ಹಾಸಿಗೆ, ತಲೆದಿಂಬು, ಹೊದಿಕೆ ಕೋರಿರುವ ನಟ ದರ್ಶನ್‌: ನಾಳೆಗೆ ಅರ್ಜಿ ವಿಚಾರಣೆ ಮುಂದೂಡಿದ ಬೆಂಗಳೂರು ನ್ಯಾಯಾಲಯ

ಅಗತ್ಯ ವಸ್ತುಗಳ ಕಲ್ಪಿಸಲು ಜೈಲಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್‌ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪ ಕೈ ಬಿಡುವಂತೆ ಕೋರಿ ದೀಪಕ್ ಹಾಗೂ ಪ್ರದೋಷ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌.
Darshan, Actor
Darshan, Actor
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ ಅವರು ಹಾಸಿಗೆ, ತಲೆದಿಂಬು ಮತ್ತು ಹೊದಿಕೆ ಸೇರಿ ಇತರೆ ಅಗತ್ಯ ವಸ್ತುಗಳ ಕಲ್ಪಿಸಲು ಜೈಲಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿರುವ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 64ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಶನಿವಾರಕ್ಕೆ ಮುಂದೂಡಿತು.

ಅಗತ್ಯ ವಸ್ತುಗಳ ಕಲ್ಪಿಸಲು ಜೈಲಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್‌ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಕೈ ಬಿಡುವಂತೆ ಕೋರಿ 13ನೇ ಆರೋಪಿ ದೀಪಕ್ ಹಾಗೂ 14ನೇ ಆರೋಪಿ ಪ್ರದೂಷ್ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳು ಶುಕ್ರವಾರ ನ್ಯಾಯಾಧೀಶ ಐ ಪಿ ನಾಯ್ಕ್‌ ಅವರ ಮುಂದೆ ವಿಚಾರಣೆಗೆ ಬಂದಿದ್ದವು.

ಈ ವೇಳೆ ತನಿಖಾಧಿಕಾರಿಗಳ ಪರ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕಮಾರ್‌ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ದರ್ಶನ್ ಮನವಿ ಕುರಿತು ಏನಾದರೂ ವಾದ ಮಂಡಿಸುತ್ತೀರಾ? ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್, ಈ ವಿಚಾರವಾಗಿ ಶನಿವಾರ ವಾದ ಮಂಡಿಸಲಾಗುವುದು ಎಂದು ತಿಳಿಸಿದರು. ಹಾಗಾಗಿ, ದರ್ಶನ್‌ ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಾಯಿತು.

ಇನ್ನೂ ದೀಪಕ್ ಹಾಗೂ ಪ್ರದೂಷ್ ಮನವಿ ಬಗ್ಗೆ ವಾದ ಮಂಡಿಸಿದ ಪ್ರಸನ್ನ ಕುಮಾರ್, ರೇಣುಕಾಸ್ವಾಮಿ ಮೇಲೆ ದೀಪಕ್ ಕೂಡ ಹಲ್ಲೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ. ದೀಪಕ್ ಬಟ್ಟೆಯಲ್ಲಿಯೂ ರೇಣುಕಾಸ್ವಾಮಿಯ ರಕ್ತದ ಕಲೆ ಪತ್ತೆಯಾಗಿದ್ದವು. ಆತನ ಚಪ್ಪಲಿಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದವು. ಇತರೆ ಆರೋಪಿಗಳ ಸಂಪರ್ಕದಲ್ಲಿ ದೀಪಕ್‌ ಇರುವುದು ಸಿಡಿಆರ್‌ನಿಂದ ದೃಢಪಟ್ಟಿದೆ. ಪವಿತ್ರಾಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳನ್ನು ಓದುತ್ತಾ, ಆತನ ಮೇಲೆ ಹಲ್ಲೆ ನಡೆಸಲು ಇತರೆ ಆರೋಪಿಗಳಿಗೆ ಪ್ರದೋಷ್‌ ಪ್ರಚೋದನೆ ನೀಡಿದ್ದಾನೆ. ಈ ಆರೋಪಿಯ ಪ್ಯಾಂಟ್- ಶರ್ಟ್‌ ಮೇಲೆಯೂ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆಯಾಗಿವೆ. ಪ್ರದೋಷ್ ಕೊಲೆಯಲ್ಲಿ ಭಾಗಿಯಾಗಿರವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ವಿವರಿಸಿದರು.

ಬೆಳಗಿನ ಕಲಾಪದ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಜೈಲಿನಲ್ಲಿರುವ ಪ್ರಕರಣದ 7 ಮಂದಿ ಆರೋಪಿಗಳು ನ್ಯಾಯಾಧೀಶರ ಮುಂದೆ ತಮ್ಮ ಹಾಜರಾತಿ ದಾಖಲಿಸಿದರು. ಈ ವಿಡಿಯೋ ಕಾನ್ಪರೆನ್ಸ್‌ ಸಾಧನದ ಮೈಕ್‌ ಅನ್ನು (ಆಡಿಯೋ) ಜೈಲು ಸಿಬ್ಬಂದಿ ಆಫ್‌ ಮಾಡಿದ್ದರು.

ಕಳೆದ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದ ದರ್ಶನ್‌, ತಮ್ಮ ಕೈಗೆ ಫಂಗಸ್‌ ಆಗಿದೆ. ಕೈ ಮುಚ್ಚಲು ಬೆಚ್ಚಗಿನ ವಸ್ತುಗಳನ್ನು ಕೋರಿದರೂ ಜೈಲಧಿಕಾರಿಗಳು ಪೂರೈಸುತ್ತಿಲ್ಲ. ಇತರೆ ಆರೋಪಿಗಳೊಂದಿಗೆ ಸಮಾಲೋಚಿಸಲೂ ಬಿಡುತ್ತಿಲ್ಲ. ಕೊಠಡಿಯಿಂದ ಹೊರಗೆ ಬಿಡುತ್ತಿಲ್ಲ. ಜೈಲಿನಲ್ಲಿ ಬಹಳ ತೊಂದರೆ ಉಂಟಾಗಿದ್ದು, ತಮಗೆ ವಿಷ ನೀಡಲು ಜೈಲಧಿಕಾರಿಗಳಿಗೆ ನಿರ್ದೇಶಿಸುವಂತೆ ನ್ಯಾಯಾಧೀಶರನ್ನು ಕೋರಿದ್ದರು. ಆದರೆ, ಶುಕ್ರವಾರ ಮಾತ್ರ ದರ್ಶನ್‌, ನ್ಯಾಯಾಧೀಶರ ಮುಂದೆ ಏನೂ ಹೇಳದೆ ಮೌನವಾಗಿ ನಿಂತಿದ್ದರು.

ನಂತರ ಜೈಲಿನಲ್ಲಿರುವ ಹಾಗೂ ಜಾಮೀನನ ಮೇಲೆ ಹೊರಗಿದ್ದು, ವಿಚಾರಣೆಗೆ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಾಲಯವು ಆರೋಪ ನಿಗದಿ ಕುರಿತ ವಿಚಾರಣೆಯನ್ನು ಸೆಪ್ಟೆಂಬರ್‌ 25ಕ್ಕೆ ಮುಂದೂಡಿತು.

Kannada Bar & Bench
kannada.barandbench.com