

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಸಣಾಪುರ ಗ್ರಾಮದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 19 ವರ್ಷದ ಮಾನಸಿಕ ಅಸ್ವಸ್ಥ ಯುವಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ’ ಎಂದು ಕಿಡಿಕಾರಿದೆ.
ಯಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಚಾಮರಾಜನಗರ ತಾಲ್ಲೂಕಿನ ಮಸಣಾಪುರದ ಉಪ್ಪಾರ ಬೀದಿಯ ಚಂದ್ರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪೊಲೀಸ್ ವರಿಷ್ಠಾಧಿಕಾರಿಯ ನಡೆಗೆ ತೀವ್ರ ಅತೃಪ್ತಿ ದಾಖಲಿಸಿದೆ.
ಅರ್ಜಿದಾರ ಯುವಕನ ಪರ ವಾದಿಸಿದ ವಕೀಲ ಎಚ್ ಎಲ್ ನರೇಂದ್ರ ಬಾಬು ಅವರು “ಸುಮಾರು 100 ಜನರ ಗುಂಪು ಮಾನಸಿಕ ಅಸ್ವಸ್ಥ ಯುವಕನನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಷ್ಠಾಧಿಕಾರಿಯು ಆರೋಪಿಯ ಗಡಿಪಾರಿಗೆ ಆದೇಶಿಸುತ್ತೇನೆ, ರೌಡಿ ಶೀಟರ್ ತೆರೆಯುತ್ತೇನೆ, ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸುತ್ತೇನೆ...ಎಂದೆಲ್ಲಾ ಬೆದರಿಕೆ ಒಡ್ಡಿದ್ದಾರೆ” ಎಂದು ಆರೋಪಿಸಿ, ಆ ಸಂಬಂಧ ವಿಡಿಯೊವನ್ನು ಪೀಠಕ್ಕೆ ತೋರಿಸಿದರು.
ಇದನ್ನು ಅಲ್ಲಗಳೆದ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ “ಇದು ದೂರು–ಪ್ರತಿದೂರಿನ ಪ್ರಕರಣ. ಈ ಘಟನೆಯಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಪೊಲೀಸ್ ವರಿಷ್ಠಾಧಿಕಾರಿಯವರ ಮಾತುಗಳನ್ನು ಪೀಠ ನಕಾರಾತ್ಮಕವಾಗಿ ಪರಿಗಣಿಸಬಾರದು” ಎಂದು ಮನವಿ ಮಾಡಿದರು.
ಆದರೆ, ಆರೋಪಕ್ಕೆ ಸಂಬಂಧಿಸಿದ ವಿಡಿಯೊ ಮತ್ತು ಫೋಟೊಗಳನ್ನು ಪರಿಶೀಲಿಸಿದ ಪೀಠವು “ಇವರೇನು ಪೊಲೀಸ್ ಅಧಿಕಾರಿಯೋ ಹೇಗೆ? ರಾಜ್ಯದಲ್ಲಿ ಕಾನೂನಿನ ನಿಯಮಗಳಿಗೆ ಅನುಗುಣವಾಗಿ ಆಡಳಿತ ನಡೆಯುತ್ತಿದೆಯೋ ಅಥವಾ ವ್ಯಕ್ತಿಯೊಬ್ಬನ ಆದೇಶಗಳಿಗೆ ಅನುಗುಣವಾಗಿ ನಡೆಯುತ್ತಿದೆಯೋ? ಪೊಲೀಸ್ ಅಧಿಕಾರಿಯೊಬ್ಬರು ಹೀಗೆಲ್ಲಾ ಮಾತನಾಡುವುದಾದರೆ ಅವರಿಗೆ ಖಾಕಿ ಸಮವಸ್ತ್ರ ಬಿಚ್ಚಿ ಬಿಳಿ ಬಣ್ಣದ ದಿರಿಸು ಧರಿಸಿಕೊಳ್ಳಲು ಹೇಳಿ” ಎಂದು ಆಕ್ರೋಶ ವ್ಯಕ್ತಪಡಿಸಿತು.
