ಟೀಕೆ ಹತ್ತಿಕ್ಕಲು ಬಾಬಾ ರಾಮದೇವ್‌ ವ್ಯಕ್ತಿತ್ವ ಹಕ್ಕು ಬಳಕೆ: ದೆಹಲಿ ಹೈಕೋರ್ಟ್‌ಗೆ ಸಾ. ಮಾಧ್ಯಮ ವೇದಿಕೆಗಳ ಆಕ್ಷೇಪ

ಬಾಬಾ ರಾಮದೇವ್ ಅವರು ತಮ್ಮ ಹೆಸರು, ಚಿತ್ರ, ರೂಪ-ಸಾದೃಶ್ಯ ಹಾಗೂ ತಮ್ಮ ವ್ಯಕ್ತಿತ್ವದ ಇತರೆ ಅಂಶಗಳನ್ನು ರಕ್ಷಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
X, Meta and Baba Ramdev
X, Meta and Baba Ramdev
Published on

ಬಾಬಾ ರಾಮದೇವ್‌ ಅವರು ಸಲ್ಲಿಸಿರುವ ವ್ಯಕ್ತಿತ್ವ ರಕ್ಷಣೆ ಕೋರಿರುವ ದಾವೆ ಅಣಕ, ವ್ಯಂಗ್ಯ, ರಾಜಕೀಯ ಟಿಪ್ಪಣಿ, ಸುದ್ದಿ ವಿವರಣೆ ಹಾಗೂ ಸುಳ್ಳು ಸುದ್ದಿ ಬಹಿರಂಗದಂತಹ ವಿಚಾರಗಳನ್ನು ಕೂಡ ಹತ್ತಿಕ್ಕಲು ನಿರ್ದೇಶನ ಕೋರುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಮಧ್ಯಸ್ಥ ಕಂಪೆನಿಗಳು ದೆಹಲಿ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿವೆ.

ಇಂತಹ ಆದೇಶಗಳನ್ನು ನೀಡುವುದು ನಾಗರಿಕರ ವಾಕ್‌ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಎಕ್ಸ್‌, ಮೆಟಾ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಪರ ವಕೀಲರು ವಾದಿಸಿದರು.

Also Read
ವಿದ್ಯಾರ್ಥಿಗಳಿಂದ ವೈಯಕ್ತಿಕ ಮಾಹಿತಿ ಸಂಗ್ರಹ: ತಮಿಳುನಾಡು ಸರ್ಕಾರದ ಕ್ರಮವನ್ನು ರದ್ದುಪಡಿಸಿದ ಮದ್ರಾಸ್‌ ಹೈಕೋರ್ಟ್‌

ತೆಗೆದುಹಾಕಲು ಕೇಳಿರುವ ವಿಷಯಗಳಲ್ಲಿ ರಾಮದೇವ್ ಅವರು ಆನೆಯ ಮೇಲೆ ಸವಾರಿ ಮಾಡುವ ವಿಡಿಯೋಗಳು, ಅಲೋಪಥಿ ವೈದ್ಯರ ಮುಂದೆ ಚಿಕಿತ್ಸೆಗಾಗಿ ಮಲಗಿರುವುದಾಗಿ ತೋರಿಸುವ ಪೋಸ್ಟ್‌ಗಳು ಹಾಗೂ ಪೆಟ್ರೋಲ್ ಬೆಲೆಗಳ ಕುರಿತ ಉಲ್ಲೇಖಗಳೂ ಸೇರಿವೆ. ಇವು ಕಾನೂನಿನ ಅಡಿಯಲ್ಲಿ ರಕ್ಷಿತ ಅಭಿವ್ಯಕ್ತಿಗಳು ಎಂದು ಅವರು ತಿಳಿಸಿದರು.

