
ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಕೆ ಆರ್ ಪುರ ಶಾಸಕ ಬೈರತಿ ಬಸವರಾಜ್ ಅವರನ್ನು ಬಂಧಿಸದಂತೆ ಹೊರಡಿಸಿರುವ ಮಧ್ಯಂತರ ರಕ್ಷಣಾ ಆದೇಶವನ್ನು ತೆರವುಗೊಳಿಸುವಂತೆ ಅಪರಾಧ ತನಿಖಾ ದಳವು (ಸಿಐಡಿ) ಗುರುವಾರ ಕರ್ನಾಟಕ ಹೈಕೋರ್ಟ್ಗೆ ಮನವಿ ಮಾಡಿದೆ.
ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೋಕಾ ಕಾಯಿದೆಯ ಸೆಕ್ಷನ್ 3 ಮತ್ತು 4 ಹೇರಲು ಸಿಐಡಿ ಉಪ ಅಧೀಕ್ಷಕರಿಗೆ ಅನುಮತಿ ನೀಡಿ ಸಿಐಡಿ ಪೊಲೀಸ್ ಮಹಾ ನಿರ್ದೇಶಕರು ಆಗಸ್ಟ್ 12ರಂದು ಹೊರಡಿಸಿರುವ ಆದೇಶ ರದ್ದತಿ ಕೋರಿ ಪ್ರಕರಣದ ಐದನೇ ಆರೋಪಿ ಶಾಸಕ ಬಿ ಎ ಬಸವರಾಜ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಬೈರತಿ ಬಸವರಾಜ್ ಪರವಾಗಿ ನೀಡಲಾಗಿರುವ ಮಧ್ಯಂತರ ರಕ್ಷಣಾ ಆದೇಶ ತೆರವುಗೊಳಿಸಬೇಕು” ಎಂದು ಕೋರಿದರು.
ಆಗ ಬಸವರಾಜ್ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಬಸವರಾಜ್ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗೆ ನಿರ್ದೇಶಿಸಿ ಹೈಕೋರ್ಟ್ ಈಗಾಗಲೇ ಮಧ್ಯಂತರ ಆದೇಶ ಮಾಡಿದೆ. ವಿಚಾರಣೆಗೆ ಹಾಜರಾಗಲು ಈಗಾಗಲೇ ಎರಡು ಬಾರಿ ಪೊಲೀಸರು ಸಮನ್ಸ್ ನೀಡಿದ್ದರು. ಅದರಂತೆ ಬಸವರಾಜ್ ಅವರು ವಿಚಾರಣೆಗೆ ಹಾಜರಾಗಿ ಅಗತ್ಯ ಸಹಕಾರ ನೀಡಿದ್ದಾರೆ. ಹೀಗಿದ್ದರೂ ತನಿಖೆ/ವಿಚಾರಣೆಗೆ ಸಹರಿಸುತ್ತಿಲ್ಲ. ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಸಿಐಡಿ ಪೊಲೀಸರು ವಾದಿಸುತ್ತಿರುವುದು ಸರಿಯಲ್ಲ” ಎಂದರು.
“ಸಿಐಡಿ ಪೊಲೀಸರ ತನಿಖೆಗೆ ಸಹಕರಿಸಲು ಅರ್ಜಿದಾರರು ಸದಾ ಸಿದ್ದರಿದ್ದಾರೆ. ಯಾವ ಸಮಯಕ್ಕೆ ಹಾಜರಾಗಬೇಕು ಎಂದು ತಿಳಿಸಿದರೆ, ಅದರಂತೆ ಅರ್ಜಿದಾರರು ನಡೆದುಕೊಳ್ಳುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗಿನ ಸಮಯ ತಿಳಿಸಲಿ. ಇದರ ಜೊತೆಗೆ ಕೋಕಾ ಕಾಯಿದೆ ಹೇರಿರುವುದು ಕಾನೂನುಬಾಹಿರ” ಎಂದು ಪೀಠಕ್ಕೆ ವಿವರಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತು.