಲು ಸುಪ್ರೀಂ ಕೋರ್ಟ್ ಹೆಚ್ಚು ಕಾರ್ಯ ಪ್ರವೃತ್ತವಾಗಿಲ್ಲ. ಈ ಎಲ್ಲಾ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ವಿವರಿಸಲಾಗಿದೆ.