ಬಿಬಿಎಂಪಿ, ಬಿಡಿಎ, ಕೆಐಎಡಿಬಿ ಕೆಟ್ಟ ದಾವೆದಾರರು ಎನ್ನದೆ ವಿಧಿಯಿಲ್ಲ: ಹೈಕೋರ್ಟ್‌ ಕಿಡಿ

ಬಿಬಿಎಂಪಿ ಶಾಲೆಯಲ್ಲಿ ಬಡವರ ಮಕ್ಕಳು ಕಲಿಯುತ್ತಾರೆಯೇ ವಿನಾ ಬೇರೆ ಶಾಲೆಗಳಲ್ಲಲ್ಲ. ನಾನು ಮುಖ್ಯ ನ್ಯಾಯಮೂರ್ತಿಗಳ ಜೊತೆ ಬಿಬಿಎಂಪಿ ನಡತೆಯ ಕುರಿತು ಚರ್ಚಿಸಿದೆ. ಬಿಬಿಎಂಪಿ, ಬಿಡಿಎ ಮತ್ತು ಕೆಐಡಿಬಿಯಲ್ಲಿ ಸಮಸ್ಯೆಗಳಿವೆ ಎಂದ ನ್ಯಾಯಾಲಯ.
Chief Justice N V Anjaria and Justice Krishna S. Dixit
Chief Justice N V Anjaria and Justice Krishna S. Dixit

“ಬಿಬಿಎಂಪಿ, ಬಿಡಿಎ ಮತ್ತು ಕೆಐಎಡಿಬಿಯಲ್ಲಿ ಸಮಸ್ಯೆ ಇದೆ. ಅವರು ಕೆಟ್ಟ ದಾವೆದಾರರು ಎಂದು ಹೇಳದೆ ವಿಧಿಯಿಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಮೌಖಿಕವಾಗಿ ಕಿಡಿಕಾರಿದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬಿಬಿಎಂಪಿ ಶಾಲೆಗಳ ಕುರಿತು ವರದಿ ಸಲ್ಲಿಸಲು ಮಾಹಿತಿ ಒದಗಿಸಲಾಗಿಲ್ಲ ಎಂದು ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಪೀಠದ ಗಮನಸೆಳೆದರು. ಆಗ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ಎನ್‌ ಕೆ ರಮೇಶ್‌ ಅವರು ಒಂದು ವಾರದಲ್ಲಿ ಎಂಟೂ ವಲಯಗಳಲ್ಲಿರುವ ಬಿಬಿಎಂಪಿ ಶಾಲೆಗಳ ಸ್ಥಿತಿಗತಿ ವರದಿಯನ್ನು ಸಚಿತ್ರವಾಗಿ ಸಲ್ಲಿಸಲಾಗುವುದು ಎಂದರು.

ಇದರಿಂದ ತೃಪ್ತರಾದ ನ್ಯಾ. ದೀಕ್ಷಿತ್‌ ಅವರು “ಬಿಬಿಎಂಪಿ ಶಾಲೆಯಲ್ಲಿ ಬಡವರ ಮಕ್ಕಳು ಕಲಿಯುತ್ತಾರೆಯೇ ವಿನಾ ಬೇರೆ ಶಾಲೆಗಳಲ್ಲಲ್ಲ. ನಾನು ಮುಖ್ಯ ನ್ಯಾಯಮೂರ್ತಿಗಳ ಜೊತೆ ಬಿಬಿಎಂಪಿ ನಡತೆಯ ಕುರಿತು ಚರ್ಚಿಸಿದೆ. ನಮಗೆ ಬಿಬಿಎಂಪಿ, ಬಿಡಿಎ ಮತ್ತು ಕೆಐಡಿಬಿಯಲ್ಲಿ ಸಮಸ್ಯೆಗಳಿವೆ. ಅವರು ಕೆಟ್ಟ ದಾವೆದಾರರು ಎಂದು ಹೇಳದೆ ವಿಧಿಯಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಫಣೀಂದ್ರ ಅವರು “ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ಒಂದು ಶೌಚಾಲಯವಿರುವ ಹಾಗೂ ಒಂದೂ ಶೌಚಾಲಯವಿಲ್ಲದೆ ಇರುವ ಶಾಲೆಗಳ ಸಂಖ್ಯೆ 123 ಎಂದು ವಿವರಿಸಲಾಗಿದೆ. ಈ ಪೈಕಿ 69 ಶಾಲೆಗಳಲ್ಲಿ ಮಾತ್ರ ಶೌಚಾಲಯ ಸಮಸ್ಯೆ ಇದೆ ಎಂದು ಸರ್ಕಾರ ತನ್ನ ವರದಿಯಲ್ಲಿ ಹೇಳಿದೆ. ಆರ್‌ಟಿಇ ಕಾಯಿದೆ ಅಡಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇರಬೇಕು. ಈ ಸಂಬಂಧ ವಿವರವಾದ ವರದಿಯನ್ನು ಸಿದ್ಧಪಡಿಸಲಾಗಿದೆ” ಎಂದರು.

“ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಸಮೀಕ್ಷೆ ನಡೆದಿಲ್ಲ. ಬಿಬಿಎಂಪಿ ಶಾಲೆಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಇಮೇಲ್‌ ಕಳುಹಿಸಿದರು ಬಿಬಿಎಂಪಿ ಮಾಹಿತಿ ನೀಡುತ್ತಿಲ್ಲ” ಎಂದರು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲೆ ನಿಲೋಫರ್‌ ಅಕ್ಬರ್‌ ಅವರು “ಶಾಲೆಗಳಲ್ಲಿ ಏನೆಲ್ಲಾ ಸಮಸ್ಯೆಗಳು ಇವೆ ಎಂಬುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲಾಗುವುದು” ಎಂದರು.

ಅಂತಿಮವಾಗಿ ಪೀಠವು “ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಶಾಲೆಗಳಲ್ಲಿದ್ದು, ಸರ್ಕಾರ ಮತ್ತು ಬಿಬಿಎಂಪಿ ಕೈಗೊಂಡಿರುವ ಕ್ರಮದ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು. ಇದು ಕೊನೆಯ ಅವಕಾಶ” ಎಂದು ಹೇಳಿ ವಿಚಾರಣೆಯನ್ನು ಮಾರ್ಚ್‌ 27ಕ್ಕೆ ಮುಂದೂಡಿತು.

ವಿವೇಕ ಸ್ಮಾರಕ: ವಿಚಾರಣೆಯ ಒಂದು ಹಂತದಲ್ಲಿ ಹಿರಿಯ ವಕೀಲ ಎಸ್‌ ಎಸ್ ನಾಗಾನಂದ ಅವರು, ‘ಈ ಪ್ರಕರಣದಲ್ಲಿ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿನ ಎನ್‌ಟಿಎಂ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳಿಗೆ ಪರಿಹಾರ ನೀಡಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಆದರೆ, ಈ ಶಾಲೆಯಲ್ಲಿ ಕಲಿಯುತ್ತಿದ್ದ 60 ಮಕ್ಕಳನ್ನು ಈಗಾಗಲೇ ಸಮೀಪದ ದೇವರಾಜ ಶಾಲೆಗೆ ಸೇರಿಸಲಾಗಿದೆ’ ಎಂದರು.

‘ಈಗ ಈ ಸ್ಥಳದಲ್ಲಿ ರಾಮಕೃಷ್ಣಾಶ್ರಮದ ವತಿಯಿಂದ ವಿವೇಕ ಸ್ಮಾರಕ ನಿರ್ಮಾಣವಾಗುತ್ತಿದೆ. ಎನ್‌ಟಿಎಂ ಶಾಲೆಯ ಸ್ಥಳದಲ್ಲಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದ ಹಲವು ಸುತ್ತಿನ ವ್ಯಾಜ್ಯಗಳಲ್ಲಿ ಹೈಕೋರ್ಟ್‌ ಈಗಾಗಲೇ ರಾಮಕೃಷ್ಣಾಶ್ರಮದ ಪರ ತೀರ್ಪು ನೀಡಿದೆ. ಆದರೂ, ಕೆಲವರು ಮಕ್ಕಳಿಂದ ಈ ಮಧ್ಯಂತರ ಅರ್ಜಿ ಸಲ್ಲಿಸಿ ಅನಗತ್ಯ ಹಸ್ತಕ್ಷೇಪ ಮಾಡಿದ್ದಾರೆ. ಆದ್ದರಿಂದ, ಈ ಅರ್ಜಿ ವಜಾಗೊಳಿಸಬೇಕು’ ಎಂದು ಕೋರಿದರು. ಇದನ್ನು ಅಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯಲ್ಲಿ ಮಧ್ಯಂತರ ಅರ್ಜಿ ವಜಾ ಮಾಡುವುದಾಗಿ ತಿಳಿಸಿತು.

Related Stories

No stories found.
Kannada Bar & Bench
kannada.barandbench.com