ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಛಲವಾದಿಪಾಳ್ಯ ವಾರ್ಡ್ನ ಬಿಜೆಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ರೇಖಾ ಪತಿ ಕದಿರೇಶ್ ಅವರ ಅಕ್ಕ ಮಾಲಾ ಹಾಗೂ ಸೆಲ್ವರಾಜ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾ ಮಾಡಿದೆ.
ಜಾಮೀನು ಕೋರಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಜಿ ಉಮಾ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ಕಳೆದ ಜೂನ್ 24 ರಂದು ಕದಿರೇಶ್ ಅವರ ಎರಡನೇ ಪತ್ನಿಯಾಗಿದ್ದ ರೇಖಾ ಅವರನ್ನು ಫ್ಲವರ್ ಗಾರ್ಡನ್ನಲ್ಲಿರುವ ಅವರ ಕಚೇರಿ ಬಳಿಯಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ದೂರು ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಪೊಲೀಸರು ಈ ಸಂಬಂಧ ಪೀಟರ್, ಸೂರ್ಯ, ಸ್ಟೀಫನ್, ಪುರುಷೋತ್ತಮ್, ಅಜಯ್, ಅರುಣ್ ಕುಮಾರ್, ಮಾಲಾ, ಸೆಲ್ವರಾಜ್ ಎಂಬುವರನ್ನು ಬಂಧಿಸಿದ್ದರು.
ಪ್ರಮುಖ ಆರೋಪಿಗಳಾದ ಮಾಲಾ ಹಾಗೂ ಸೆಲ್ವರಾಜ್ ಅವರು ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಹೈಕೋರ್ಟ್ನಲ್ಲಿ ಜಾಮೀನಿಗೆ ಮನವಿ ಮಾಡಿದ್ದರು. ಪ್ರಕರಣದ ತೀವ್ರತೆ ಪರಿಗಣಿಸಿ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿದೆ.