
ದೇಶದ ಯಾವುದೇ ಭಾಗದಲ್ಲಿ ಮೂರು ವರ್ಷ ಹೊಸ ಕಾನೂನು ಕಾಲೇಜು ತೆರೆಯದಂತೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ತಾತ್ಕಾಲಿಕ ನಿಲುಗಡೆ ಮಾಡಿದೆ.
ಕಳಪೆ ಗುಣಮಟ್ಟದ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವುದನ್ನು ತಡೆಯುವುದು ಮತ್ತು ಕಾನೂನು ಶಿಕ್ಷಣದ ಗುಣಮಟ್ಟ ಕಾಪಾಡುವುದು ಅಗತ್ಯ ಎಂದು ಮಂಡಳಿ ಹೇಳಿದೆ.
ಕಾನೂನು ಶಿಕ್ಷಣದ ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟ ಕುಸಿತವಾಗದಂತೆ ತಡೆಯಲು ಪರಿಷತ್ತು ಈ ಕ್ರಮ ಕೈಗೊಂಡಿದೆ. ಕಳಪೆ ಗುಣಮಟ್ಟದ ಸಂಸ್ಥೆಗಳು ಅನಿಯಂತ್ರಿತವಾಗಿ ಬೆಳೆಯುತ್ತಿರುವುದು, ರಾಜ್ಯ ಸರ್ಕಾರ ಅಂತಹ ಕಾಲೇಜುಗಳಿಗೆ ಅಯಾಚಿತವಾಗಿ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡುವುದು ಮತ್ತು ಸರಿಯಾದ ತಪಾಸಣೆ ಇಲ್ಲದೆ ವಿಶ್ವವಿದ್ಯಾಲಯಗಳ ಸಂಯೋಜನೆ ನಡೆಯುತ್ತಿರುವುದು, ಮತ್ತು ಕಾನೂನು ಶಿಕ್ಷಣದ ವಾಣಿಜ್ಯೀಕರಣ, ವ್ಯಾಪಕವಾದ ಶೈಕ್ಷಣಿಕ ಲೋಪ ಮತ್ತು ಅರ್ಹ ಅಧ್ಯಾಪಕರ ನಿರಂತರ ಕೊರತೆಯನ್ನು ತಡೆಗಟ್ಟಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಆಗಸ್ಟ್ 13ರಂದು ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರ್ಬಂಧದ ಪ್ರಮುಖಾಂಶಗಳು
ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳಿಗೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಹೊಸ ಕಾನೂನು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆಗಳನ್ನು ಸಲ್ಲಿಸದಿರಲು ಸಲಹೆ ನೀಡಲಾಗಿದೆ.
ಈಗಾಗಲೇ ಹೊಸ ಕಾಲೇಜಿಗೆ ಅನುಮತಿ ಕೋರಿ ಅಂತಿಮ ಹಂತದಲ್ಲಿ ಬಾಕಿ ಇರುವ ಅರ್ಜಿಗಳಿಗೆ ಮಾತ್ರ ಹಳೆಯ ನಿಯಮಗಳು ಅನ್ವಯವಾಗುತ್ತವೆ.
ದೇಶಾದ್ಯಂತ ಸಾಕಷ್ಟು ಸಂಖ್ಯೆಯ ಕಾನೂನು ಶಿಕ್ಷಣ ಕೇಂದ್ರಗಳಿದ್ದು ಸಂಖ್ಯೆ ಹೆಚ್ಚಿಸುವುದಕ್ಕಿಂತಲೂ ಅವುಗಳ ಗುಣಮಟ್ಟದ ವರ್ಧನೆಗೆ ಆದ್ಯತೆ ನೀಡಬೇಕಿದೆ.
ಈ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಕಾಲೇಜುಗಳ ತಪಾಸಣೆ ತೀವ್ರಗೊಳಿಸಲಾಗುವುದು. ಗುಣಮಟ್ಟ ಕಾಯ್ದುಕೊಳ್ಳದ ಕಾಲೇಜುಗಳ್ನು ಮುಚ್ಚುವ ಅವುಗಳ ಮಾನ್ಯತೆ ರದ್ದುಗೊಳಿಸುವ ಅಧಿಕಾರ ತನಗೆ (ಬಿಸಿಐ) ಇದೆ.
ಆದರೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು, ಪಂಗಡ/ಜಾತಿ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ವಿಕಲಚೇತನರಿಗಾಗಿ ಸ್ಥಾಪಿತ ಸಂಸ್ಥೆಗಳು, ಆದಿವಾಸಿ ಮತ್ತು ಪ್ರಗತಿ ಕಾಣದ ಜಿಲ್ಲೆಗಳ ಕಾಲೇಜುಗಳು, ಕೇಂದ್ರ/ರಾಜ್ಯ ವಿಶ್ವವಿದ್ಯಾಲಯಗಳು ಅಥವಾ ಸಂಬಂಧಿತ ಸಚಿವಾಲಯಗಳ ಶಿಫಾರಸ್ಸಿನ ಮೇರೆಗೆ ಸ್ಥಾಪಿತವಾಗುವ ಸಂಸ್ಥೆಗಳಿಗೆ ಈ ನಿರ್ಬಂಧ ಅನ್ವಯಿಸದು.
[ಬಿಸಿಐ ಪತ್ರಿಕಾ ಪ್ರಕಟಣೆಯ ಪ್ರತಿ]