
ದೇಶದ ಜಿಲ್ಲಾ ನ್ಯಾಯಾಲಯಗಳನ್ನು ಅಧೀನ ಕೋರ್ಟ್ಗಳು ಎಂದು ಕರೆಯುವುದನ್ನು ತಡೆಯುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅಭಿಪ್ರಾಯಪಟ್ಟರು.
ಭಾರತೀಯ ಸಂವಿಧಾನ ಜಾರಿಗೆ ಬಂದ 75 ನೇ ವರ್ಷಾಚರಣೆ ಅಂಗವಾಗಿ ಸೋನಿಪತ್ನ ಒ ಪಿ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಆಯೋಜಿಸಿದ್ದ 'ರಿಫ್ಲೆಕ್ಷನ್ಸ್' ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಓಕಾ ಮಾತನಾಡಿದರು.
ಜಿಲ್ಲಾ ನ್ಯಾಯಾಲಯಗಳನ್ನು ಅಧೀನ ಎಂದು ಇನ್ನೂ ಹೇಳುವ ಸಂವಿಧಾನದ ಭಾಗ ತಿದ್ದುಪಡಿ ಮಾಡಲು ಇದು ಸಕಾಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ನ್ಯಾ. ಓಕಾ ಅವರ ಭಾಷಣದ ಪ್ರಮುಖಾಂಶಗಳು
ಜಿಲ್ಲಾ ನ್ಯಾಯಾಲಯಗಳು ಜನರೊಂದಿಗೆ ನೇರ ಸಂಪರ್ಕ ಇರುವ ಜನರ ನ್ಯಾಯಾಲಯಗಳಾಗಿವೆ. ಅವುಗಳನ್ನು ಸಾಂವಿಧಾನಿಕ ನ್ಯಾಯಾಲಯಗಳಂತೆಯೇ ಪರಿಗಣಿಸಬೇಕು.
ನ್ಯಾಯಾಂಗದ ಪ್ರಾಮಾಣಿಕತೆಯ ಮೌಲ್ಯಮಾಪನ ಕೇವಲ ಸಾಧನೆಗಳ ಬಗ್ಗೆ ಇರಬಾರದು.
ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುವ ಸಂವಿಧಾನದ 21ನೇ ವಿಧಿಯನ್ನು ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ನೆಲೆಯಲ್ಲೂ ಅರ್ಥೈಸುವುದು ಮುಖ್ಯ.
ಇಂದು ಅನೇಕರು ಜೈಲಿನಲ್ಲಿ ಕೊಳೆಯುತ್ತಲೇ ಇದ್ದಾರೆ. ಇವರಿಗೆ ಹೆಚ್ಚು ಸಹಾಯ ಬೇಕು. ನಾನು ಯುವಜನರನ್ನು ವ್ಯಾಜ್ಯ ಕ್ಷೇತ್ರದ ಭಾಗವಾಗಬೇಕು ಅವರು ನ್ಯಾಯಾಂಗಕ್ಕೆ ಹೆಚ್ಚು ಸೇರಬೇಕು ಎಂದು ಕೇಳಿಕೊಳ್ಳುತ್ತೇನೆ.
ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿದರೆ ಮಾತ್ರ ಸಂವಿಧಾನ ರಕ್ಷಿಸುವ ಪ್ರತಿಜ್ಞೆ ಸಾಕಾರಗೊಳ್ಳುವುದು ಸಾಧ್ಯ.
ಬಾಕಿ ಉಳಿದಿರುವ ಪ್ರಕರಣಗಳನ್ನು ಎದುರಿಸುವುದು ಸವಾಲಾಗಿದ್ದು ಗುಣಮಟ್ಟದ ನ್ಯಾಯ ಒದಗಿಸುವುದಕ್ಕಾಗಿ ನ್ಯಾಯಾಂಗಕ್ಕೆ ಸೂಕ್ತ ತರಬೇತಿಯ ಅಗತ್ಯವಿದೆ.
ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (ಎನ್ಜೆಡಿಜಿ) ರೀತಿಯ ತಾಂತ್ರಿಕ ಪರಿಹಾರಗಳು ಪ್ರಕರಣದ ಬಾಕಿಯನ್ನು ಪತ್ತೆಹಚ್ಚಲು ಸಹಾಯ ಮಾಡಲಿವೆ.
ನ್ಯಾಯಾಂಗ ವ್ಯವಸ್ಥೆ ಸುಧಾರಿಸಲು ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವ ಮತ್ತಿತರ ಸುಧಾರಣೆಗಳ ಬೆಂಬಲ ಬೇಕಿದೆ.