ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕಾತಿ ಪ್ರಶ್ನೆ: ಅರ್ಜಿದಾರರಿಗೆ ಐದು ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

“ಅರ್ಜಿದಾರರು ಸತ್ಯ ಮರೆ ಮಾಚಿ, ನ್ಯಾಯಾಲಯದ ಅಮೂಲ್ಯ ಸಮಯ ಹಾಳುವ ಮಾಡಿದ್ದಲ್ಲದೆ, ನ್ಯಾಯ ದೇಗುಲದ ಘನತೆಗೆ ಕುಂದುಂಟು ಮಾಡುವ ಪ್ರಯತ್ನ ನಡೆಸಿದ್ದಾರೆ. ಇಂತಹ ಪ್ರಯತ್ನಗಳನ್ನು ಕಠಿಣ ರೀತಿಯಲ್ಲಿ ಹತ್ತಿಕ್ಕಲಾಗುವುದು” ಎಂದಿರುವ ನ್ಯಾಯಾಲಯ.
Karntaka HC and Justices B Verappa and K S Hemalekha
Karntaka HC and Justices B Verappa and K S Hemalekha

ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕದ ವಿರುದ್ಧ ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದ ಸುಳ್ಯ ಮೂಲದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಆದೇಶ ಮಾಡಿದೆ. ಸುಳ್ಯ ತಾಲ್ಲೂಕಿನ ಕಳಂಜದ ಪಿ ಮೋಹನ್ ಚಂದ್ರ ಅವರಿಗೆ ದಂಡ ವಿಧಿಸಲಾಗಿದ್ದು, ಬೆಂಗಳೂರು ವಕೀಲರ ಸಂಘಕ್ಕೆ ಅರ್ಜಿದಾರರು ಐದು ಲಕ್ಷ ರೂಪಾಯಿಗಳನ್ನು ಎರಡು ತಿಂಗಳಲ್ಲಿ ಪಾವತಿಸಬೇಕು ಎಂದು ಪೀಠ ನಿರ್ದೇಶಿಸಿದೆ.

“ಅರ್ಜಿದಾರರು ಸತ್ಯ ಮರೆ ಮಾಚಿ, ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಲ್ಲದೆ, ನ್ಯಾಯ ದೇಗುಲದ ಘನತೆಗೆ ಕುಂದುಂಟು ಮಾಡುವ ಪ್ರಯತ್ನ ನಡೆಸಿದ್ದಾರೆ. ಇಂತಹ ಪ್ರಯತ್ನಗಳನ್ನು ಕಠಿಣ ರೀತಿಯಲ್ಲಿ ಹತ್ತಿಕ್ಕಲಾಗುವುದು” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರು ಮೂಲತಃ ವಕೀಲರಾಗಿದ್ದರೂ ಪಾರ್ಟಿ ಇನ್ ಪರ್ಸನ್ ಎಂದು ಹೇಳಿಕೊಂಡು ಮಾಹಿತಿ ಮುಚ್ಚಿಟ್ಟಿದ್ದಾರೆ. ಆ ಮೂಲಕ ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಾರೆ. ನ್ಯಾಯಾಲಯಗಳು ದೇವಾಲಯಗಳಿದ್ದಂತೆ, ಜನರಿಗೆ ಇಂದಿಗೂ ನಂಬಿಕೆ ಉಳಿದಿರುವುದು ನ್ಯಾಯಾಲಯಗಳಲ್ಲಿ ಮಾತ್ರ. ಎಲ್ಲ ಕಡೆ ಸೋತ ಜನರು ಕೊನೆಗೆ ನ್ಯಾಯ ಅರಸಿ ಬರುವುದು ನ್ಯಾಯಾಲಯಕ್ಕೆ. ಅಂತಹ ನ್ಯಾಯಾಂಗದಲ್ಲಿ ಬಿರುಕು ಮೂಡಲು ಬಿಡುವುದಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ನ್ಯಾಯದಾನ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸ ಕಳೆದುಹೋಗಲಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆ ತರಲು ಯಾರಿಗೂ ಬಿಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳು ಹೆಚ್ಚುತ್ತಿವೆ. ಇಂತಹ ಪ್ರವೃತ್ತಿಯನ್ನು ಹತ್ತಿಕ್ಕಬೇಕು” ಎಂದು ಪೀಠ ಹೇಳಿದೆ. ಅಲ್ಲದೇ, ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಕಾಲಾವಕಾಶ ನೀಡಬೇಕು ಎಂಬ ಮನವಿಯನ್ನೂ ವಿಭಾಗೀಯ ಪೀಠವು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: 2018ರ ಆಗಸ್ಟ್‌ 7ರಂದು ರಾಜ್ಯ ಸರ್ಕಾರವು ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. 419 ಅರ್ಜಿಗಳು ಬಂದಿದ್ದವು, ಅವುಗಳನ್ನು ಪರಿಶೀಲನೆ ನಡೆಸಿ ಆಯ್ಕೆ ಸಮಿತಿ ಮೂವರ ಹೆಸರನ್ನು ಶಿಫಾರಸು ಮಾಡಿತ್ತು. ಅದರಂತೆ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಆ ಮೂವರ ಹೆಸರುಗಳನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ರಾಜ್ಯಪಾಲರು, ಮಾಜಿ ಕಾನೂನು ಕಾರ್ಯದರ್ಶಿ ಎನ್ ಸಿ ಶ್ರೀನಿವಾಸ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಸದಸ್ಯರನ್ನಾಗಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಎಸ್ ಎಂ ಸೋಮಶೇಖರ್ ಹಾಗೂ ಶಿವಮೊಗ್ಗದ ವಕೀಲ ಕೆ ಪಿ ಮಂಜುನಾಥ್ ಅವರನ್ನು ನೇಮಕ ಮಾಡಿ 2019ರ ಫೆಬ್ರವರಿ 22ರಂದು ಆದೇಶ ಹೊರಡಿಸಿದ್ದರು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಅಲ್ಲದೇ, ಅಂಜಲಿ ಭಾರದ್ವಾಜ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ನೇಮಕ ಏಕಪಕ್ಷೀಯವಾಗಿದ್ದು, ನೇಮಕಗೊಂಡಿರುವವರ ಹಿನ್ನೆಲೆ ಪರಿಶೀಲನೆ ನಡೆಸಿಲ್ಲ, ನೇಮಕಾತಿ ಸಂವಿಧಾನದ 21 ಮತ್ತು 141ನೇ ವಿಧಿಗೆ ವಿರುದ್ಧವಾಗಿದೆ. ಜತೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿ ತರಾತುರಿಯಲ್ಲಿ ನೇಮಕ ಪ್ರಕ್ರಿಯೆ ನಡೆಸಲಾಗಿದೆ ಎಂದು ಆರೋಪಿಸಿದ್ದರು.

Related Stories

No stories found.
Kannada Bar & Bench
kannada.barandbench.com