ಸ್ವರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅಟಾರ್ನಿ ಜನರಲ್ ವೇಣುಗೋಪಾಲ್ ನಕಾರ; ಎಸ್‌ ಜಿ ಬಳಿಗೆ ಅರ್ಜಿ

ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು “ಮುಂಬೈ ಕಲೆಕ್ಟೀವ್” ಸಮಾರಂಭದಲ್ಲಿ ನಟಿ ಸ್ವರಾ ಭಾಸ್ಕರ್ ನೀಡಿದ್ದ ಹೇಳಿಕೆ ವಿವಾದದ ಕೇಂದ್ರ ಬಿಂದು. ಎಜಿ ಒಪ್ಪಿಗೆ ದೊರೆಯದ ಕಾರಣಕ್ಕೆ ಎಸ್‌ಜಿ ಅಂಗಳಕ್ಕೆ ಚೆಂಡು.
ಸ್ವರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅಟಾರ್ನಿ ಜನರಲ್ ವೇಣುಗೋಪಾಲ್ ನಕಾರ; ಎಸ್‌ ಜಿ ಬಳಿಗೆ ಅರ್ಜಿ

ಕಳೆದ ಫೆಬ್ರುವರಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ನೀಡಿದ ಪ್ರತಿಕ್ರಿಯೆನ್ನಾಧರಿಸಿ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಅರ್ಜಿಗೆ ಒಪ್ಪಿಗೆ ನೀಡಲು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ನಿರಾಕರಿಸಿದ್ದಾರೆ.

ಸ್ವರಾ ನೀಡಿರುವ ಹೇಳಿಕೆ “ಸತ್ಯಾಂಶದಿಂದ ಕೂಡಿದೆ” ಎಂದಿರುವ ವೇಣುಗೋಪಾಲ್ ಅವರು ಅದು “ಭಾಷಣಕಾರರ ಗ್ರಹಿಕೆ” ಎಂದಿದ್ದಾರೆ.

ಸ್ವರಾ ಹೇಳಿಕೆಯ ಮೊದಲ ಭಾಗವು ನಿಂದನಾತ್ಮಕವಾಗಿದೆ ಎಂಬ ಅರ್ಜಿದಾರರ ವಾದಕ್ಕೆ ವೇಣುಗೋಪಾಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ:

“ಸುಪ್ರೀಂ ಕೋರ್ಟ್‌ ತೀರ್ಪನ್ನು ಆಧರಿಸಿ ಸ್ವರಾ ಹೇಳಿಕೆ ನೀಡಿದ್ದಾರೆ ವಿನಾ ಅದನ್ನು ಸಂಸ್ಥೆಯ ಮೇಲಿನ ದಾಳಿ ಎನ್ನಲಾಗದು. ಸುಪ್ರೀಂ ಕೋರ್ಟ್‌ ವಿರುದ್ಧ ಯಾವುದೇ ತೆರನಾದ ಹೇಳಿಕೆ ನೀಡಿಲ್ಲ ಅಥವಾ ಅಪನಿಂದಿಸುವ ಅಥವಾ ಅಪಮಾನಕ್ಕೆ ಈಡುಮಾಡುವ ಅಥವಾ ನ್ಯಾಯಾಲಯದ ಪರಮಾಧಿಕಾರವನ್ನು ಕುಂದಿಸುವ ಹೇಳಿಕೆಯನ್ನು ಅವರು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಹೇಳಿಕೆಯು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದ ವ್ಯಾಪ್ತಿಗೆ ಒಳಪಡುವುದಿಲ್ಲ”.
ಕೆ ಕೆ ವೇಣುಗೋಪಾಲ್, ಅಟಾರ್ನಿ ಜನರಲ್

ಸುಪ್ರೀಂ ಕೋರ್ಟ್‌ ನಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಾಗ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 15, ನಿಯಮ (3)ರ ಅಡಿ ಅಟಾರ್ನಿ ಜನರಲ್ ಒಪ್ಪಿಗೆ ಪಡೆಯಬೇಕಾಗುತ್ತದೆ. ಸ್ವರಾ ಭಾಸ್ಕರ್ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವಿರುದ್ಧ “ಅವಹೇಳನಕಾರಿ ಮತ್ತು ವಿವಾದಾತ್ಮಕ” ಹೇಳಿಕೆ ನೀಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು "ಮುಂಬೈ ಕಲೆಕ್ಟೀವ್" ಸಮಾರಂಭದಲ್ಲಿ ನಟಿ ಸ್ವರಾ ಭಾಸ್ಕರ್ ಮಾಡಿದ್ದಾರೆ ಎನ್ನಲಾದ ಹೇಳಿಕೆಗಳನ್ನಾಧರಿಸಿ ಅರ್ಜಿದಾರರು ಕೋರ್ಟ್ ಕದ ತಟ್ಟಿದ್ದಾರೆ.

