ಗಲಭೆ ಪ್ರಕರಣ: ಶ್ರೀಕಾಂತ ಪೂಜಾರಿ ಜಾಮೀನು ಆದೇಶ ಕಾಯ್ದಿರಿಸಿದ ಹುಬ್ಬಳ್ಳಿ ನ್ಯಾಯಾಲಯ

ಶ್ರೀಕಾಂತ್‌ ಅವರ ವಿರುದ್ಧ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ 13 ಕ್ರಿಮಿನಲ್ ಪ್ರಕರಣ ಹಾಗೂ 3 ಮುಂಜಾಗ್ರತಾ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಜಾಮೀನು ಆದೇಶ ನಾಳೆ ಪ್ರಕಟವಾಗಲಿದೆ.
ಗಲಭೆ ಪ್ರಕರಣ: ಶ್ರೀಕಾಂತ ಪೂಜಾರಿ ಜಾಮೀನು ಆದೇಶ ಕಾಯ್ದಿರಿಸಿದ ಹುಬ್ಬಳ್ಳಿ ನ್ಯಾಯಾಲಯ

ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ 1992ರಲ್ಲಿ ದೇಶಾದ್ಯಂತ ನಡೆದಿದ್ದ ಗಲಭೆಗಳ ವೇಳೆ ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಕೋಮುಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ ಪೂಜಾರಿ ವಿರುದ್ಧದ ಜಾಮೀನು ಅರ್ಜಿಯ ಆದೇಶವನ್ನು ಹುಬ್ಬಳ್ಳಿ ನ್ಯಾಯಾಲಯವು ಗುರುವಾರ ಕಾಯ್ದಿರಿಸಿದೆ.

ಕಾಂತೇಶ್‌ ಅಲಿಯಾಸ್‌ ಶ್ರೀಕಾಂತ್‌ ಅಲಿಯಾಸ್‌ ಕಾಂತ್ಯ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಅವರು ನಡೆಸಿದರು.

“ತನಿಖಾಧಿಕಾರಿಯ ಆಕ್ಷೇಪಣೆಯ ಜೊತೆಗೆ ಸರ್ಕಾರಿ ಅಭಿಯೋಜಕಿ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಕೀಲರು 23.04.1996ರ ಪ್ರಮಾಣೀಕೃತ ತೀರ್ಪಿನ ಪ್ರತಿಯ ಜೊತೆಗೆ ಮೆಮೊ ಸಲ್ಲಿಸಿದ್ದಾರೆ. ಉಭಯ ಪಕ್ಷಕಾರರ ವಾದ ಆಲಿಸಲಾಗಿದೆ. ಜನವರಿ 5ಕ್ಕೆ ಆದೇಶ ಕಾಯ್ದಿರಿಸಲಾಗಿದೆ”ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ಶ್ರೀಕಾಂತ್‌ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಈಗ ಜಾಮೀನು ನೀಡಿದರೆ ನ್ಯಾಯಾಲಯಕ್ಕೆ ಗೈರಾಗುವ ಸಾಧ್ಯತೆ ಇರುತ್ತದೆ. ಶ್ರೀಕಾಂತ್‌ ಅವರ ವಿರುದ್ಧ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ 13 ಕ್ರಿಮಿನಲ್‌ ಪ್ರಕರಣ ಹಾಗೂ 3 ಮುಂಜಾಗ್ರತಾ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಹಜರೇಸಾಬ್‌ ಮಲಿಕ್‌ಸಾಬ್‌ ಅಂಗಡಿ ಅವರು ಸಲ್ಲಿಸಿದ ದೂರಿನ ಅನ್ವಯ ಮೂರನೇ ಆರೋಪಿಯಾಗಿರುವ ಶ್ರೀಕಾಂತ್‌ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 436, 427 ಜೊತೆಗೆ 149 ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಸಂಬಂಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.ಮುಂದೆ ಪ್ರಕರಣವನ್ನು ವಿಭಜಿಸಿ ಶ್ರೀಕಾಂತ್‌ ಮತ್ತಿತರರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂದು ಅರ್ಜಿದಾರರು ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ. ಮುಂದುವರೆದು ಇತರೆ ಆರೋಪಿಗಳ ವಿರುದ್ಧದ ಮೂಲ ಪ್ರಕರಣವನ್ನು ಸತ್ರ ನ್ಯಾಯಾಲಯ ಇತ್ಯರ್ಥಪಡಿಸಿದ್ದು, ಆರೋಪಿಗಳನ್ನು ಖುಲಾಸೆಗಳಿಸಿತ್ತು. ಈ ಪ್ರಕರಣದ ದೂರು ಮತ್ತು ಎಫ್‌ಐಆರ್‌ ಅನ್ನು ನಾಶಪಡಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಪ್ರಸ್ತುತ ಶ್ರೀಕಾಂತ್‌ನನ್ನು ಬಂಧಿಸಿದ್ದು, ಎಫ್‌ಐಆರ್‌ ಮತ್ತಿತರ ದೂರಿನ ಪ್ರತಿ ಇಲ್ಲದಿದ್ದರೂ ಆತನನ್ನು ಡಿಸೆಂಬರ್‌ 29ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ಕೋರುತ್ತಿರುವುದಾಗಿ ಅರ್ಜಿಯಲ್ಲಿ ಹೇಳಿದ್ದಾರೆ.

ವಿಚಾರಣೆ ವೇಳೆ ಸರ್ಕಾರವನ್ನು ಅಭಿಯೋಜಕಿ ಅಮರಾವತಿ ಪ್ರತಿನಿಧಿಸಿದರು. ಶ್ರೀಕಾಂತ್‌ ಪರವಾಗಿ ವಕೀಲ ಅಶೋಕ ಅಣ್ವೇಕರ ವಕಾಲತ್ತು ಹಾಕಿದ್ದು, ವಕೀಲ ಸಂಜೀವ ಬಡಸ್ಕರ್ ವಾದಿಸಿದರು.

Related Stories

No stories found.
Kannada Bar & Bench
kannada.barandbench.com