ಕೇರಳ ಹೈಕೋರ್ಟ್‌ ನ್ಯಾಯಮೂರ್ತಿಯವರ ಹಳೆಯ ದೂರಿಗೆ ಸಂಬಂಧಿಸಿದಂತೆ ಕತಾರ್ ಏರ್‌ವೇಸ್‌ಗೆ ಕೇರಳ ಗ್ರಾಹಕ ನ್ಯಾಯಾಲಯ ದಂಡ

ತಾವು ಹಿರಿಯ ವಕೀಲರಾಗಿದ್ದ ವೇಳೆ 2018ರಲ್ಲಿ ನ್ಯಾ. ಥಾಮಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವಿಳಂಬವಾಗಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಹಕರ ವೇದಿಕೆ 2023ರಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.
ಕೇರಳ ಹೈಕೋರ್ಟ್‌ ನ್ಯಾಯಮೂರ್ತಿಯವರ ಹಳೆಯ ದೂರಿಗೆ ಸಂಬಂಧಿಸಿದಂತೆ ಕತಾರ್ ಏರ್‌ವೇಸ್‌ಗೆ ಕೇರಳ ಗ್ರಾಹಕ ನ್ಯಾಯಾಲಯ ದಂಡ
A1

ಮಾನ್ಯತೆ ಪಡೆದ ಟಿಕೆಟ್‌ ಇದ್ದರೂ ತನ್ನನ್ನು ಹಾಗೂ ತನ್ನ ಸ್ನೇಹಿತರನ್ನು ವಿಮಾನದಿಂದ ಇಳಿಸಿದ್ದಕ್ಕಾಗಿ ಕತಾರ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆ ವಿರುದ್ಧ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಪರಿಹಾರ ಕೋರಿ ಐದು ವರ್ಷಗಳ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ  ಕೇರಳದ ಗ್ರಾಹಕ ನ್ಯಾಯಾಲಯ ವಿಮಾನಯಾನ ಸಂಸ್ಥೆಗೆ ₹ 7.5 ಲಕ್ಷ ದಂಡ ವಿಧಿಸಿದೆ [ಬೆಚು ಕುರಿಯನ್‌ ಥಾಮನಸ್‌ ಮತ್ತು ಕತಾರ್‌ ಏರ್‌ವೇಸ್‌ ನಡುವಣ ಪ್ರಕರಣ].

ಮಾನ್ಯತೆ ಪಡೆದ ಬೋರ್ಡಿಂಗ್ ಪಾಸ್‌ ಇರುವ ಪ್ರಯಾಣಿಕರಿಗೆ ವಿಮಾನ ಏರಲು ಅನುಮತಿ ನಿರಾಕರಿಸುವುದು ಅನ್ಯಾಯದ ವ್ಯಾಪಾರ ಕ್ರಮವಾಗಿದ್ದು ಸೇವಾಲೋಪವನ್ನು ತೋರಿಸುತ್ತದೆ ಎಂದು ವೇದಿಕೆ ತೀರ್ಪು ನೀಡಿದೆ.

ತಾವು ಹಿರಿಯ ವಕೀಲರಾಗಿದ್ದ ವೇಳೆ 2018ರಲ್ಲಿ ನ್ಯಾ. ಬೆಚು ಕುರಿಯನ್ ಥಾಮಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ  ವಿಳಂಬವಾಗಿದೆ ಎಂದು ಫೆಬ್ರವರಿ 2023ರಲ್ಲಿ ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ  ಎರ್ನಾಕುಲಂನಲ್ಲಿರುವ ಜಿಲ್ಲಾ ಗ್ರಾಹಕ ಪರಿಹಾರ ಆಯೋಗ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಏರ್‌ವೇಸ್‌ ₹10 ಲಕ್ಷ ಪರಿಹಾರ ನೀಡಬೇಕೆಂದು ಅರ್ಜಿದಾರ ನ್ಯಾ. ಬೆಚು ಕುರಿಯನ್‌ ಥಾಮಸ್‌ ಕೋರಿದ್ದರು.