ಸ್ವರಾ ಭಾಸ್ಕರ್ ಅಂದಿನ ಸಮಾರಂಭದಲ್ಲಿ ನೀಡಿದ ಹೇಳಿಕೆ ಇಂತಿದೆ:

"ಬಾಬರಿ ಮಸೀದಿ ಧ್ವಂಸ ಅಕ್ರಮ ಎಂದು ಹೇಳುವ ನಮ್ಮ ಸುಪ್ರೀಂ ಕೋರ್ಟ್ ಅದೇ ತೀರ್ಪಿನಲ್ಲಿ ಮಸೀದಿ ಧ್ವಂಸ ಮಾಡಿದವರಿಗೇ ಬಹುಮಾನ ನೀಡುತ್ತದೆ. ಇಂಥ ದೇಶದಲ್ಲಿ ನಾವಿದ್ದೇವೆ. ನಮ್ಮ ಕೋರ್ಟ್‌ಗಳೇ ಸಂವಿಧಾನವನ್ನು ನಂಬುತ್ತವೆಯೋ, ಇಲ್ಲವೋ ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ. ವಿದ್ಯಾರ್ಥಿಗಳು, ಮಹಿಳೆಯರು ಮತ್ತು ನಾಗರಿಕ ಹೋರಾಟಗಳಲ್ಲಿ ಭಾಗಿಯಾಗಿದ್ದವರು ನಮಗೆ ದಾರಿ ತೋರಿಸಿದ್ದಾರೆ. ಪ್ರತಿರೋಧ ದಾಖಲಿಸಲು ಅದೇ ನಮಗೆ ಉಳಿದಿರುವ ದಾರಿ ಎಂಬುದು ನನಗೆ ಖಾತರಿಯಾಗಿದೆ”.

ಸ್ವರಾ ಅವರ ಮೇಲಿನ ಹೇಳಿಕೆಯು ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವಂತಿದೆ. ಅಲ್ಲದೇ ಅವರು ನ್ಯಾಯಾಲಯದ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅರ್ಜಿದಾರರಾದ ಉಷಾ ಶೆಟ್ಟಿ ಅವರ ಪರ ವಕೀಲರಾದ ಅನೂಜ್ ಸೆಕ್ಸೇನಾ, ಪ್ರಕಾಶ್ ಶರ್ಮಾ ಮತ್ತು ಮಹೇಕ್ ಮಹೇಶ್ವರಿ ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅದು ಕ್ರಿಮಿನಲ್ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಬರುವುದಲ್ಲದೇ ನ್ಯಾಯಾಲಯವನ್ನು ಅಪನಿಂದೆ ಮಾಡುವ ಉದ್ದೇಶ ಹೊಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸದ ಅರ್ಜಿದಾರರು ಸಾಲಿಸಿಟರ್ ಜನರಲ್ (ಎಸ್ ಜಿ) ತುಷಾರ್ ಮೆಹ್ತಾ ಅನುಮತಿ ಕೋರಿದ್ದಾರೆ.

“ಅಟಾರ್ನಿ ಜನರಲ್ ಅವರು ನೀಡಿರುವ ಸಕಾರಣಗಳಿಗೆ ಗೌರವಯುತವಾಗಿ ಅರ್ಜಿದಾರರು ಅಸಮ್ಮತಿ ಸೂಚಿಸಿದ್ದಾರೆ. ಆದ್ದರಿಂದ ಅಷ್ಟೇ ಗೌರಯುತವಾಗಿ ಸ್ವರಾ ಭಾಸ್ಕರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಲಾಗುತ್ತಿದೆ” ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಅವರಿಗೆ ಅರ್ಜಿದಾರರು ಪತ್ರ ಬರೆದಿದ್ದಾರೆ.

“ನಮ್ಮ ಕೋರ್ಟ್‌ಗಳೇ ಸಂವಿಧಾನವನ್ನು ನಂಬುತ್ತವೆಯೋ, ಇಲ್ಲವೋ ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ” ಎಂಬುದು ಬೀಸು ಹೇಳಿಕೆಯಾಗಿದ್ದು, ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.

"ಸ್ವರಾ ಭಾಸ್ಕರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ನಾನು ಒಪ್ಪಿಗೆ ನೀಡುವುದಿಲ್ಲ ."
ಕೆ ಕೆ ವೇಣುಗೋಪಾಲ್, ಅಟಾರ್ನಿ ಜನರಲ್

Related Stories

No stories found.
Kannada Bar & Bench
kannada.barandbench.com