ಅತಿಯಾದ ಅಥವಾ ಅಪಾಯಕಾರಿ ವಸ್ತುವಿಷಯವನ್ನು ತೆಗೆದುಹಾಕಲು ಯಾವುದೇ ಸಮಸ್ಯೆ ಇಲ್ಲ; ಆದರೆ ಸುದ್ದಿವಿವರಣೆಗಳನ್ನು ವ್ಯಕ್ತಿತ್ವ ಹಕ್ಕುಗಳ ಹೆಸರಿನಲ್ಲಿ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಕರಣದಲ್ಲಿ ಜಾಗತಿಕ ಮಟ್ಟದಲ್ಲಿ ಸಾ. ಮಾಧ್ಯಮ ವಸ್ತುವಿಷಯ ನಿರ್ಬಂಧಕ್ಕೆ ಆದೇಶ ನೀಡಲು ಕೋರಿರುವುದು ಅಥವಾ ನಿರೀಕ್ಷಣಾ ಪ್ರತಿಬಂಧಕಾಜ್ಞೆ (ಮಧ್ಯಸ್ಥ ಕಂಪೆನಿಗಳಿಂದ ಸ್ವಯಂಪ್ರೇರಿತವಾಗಿ ವಿಷಯ ತೆಗೆದುಹಾಕುವ ಆದೇಶ) ನೀಡುವುದಕ್ಕೂ ಮಧ್ಯಸ್ಥ ವೇದಿಕೆಗಳು ವಿರೋಧ ವ್ಯಕ್ತಪಡಿಸಿದವು.

ಆದರೆ ನಿರೀಕ್ಷಣಾ ಪ್ರತಿಬಂಧಕಾಜ್ಞೆ ಕುರಿತು ರಾಮದೇವ್‌ ಅವರು ಮನವಿ ಮಾಡಿಲ್ಲ, ನ್ಯಾಯಾಲಯವೂ ಅದನ್ನು ಪರಿಗಣಿಸುತ್ತಿಲ್ಲ ಎಂದು ನ್ಯಾ. ಜ್ಯೋತಿ ಸಿಂಗ್‌ ಅವರು ತಿಳಿಸಿದರು.

Also Read
ದೀಪ ಬೆಳಗುವ ಕಾಲ ಬರುತ್ತದೆ: ನ್ಯಾ. ಜಿ ಆರ್ ಸ್ವಾಮಿನಾಥನ್ ಮಾರ್ಮಿಕ‌ ನುಡಿ

ಸಾಮಾಜಿಕ ಮಾಧ್ಯಮ ಮಧ್ಯಸ್ಥ ಕಂಪೆನಿಗಳ ವಾದಗಳಿಗೆ ಬಾಬಾ ರಾಮದೇವ್‌ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಜೀವ್ ನಾಯರ್ ವಿರೋಧ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ನ್ಯಾಯಸಮ್ಮತ ನಡೆ ನಿರೀಕ್ಷಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಮಧ್ಯವರ್ತಿಗಳು ಅವಹೇಳನಕಾರಿ ಮತ್ತು ಮಾನಹಾನಿಕಾರಕ ವಿಷಯಗಳನ್ನು ತೆಗೆದುಹಾಕುವ ಕ್ರಮಕ್ಕೂ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ವಸ್ತುವಿಷಯ ತೆಗೆದುಹಾಕುವ ವಿಚಾರದಲ್ಲಿ ಎರಡೂ ಪಕ್ಷಕಾರರ ನಡುವೆ ಭಿನ್ನಾಭಿಪ್ರಾಯ ಇರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು, ತೆಗೆದುಹಾಕಬೇಕಾದ ವಿಷಯಗಳ ಪಟ್ಟಿಯನ್ನು ರಾಮದೇವ್ ಸಲ್ಲಿಸಬೇಕು ಹಾಗೂ ಅದಕ್ಕೆ ಮಧ್ಯವರ್ತಿಗಳು ತಮ್ಮ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು. “ನಾನು ಅವುಗಳನ್ನು ಪರಿಶೀಲಿಸಿ ತೀರ್ಮಾನಿಸುತ್ತೇನೆ,” ಎಂದು ನ್ಯಾಯಾಲಯ ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 18ರಂದು ನಡೆಯಲಿದೆ.

Kannada Bar & Bench
kannada.barandbench.com