ಖಾಲಿ ಹುದ್ದೆಗಳಿಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕಕ್ಕೆ ಎಎಬಿ ಆಕ್ಷೇಪ; ಸಿಜೆಐ ಹಾಗೂ ಕೇಂದ್ರ ಕಾನೂನು ಸಚಿವರಿಗೆ ಪತ್ರ

ಸುಪ್ರೀಂ ಕೋರ್ಟ್ ಕೊಲಿಜಿಯಂ ಈಚೆಗೆ ಅಲಾಹಾಬಾದ್ ಹೈಕೋರ್ಟ್‌ನ ಐವರು ನಿವೃತ್ತ ನ್ಯಾಯಮೂರ್ತಿಗಳನ್ನು ಹಂಗಾಮಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಕ್ರಮ ವಕೀಲ ವೃಂದವನ್ನು ಕಳವಳಕ್ಕೀಡು ಮಾಡಿದೆ ಎಂದಿರುವ ಎಎಬಿ.
ಖಾಲಿ ಹುದ್ದೆಗಳಿಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕಕ್ಕೆ ಎಎಬಿ ಆಕ್ಷೇಪ; ಸಿಜೆಐ ಹಾಗೂ ಕೇಂದ್ರ ಕಾನೂನು ಸಚಿವರಿಗೆ ಪತ್ರ
Published on

ನ್ಯಾಯಾಂಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರದಲ್ಲಿ ನಿವೃತ್ತ ನ್ಯಾಯಮೂರ್ತಿಗಳನ್ನು ಆಶ್ರಯಿಸುವ ಪರಿಯಿಂದ ಹೊಸ ಪೀಳಿಗೆಯ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಹಿನ್ನಡೆಯಾಗಲಿದೆ ಎಂದು ಬೆಂಗಳೂರು ವಕೀಲರ ಸಂಘ (ಎಎಬಿ) ಆತಂಕ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್‌ ಮೇಘವಾಲ್‌ ಅವರಿಗೆ ಎರಡು ಪುಟಗಳ ಪತ್ರ ಬರೆಯಲಾಗಿದ್ದು, ನಿವೃತ್ತ ನ್ಯಾಯಮೂರ್ತಿಗಳ ಪುನರ್‌ ನೇಮಕಾತಿ ಸರಿಯಲ್ಲ ಎಂದು ಎಎಬಿ ಅಧ್ಯಕ್ಷ ವಿವೇಕ್‌ ರೆಡ್ಡಿ, ಉಪಾಧ್ಯಕ್ಷ ಸಿ ಎಸ್‌ ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌ ವಿ ಪ್ರವೀಣ್‌ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್‌ ಅವರು  ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಸುಪ್ರೀಂ ಕೋರ್ಟ್ ಕೊಲಿಜಿಯಂ ಇತ್ತೀಚೆಗೆ ಅಲಾಹಾಬಾದ್ ಹೈಕೋರ್ಟ್‌ನ ಐವರು ನಿವೃತ್ತ ನ್ಯಾಯಮೂರ್ತಿಗಳನ್ನು ಹಂಗಾಮಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಹಠಾತ್ ಕ್ರಮ ವಕೀಲ ವೃಂದವನ್ನು ಕಳವಳಕ್ಕೀಡು ಮಾಡಿದೆ. ಇಂತಹ ಕ್ರಮಕ್ಕೆ ನಿಜವಾದ ಕಾರಣ ಏನೆಂಬುದು ಸಾರ್ವಜನಿಕ ವಲಯಕ್ಕೆ ತಿಳಿದಿಲ್ಲ. ಇದು ದೇಶದ ಯುವಸಮೂಹಕ್ಕೆ ನಷ್ಟ ಉಂಟು ಮಾಡಲಿದೆ” ಎಂದು ಪತ್ರದಲ್ಲಿ ಅಭಿಪ್ರಾಯಪಡಲಾಗಿದೆ.

