ಹೊಸದಾಗಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ಗೆ ಹೇಳಿರುವುದೇನು?

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಗತ್ಯವಾಗಿರುವ ಸ್ಪರ್ಧೆಯನ್ನು ತಮ್ಮನ್ನು ಬಂಧಿಸುವ ಮೂಲಕ ಹತ್ತಿಕ್ಕಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Arvind Kejriwal, Supreme Court and ED
Arvind Kejriwal, Supreme Court and ED

ಲೋಕಸಭೆ ಚುನಾವಣೆಗೆ ಮುನ್ನ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಇ ಡಿ ಬಂಧಿಸಿರುವುದು ಜಾರಿ ನಿರ್ದೇಶನಾಲಯದ ನಿರಂಕುಶ ವೈಖರಿಯನ್ನು ಹಾಗೂ ಅದನ್ನು ತನ್ನ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ದುರುಪಯೋಗಪಡಿಸಿಕೊಂಡಿರುವ ಬಿಜೆಪಿಯ ನಡೆಯ ಬಗ್ಗೆ ವಿವರವಾಗಿ ಹೇಳುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಹೊಸ ಪ್ರತ್ಯುತ್ತರ ಅಫಿಡವಿಟ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌  ಆತಂಕ ವ್ಯಕ್ತಪಡಿಸಿದ್ದಾರೆ [ಅರವಿಂದ್‌ ಕೇಜ್ರಿವಾಲ್‌ ವರ್ಸಸ್‌ ಜಾರಿ ನಿರ್ದೇಶನಾಲಯ].

ತಮ್ಮನ್ನು ಬಂಧಿಸುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಪೂರ್ವಾಪೇಕ್ಷಿತವಾಗಿರುವ ಪೈಪೋಟಿಯನ್ನು ಹತ್ತಿಕ್ಕಲಾಗಿದೆ ಎಂದು ಕೇಜ್ರಿವಾಲ್ ಅವರು ತಿಳಿಸಿದ್ದಾರೆ.

ಅಫಿಡವಿಟ್‌ನ ಪ್ರಮುಖಾಂಶಗಳು

  • ಕೇಂದ್ರ ಸರ್ಕಾರ ತನ್ನ ಅತಿದೊಡ್ಡ ರಾಜಕೀಯ ಎದುರಾಳಿಯಾದ ಆಮ್ ಆದ್ಮಿ ಪಕ್ಷ ಮತ್ತು ಅದರ ನಾಯಕರನ್ನು ಹತ್ತಿಕ್ಕಲು ಜಾರಿ ನಿರ್ದೇಶನಾಲಯ ಮತ್ತು ಅದರ ವ್ಯಾಪಕ ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಂಡಿದೆ ಎಂಬುದಕ್ಕೆ ಪ್ರಸ್ತುತ ಪ್ರಕರಣ ಶ್ರೇಷ್ಠ ಉದಾಹರಣೆಯಾಗಿದೆ.

  • ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್‌ 3ರ ಅಡಿ ಕೇಜ್ರಿವಾಲ್‌ ತಪ್ಪೆಸಗಿದ್ದಾರೆ ಎಂದು ಹೇಳುವ ಸಾಕ್ಷ್ಯಗಳ ಸ್ಪಷ್ಟ ಅನುಪಸ್ಥಿತಿ ಇದೆ.

  • ಇ ಡಿಯ ವಾದಗಳು ಮತ್ತು ಅದರ ನಿಲುವುಗಳು ಸಂವಿಧಾನದ 21ನೇ ವಿಧಿಗೆ (ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ತಿಲಾಂಜಲಿ ನೀಡುತ್ತವೆ.

  • ಕೇವಲ ಅಸಹಕಾರದ ಆರೋಪದ ಮೇಲೆ ಬಂಧನ ಮಾನ್ಯವಾಗುವುದಿಲ್ಲ ಎಂಬ ಸೆಕ್ಷನ್ 19ಅನ್ನು ಇ ಡಿ ವಿವರಿಸದೆ ಮರೆತಿದೆ. ಅಲ್ಲದೆ, ಅಸಹಕಾರ ಎಂದರೆ ಏನು ಎಂದು ಇ ಡಿ ವಿವರಿಸಿಲ್ಲ.

  • ಅಧಿಕೃತ ಕಾರ್ಯಭಾರಿ ಮೂಲಕವಾಗಲಿ ಅಥವಾ ಅಗತ್ಯವಾದ ಮಾಹಿತಿ ಅಥವಾ ದಾಖಲೆಗಳನ್ನು ಬರವಣಿಗೆಯ ಮೂಲಕ ಇಲ್ಲವೇ ವರ್ಚುವಲ್‌ ವಿಧಾನದ ಮೂಲಕವಾಗಲಿ ಪಡೆಯದೇ ಇರಲು ಕಾರಣವೇನು ಹಾಗೂ ಅವರ ದೈಹಿಕ ಹಾಜರಿಗೆ ಒತ್ತಾಯಿಸಿರುವುದೇಕೆ ಎನ್ನುವುದು ತಿಳಿಯುತ್ತಿಲ್ಲ.

Kannada Bar & Bench
kannada.barandbench.com