ಬಿಜೆಪಿ ವಿರುದ್ಧದ ಶೇ. 40 ಕಮಿಷನ್‌ ಆರೋಪ: ಜೂನ್‌ 7ಕ್ಕೆ ರಾಹುಲ್‌ ಗಾಂಧಿ ಖುದ್ದು ಹಾಜರಾತಿಗೆ ವಿಶೇಷ ನ್ಯಾಯಾಲಯದ ಆದೇಶ

“ಸಿಆರ್‌ಪಿಸಿ ಸೆಕ್ಷನ್‌ 205ರ ಅಡಿ ರಾಹುಲ್‌ಗೆ ಹಾಜರಾತಿಯಿಂದ ವಿನಾಯಿತಿ ನೀಡಲು ಅವಕಾಶವಿದೆ. ಜೂನ್‌ 7ರಂದು ರಾಹುಲ್‌ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ” ಎಂಬ ಕೋರಿಕೆ ಮನ್ನಿಸಿದ ನ್ಯಾಯಾಲಯ.
Rahul Gandhi
Rahul GandhiFacebook

ಬಿಜೆಪಿ ವಿರುದ್ಧ ಶೇ.40 ಕಮಿಷನ್‌ ಆರೋಪ ಮಾಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಹೂಡಲಾಗಿರುವ ಮಾನಹಾನಿ ಪ್ರಕರಣದಲ್ಲಿ ಜೂ.7ಕ್ಕೆ ಖುದ್ದು ಹಾಜರಾಗಲು ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರಾಹುಲ್‌ ಅವರಿಗೆ ಸೂಚಿಸಿದೆ.

ಬಿಜೆಪಿಯ ವಿರುದ್ಧ ಭ್ರಷ್ಟಾಚಾರ ಆರೋಪದ ಭಾಗವಾಗಿ ಶೇ. 40 ಕಮಿಷನ್‌ ಆರೋಪ ಮಾಡಿದ್ದ ಕಾಂಗ್ರೆಸ್‌ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಇಂದು ವಿಚಾರಣೆಯಲ್ಲಿ ಹಾಜರಾಗದಿದ್ದಕ್ಕೆ ವಿನಾಯಿತಿ ನೀಡಿರುವ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜೂನ್‌ 7ಕ್ಕೆ ಖುದ್ದು ಹಾಜರಾಗಲು ಆದೇಶಿಸಿದೆ.

ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸಮನ್ಸ್‌ ಜಾರಿಯ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಶನಿವಾರ ಬೆಳಿಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರ ಮುಂದೆ ಖುದ್ದು ಹಾಜರಾಗಿದ್ದರು.

ಇದನ್ನು ಪರಿಗಣಿಸಿದ ನ್ಯಾಯಾಲಯವು ಅವರಿಂದ ತಲಾ ಐದು ಸಾವಿರ ರೂಪಾಯಿ ನಗದು ಬಾಂಡ್‌ ಪಡೆದು ಜಾಮೀನು ಮಂಜೂರು ಮಾಡಿತ್ತು.

ಆದರೆ, ಇದೇ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಇಂದು ಹಾಜರಾಗಿರಲಿಲ್ಲ. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಬಿಜೆಪಿ ಪರ ವಕೀಲ ವಿನೋದ್‌ ಕುಮಾರ್‌ ಅವರು, “ಇದಾಗಲೇ ಎರಡು ಬಾರಿ ಸಿಆರ್‌ಪಿಸಿ ಸೆಕ್ಷನ್‌ 205ರ ಅಡಿ ರಾಹುಲ್‌ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗದಿದ್ದಕ್ಕೆ ವಿನಾಯಿತಿ ನೀಡಲಾಗಿದೆ. ಮತ್ತೆ ವಿನಾಯಿತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ರಾಹುಲ್‌ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಬೇಕು” ಎಂದು ಕೋರಿದರು.

Also Read
ಬಿಜೆಪಿ ವಿರುದ್ಧ ಶೇ.40 ಕಮಿಷನ್ ಆರೋಪ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌ಗೆ ಜಾಮೀನು ಮಂಜೂರು

ಇದಕ್ಕೆ ಕಾಂಗ್ರೆಸ್‌ ಪರವಾಗಿ ಹಾಜರಾಗಿದ್ದ ವಕೀಲರಾದ ಎಸ್‌ ಎ ಅಹ್ಮದ್‌, ನಿಶಿತ್‌ ಕುಮಾರ್‌ ಶೆಟ್ಟಿ ಅವರು “ಸಿಆರ್‌ಪಿಸಿ ಸೆಕ್ಷನ್‌ 205ರ ಅಡಿ ಹಾಜರಾತಿಯಿಂದ ವಿನಾಯಿತಿ ನೀಡಲು ಅವಕಾಶವಿದೆ. ಜೂನ್‌ 7ರಂದು ರಾಹುಲ್‌ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಈ ಬಾರಿ ವಿನಾಯಿತಿ ನೀಡಬೇಕು” ಎಂದು ಮನವಿ ಮಾಡಿದರು.

ಈ ಸಂಬಂಧ ವಿಸ್ತೃತ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯವು "ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಇಂದು ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಮುಂದಿನ ವಿಚಾರಣೆಯ ವೇಳೆ ಅವರು ಖುದ್ದು ಹಾಜರಾಗಬೇಕು. ರಾಹುಲ್‌ ಹಾಜರಾತಿಗಾಗಿ ಜೂನ್‌ 7ಕ್ಕೆ ವಿಚಾರಣೆ ಮುಂದೂಡಲಾಗಿದೆ" ಎಂದು ಆದೇಶದಲ್ಲಿ ಹೇಳಿದೆ.

Kannada Bar & Bench
kannada.barandbench.com