ಕೋವಿಡ್ ಹಿನ್ನೆಲೆಯಲ್ಲಿ ಕೆಲ ಪರೀಕ್ಷೆಗಳು ರದ್ದಾದ ಕಾರಣ ಸುಪ್ರೀಂ ಕೋರ್ಟ್ ಸಿಬಿಎಸ್ಇ ವಿದ್ಯಾರ್ಥಿಗಳಿಗಾಗಿ ಒಪ್ಪಿಗೆ ನೀಡಿರುವ ಮೌಲ್ಯಮಾಪನ ವಿಧಾನವು ಅಂಕ ಸುಧಾರಣೆಗಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ (ಸನ್ಯಂ ಗುಪ್ತಾ v/s ಸಿಬಿಎಸ್ಸಿ ಪ್ರಕರಣ).
ಮೇಲಿನ ವಿಧಾನ ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ರದ್ದುಗೊಂಡ ಪರೀಕ್ಷೆಗೆ ಅಂಕ ನೀಡಲಾಗುತ್ತದೆ. ಇದರ ಅನುಸಾರ ಹಿಂದೆ ವಿದ್ಯಾರ್ಥಿಗಳು ಬರೆದ ಪರೀಕ್ಷೆಗಳ ಸರಾಸರಿ ಅಂಕಗಳ ಆಧಾರದಲ್ಲಿ ಅವರನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲಾಗುವುದು ಎಂದು ಪ್ರತಿಭಾ ಸಿಂಗ್ ನೇತೃತ್ವದ ಹೈಕೋರ್ಟ್ ನ ಏಕಸದಸ್ಯ ಪೀಠ ಹೇಳಿದೆ.
2019ರ ಫೆಬ್ರುವರಿ-ಮಾರ್ಚ್ ನಲ್ಲಿ ನಡೆದ ಸಿಬಿಎಸ್ಸಿ ಪರೀಕ್ಷೆಯಲ್ಲಿ ಶೇ. 95.25 ಅಂಕ ಗಳಿಸಿದ್ದ 12ನೇ ತರಗತಿ ವಿದ್ಯಾರ್ಥಿ ಕೋರ್ಟ್ ಮೊರೆ ಹೋಗಿದ್ದರು. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಯಸಿದ್ದರಿಂದ ಅರ್ಜಿದಾರ ವಿದ್ಯಾರ್ಥಿಯು ಒಂದು ವರ್ಷ ವ್ಯರ್ಥವಾದರೂ ಚಿಂತಿಸದೆ ಮತ್ತೊಮ್ಮೆ ಅಕೌಂಟೆನ್ಸಿ, ಇಂಗ್ಲಿಷ್ ಕೋರ್, ಅರ್ಥಶಾಸ್ತ್ರ ಮತ್ತು ಬ್ಯುಸಿನೆಸ್ ಸ್ಟಡೀಸ್ ವಿಷಯಗಳನ್ನು ಬರೆದು ಅಂಕ ಸುಧಾರಿಸಿಕೊಳ್ಳಲು ನಿರ್ಧರಿಸಿದ್ದರು. ಈ ಪೈಕಿ ಮಾರ್ಚ್ 24ರಂದು ನಿಗದಿಯಾಗಿದ್ದ ಬ್ಯುಸಿನೆಸ್ ಸ್ಟಡೀಸ್ ವಿಷಯದ ಪರೀಕ್ಷೆಯು ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದುಗೊಂಡಿತ್ತು.
ಸುಪ್ರೀಂ ಕೋರ್ಟ್ ತನ್ನ ಜೂನ್ 25 ಮತ್ತು 26ರ ಆದೇಶದಲ್ಲಿ ರದ್ದುಗೊಂಡ ಪರೀಕ್ಷೆಗಳ ಸಾಮಾನ್ಯ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಅನ್ವಯಿಸಲು ಸೂಚಿಸಿರುವ ವಿಧಾನವನ್ನೇ ಅಂಕ ಸುಧಾರಣೆಗೆ ಪರೀಕ್ಷೆ ಬರೆದಿರುವ ತನಗೂ ವಿಸ್ತರಿಸಬೇಕು ಎಂದು ವಿದ್ಯಾರ್ಥಿಯು ಅರ್ಜಿಯಲ್ಲಿ ಕೋರಿದ್ದರು. ಅದರ ಅನುಸಾರ, ಉತ್ತಮ ಅಂಕಗಳಿಸಿದ ಸುಧಾರಿತ ಎರಡು ಪರೀಕ್ಷೆಗಳ ಸರಾಸರಿ ಅಂಕವನ್ನು ರದ್ದಾದ ಪರೀಕ್ಷೆಯ ಅಂಕವನ್ನಾಗಿ ಪರಿಗಣಿಸಬೇಕು ಎಂದು ಕೋರಿದ್ದರು.
ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠವು ಹೀಗೆ ಹೇಳಿದೆ:
ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಅಂಕ ಸುಧಾರಣೆಗಾಗಿ ಪರೀಕ್ಷೆ ಬರೆದ 4,500 ವಿದ್ಯಾರ್ಥಿಗಳಿಗೆ ಅನನುಕೂಲತೆ ಆಗಿದೆ ಎಂದಿರುವ ಕೋರ್ಟ್ ಹೀಗೆ ಹೇಳಿದೆ:
ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿರುವ ಯೋಜನೆಯ ಅಡಿಯೇ ಅರ್ಜಿದಾರ ವಿದ್ಯಾರ್ಥಿಗೆ ಅಂಕ ಪಟ್ಟಿ ವಿತರಿಸುವಂತೆ ಸಿಬಿಎಸ್ಇಗೆ ಕೋರ್ಟ್ ಸೂಚಿಸಿದೆ. ಅರ್ಜಿದಾರ ವಿದ್ಯಾರ್ಥಿಯ ಪರ ರಿಷಿ ಮನ್ಚಂದ, ಅರುಣ್ ಕುಮಾರ್ ವಾದಿಸಿದರು. ಹಿರಿಯ ವಕೀಲ ಮಣೀಂದರ್ ಆಚಾರ್ಯ ಅಮಿಕಸ್ ಕ್ಯೂರಿಯಾಗಿದ್ದರು. ಅಮಿತ್ ಬನ್ಸಲ್ ಮತ್ತು ಸೀಮಾ ಡೊಲೊ ಅವರು ಸಿಬಿಎಸ್ಇ ಪರ ವಾದ ಮಂಡಿಸಿದರು.