Also Read
ಪ್ರಯಾಣದ ವೇಳೆ ಕೆಲಸ ಮಾಡದ ಎ ಸಿ: ₹15,000 ಪರಿಹಾರ ನೀಡುವಂತೆ ಓಲಾಗೆ ಬೆಂಗಳೂರಿನ ಗ್ರಾಹಕ ವೇದಿಕೆ ಸೂಚನೆ

ತಾಂತ್ರಿಕ ಸಮಸ್ಯೆಯಿಂದ ಉಂಟಾದ ಮಿತಿಮೀರಿದ ಬುಕಿಂಗ್‌ನಿಂದಾಗಿ ದೋಹಾದಿಂದ ಇಂಗ್ಲೆಂಡ್‌ನ ಎಡಿನ್‌ಬರ್ಗ್‌ಗೆ ಪಯಾಣಿಸಲು ದೂರುದಾರರಿಗೆ ವಿಮಾನಯಾನ ಸಂಸ್ಥೆ ಅನುಮತಿ ನೀಡಿರಲಿಲ್ಲ ಎಂದು ಸೋಮವಾರ ಹೊರಡಿಸಿದ ಆದೇಶದಲ್ಲಿ, ಅಧ್ಯಕ್ಷ ಡಿ.ಬಿ. ಬಿನು ಮತ್ತು ಸದಸ್ಯರಾದ ವಿ. ರಾಮಚಂದ್ರನ್ ಮತ್ತು ಶ್ರೀವಿಧಿಯಾ ಟಿ ಎನ್ ಅವರನ್ನೊಳಗೊಂಡ ಪೀಠ ಹೇಳಿದೆ.

ಈ ವಿಚಾರವನ್ನು ವಿಮಾನಯಾನ ಸಂಸ್ಥೆ ಒಪ್ಪಿಕೊಂಡಿದ್ದು ಅನಾನುಕೂಲತೆ ಉಂಟಾದದ್ದಕ್ಕಾಗಿ ವಿಮಾನಯಾನ ಸಂಸ್ಥೆ ಗ್ರಾಹಕರು/ ದೂರುದಾರರ ಕ್ಷಮೆ ಕೋರಿದ್ದು ದೋಹಾದ ಹೋಟೆಲ್‌ನಲ್ಲಿ ಊಟ ಮತ್ತು ವಸತಿ ಒದಗಿಸಿತ್ತು ಎಂಬ ವಿಚಾರವನ್ನು ಆಯೋಗದ ಗಮನಕ್ಕೆ ತರಲಾಯಿತು.

 “ದೂರುದಾರರ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗಿದ್ದು ಅವರನ್ನು ಸುಳ್ಳುಗಾರ ಎಂದು ಕರೆಯಲಾಗಿದೆ. ಜೊತೆಗೆ ವಂಚನೆಯಲ್ಲಿ ತೊಡಗಿರುವ ಆರೋಪ ಮಾಡಲಾಗಿದೆ. ವಿಮಾನಯಾನ ಸಂಸ್ಥೆ ತಾನು ಸೇವಾ ಪೂರೈಕೆದಾರರಾಗಿ ಉತ್ತಮ ಹೆಸರು ಮತ್ತು ಸದ್ಭಾವನೆಯನ್ನು ಹೊಂದಿರುವುದಾಗಿ ಹೇಳಿಕೊಂಡಿರುವಾಗ ತಮ್ಮ ನ್ಯಾಯಸಮ್ಮತ ಹಕ್ಕು ಕೋರಿ ದೂರು ಸಲ್ಲಿಸಿದ ಗ್ರಾಹಕರ ವಿರುದ್ಧ ವಿಮಾನಯಾನ ಸಂಸ್ಥೆ ಆಧಾರರಹಿತ ಆರೋಪ ಮಾಡುವುದು ಅನ್ಯಾಯ ಮತ್ತು ಅನುಚಿತ ಸಂಗತಿ. ದೂರುದಾರರು ಒಂದು ದಿನದ ವಿಳಂಬದೊಂದಿಗೆ ತಮ್ಮ ಗಮ್ಯಸ್ಥಾನ ತಲುಪಿದ್ದಾರೆ ಎಂಬುದು ನಿರ್ವಿವಾದದ ವಿಚಾರ..." ಎಂದು ವೇದಿಕೆ ವಿವರಿಸಿದೆ. ಆದ್ದರಿಂದ 30 ದಿನಗಳಲ್ಲಿ ಒಟ್ಟು ₹7.5 ಲಕ್ಷ ದಂಡ ಪಾವತಿಸುವಂತೆ ಅದು ಕತಾರ್‌ ಏರ್‌ವೇಸ್‌ಗೆ ಸೂಚಿಸಿದೆ,

Related Stories

No stories found.
Kannada Bar & Bench
kannada.barandbench.com