“ಇಲ್ಲಿ ಜಗಳ ಮುಖ್ಯವಲ್ಲ. ಒಬ್ಬ ಯುವಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸುವುದು ಎಂದರೆ ಏನರ್ಥ? ಈ ದೇಶದಲ್ಲಿ ಇಂತಹುದೆಲ್ಲಾ ನಿಂತು ಹೋಗಿ ಯಾವ ಕಾಲವಾಯ್ತು? ಇಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿದೆಯೋ ಹೇಗೆ? ಇಂತಹ ವರ್ತನೆಯನ್ನು ಯಾರೇ ಮಾಡಿರಲಿ. ಅದು ಅಕ್ಷಮ್ಯ. ಜನರು ಒಂದಷ್ಟು ಕ್ರಿಯಾಶೀಲವಾಗಿ ಬದುಕಬೇಕು. ಇಲ್ಲವಾದಲ್ಲಿ ತೊಂದರೆ ಅನುಭವಿಸುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿತು.
“ಇನ್ನು ಮುಂದೆ ಪೊಲೀಸರ ಉಪಸ್ಥಿತಿ ಇರುವೆಡೆ ರಾಜ್ಯದಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಪೊಲೀಸ್ ಅಪರಾಧಗಳು ಕಡಿಮೆಯಾಗುತ್ತವೆ” ಎಂದಿತು.
“ಬೇಡದ ವಿಚಾರಕ್ಕೆ ಜನಗಳು ಗಲಾಟೆ ಮಾಡ್ತಾ ಇದ್ದರೆ ದೇಶವೂ ಉದ್ಧಾರವಾಗೊಲ್ಲ, ಜನರೂ ಉದ್ಧಾರ ಆಗೋಲ್ಲ. ಗಲಾಟೆಯಿಂದ ರಾಜಕೀಯ ಪಕ್ಷಗಳ ಅನುಯಾಯಿಗಳು ತೊಂದರೆ ಅನುಭವಿಸುತ್ತಾರೆ. ಇನ್ಯಾರೋ ಲಾಭ ಪಡೆಯುತ್ತಾರೆ” ಎಂದು ನ್ಯಾಯಾಲಯ ಹೇಳಿತು.
“ಎರಡೂ ಬಣಗಳ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯಬೇಕು ಮತ್ತು ತನಿಖೆಯ ವಿಸ್ತೃತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಪ್ರಾಸಿಕ್ಯೂಷನ್ಗೆ ಆದೇಶಿಸಿ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿತು.
ಅರ್ಜಿದಾರ ಯುವಕನ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತಾ–2023ರ ಸೆಕ್ಷನ್ 299 (ಯಾವುದೇ ವರ್ಗದ ನಾಗರಿಕರ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರಿತವಾಗಿ ಕೆರಳಿಸುವ ಅಥವಾ ಅವರ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕೃತ್ಯ), 324(4) (ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶದಿಂದ ಬೇರೆಯವರ ಆಸ್ತಿಗೆ ಹಾನಿ ಉಂಟುಮಾಡಿ, ಕಿಡಿಗೇಡಿತನ ಮೆರೆದರೆ ಅಥವಾ ಆ ಮೂಲಕ ₹20 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಆದರೆ ₹1 ಲಕ್ಷಕ್ಕಿಂತ ಕಡಿಮೆ ಮೌಲ್ಯದ ನಷ್ಟವನ್ನು ಉಂಟುಮಾಡುವುದು), ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ತಿದ್ದುಪಡಿ ಕಾಯಿದೆ–2015ರ 3(1)(ಟಿ) (ಎಸ್ಸಿ ಅಥವಾ ಎಸ್ಟಿ ಸಮುದಾಯಕ್ಕೆ ಸೇರಿದ ಜನರು ಪವಿತ್ರ ಅಥವಾ ಅತ್ಯಂತ ಗೌರವಾನ್ವಿತ ಎಂದು ಭಾವಿಸುವ ಯಾವುದೇ ವಸ್ತುವನ್ನು ನಾಶಪಡಿಸುವುದು, ಹಾನಿಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು ಶಿಕ್ಷಾರ್ಹ ಅಪರಾಧ) ಪ್ರಕರಣ ದಾಖಲಿಸಿದ್ದಾರೆ.