“ನೇಮಕಗೊಂಡಿರುವ ನ್ಯಾಯಮೂರ್ತಿಗಳ ಸಾಮರ್ಥ್ಯದ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ. ಆದರೆ, ಕರ್ನಾಟಕವೂ ಸೇರಿದಂತೆ ದೇಶದ ಇತರೆ ಹೈಕೋರ್ಟ್‌ಗಳ ವಕೀಲರು ಈ ಕ್ರಮವನ್ನು ಬಲವಾಗಿ ವಿರೋಧಿಸಿದ್ದರು ಎಂಬುದನ್ನು ಮರೆಯಬಾರದು. ಈ ಪ್ರವೃತ್ತಿ ದೇಶದ ಇತರೆ ಹೈಕೋರ್ಟ್‌ಗಳಿಗೂ ವ್ಯಾಪಿಸಬಾರದು. ಇಂತಹ ನಡೆ ಭವಿಷ್ಯದಲ್ಲಿ ಉತ್ತಮ ನ್ಯಾಯಮೂರ್ತಿಗಳಾಗಿ ಹೊರಹೊಮ್ಮಬಹದಾದ ಸಮರ್ಥ ಮತ್ತು ಪ್ರತಿಭಾನ್ವಿತ ಯುವ ಸಮೂಹಕ್ಕೆ ನಿಶ್ಚಿತವಾಗಿ ಆಘಾತ ಉಂಟುಮಾಡಬಲ್ಲದು” ಎಂದು ವಿವರಿಸಲಾಗಿದೆ.

“ನ್ಯಾಯಾಂಗದ ಆಡಳಿತ ಕಾರ್ಯ ಚಲನಶೀಲವಾಗಿ ಮುಂದುವರಿಯಬೇಕಾದರೆ ಅದಕ್ಕಾಗಿ ಯುವ ಪೀಳಿಗೆಯನ್ನು ಆ ದಿಕ್ಕಿನಲ್ಲಿ ತಯಾರುಗೊಳಿಸುವುದು ಅತ್ಯಂತ ಮಹತ್ವಪೂರ್ಣ ಹೆಜ್ಜೆ. ಈಗಾಗಲೇ ಸಾಕಷ್ಟು ಪ್ರತಿಭಾನ್ವಿತ ಯುವ ವಕೀಲರು ನ್ಯಾಯಾಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡುತ್ತಿದ್ದು ಇಂತವರಿಗೆ ಸ್ಥಳವಾಕಾಶ ಮಾಡಿಕೊಡಬೇಕು. ಇಂದಿನ ಯುವ ಸಮೂಹ ನ್ಯಾಯಾಂಗದ ನೊಗ ಹೊರಲು ಸನ್ನದ್ಧವಿದೆ ಎಂಬುದನ್ನು ಮೆರೆಯಬಾರದು” ಎಂದು ವಿವರಿಸಲಾಗಿದೆ.

“ಕೂಡಲೇ, ಸುಪ್ರೀಂ ಕೋರ್ಟ್ ಕೊಲಿಜಿಯಿಂ ಅಲಾಹಾಬಾದ್ ಹೈಕೋರ್ಟ್‌ಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕಾತಿ ಶಿಫಾರಸು ನಿರ್ಧಾರವನ್ನು ಮರುಪರಿಶೀಲಿಸಬೇಕು. ಬಾರ್ (ವಕೀಲ ವೃಂದ) ಮತ್ತು ಬೆಂಚ್ (ನ್ಯಾಯಾಂಗ ಅಧಿಕಾರಿ ವರ್ಗ) ಎರಡರಲ್ಲೂ ಲಭ್ಯವಿರುವ ಕಿರಿಯ ಪ್ರತಿಭಾನ್ವಿತರನ್ನು ಆಯ್ಕೆ ಮಾಡಬೇಕು” ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಫೆಬ್ರವರಿ 3ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಸಭೆ ಸೇರಿತ್ತು. ಈ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಫೈಜ್‌ ಅಲಂ ಖಾನ್‌, ಮೊಹಮ್ಮದ್‌ ಅಸ್ಲಂ, ಸೈಯದ್‌ ಆಫ್ತಾಬ್‌ ಹುಸೇನ್‌ ರಿಝ್ವಿ, ರೇಣು ಅಗರವಾಲ್‌ ಮತ್ತು ಜ್ಯೋತ್ಸ್ನಾ ಶರ್ಮ ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ಎರಡು ವರ್ಷಗಳವರೆಗೆ ಹಂಗಾಮಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಶಿಫಾರಸನ್ನು ಸಂವಿಧಾನದ 224 ಎ ವಿಧಿಯಡಿ ಕೈಗೊಂಡಿತ್ತು.

Attachment
PDF
AAB Ad hoc Judges
Preview
Kannada Bar & Bench
kannada.barandbench.com