ಬಿಲ್ಕಿಸ್ ಪ್ರಕರಣ: ಅಪರಾಧಿಗಳು ಸಮಾಜದೊಂದಿಗೆ ಮತ್ತೆ ವಿಲೀನಗೊಳ್ಳುವುದು ಸಾಂವಿಧಾನಿಕ ಹಕ್ಕು ಎಂದ ಸುಪ್ರೀಂ ಕೋರ್ಟ್

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಇಂದು ಮುಕ್ತಾಯಗೊಳಿಸಿತು.
Supreme Court and Bilkis Bano
Supreme Court and Bilkis Bano
Published on

ಸಮಾಜಕ್ಕೆ ಮರುಸೇರ್ಪಡೆಯಾಗುವ ಸಾಂವಿಧಾನಿಕ ಹಕ್ಕು ಕ್ರಿಮಿನಲ್ ಮೊಕದ್ದಮೆಯ ಆರೋಪಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿತು [ಬಿಲ್ಕಿಸ್ ಯಾಕೂಬ್ ರಸೂಲ್  ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸಂವಿಧಾನದ ನಿಯಮಾವಳಿಯಿಂದಾಗಿ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕ್ಷಮಾದಾನ ಮತ್ತು ಕ್ರಿಮಿನಲ್ ಶಿಕ್ಷೆಗಳನ್ನು ಹಿಂಪಡೆಯುವ ಅವಕಾಶ ಇದೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿತು.

ಗುಜರಾತ್‌ ಕೋಮುಗಲಭೆ ವೇಳೆ ಬಿಲ್ಕಿಸ್‌ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಕುಟುಂಬ ಸದಸ್ಯರನ್ನು ಕೊಂದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Also Read
ಬಿಲ್ಕಿಸ್‌ ಬಾನು ಪ್ರಕರಣ: ಈ ಪೀಠದಿಂದ ತಪ್ಪಿಸಿಕೊಳ್ಳಲು ಅಪರಾಧಿಗಳಿಂದ ಸ್ಪಷ್ಟ ಪ್ರಯತ್ನ ನಡೆದಿದೆ ಎಂದ ಸುಪ್ರೀಂ

ಅತ್ಯಾಚಾರಕ್ಕೊಳಗಾದ ಬಿಲ್ಕಿಸ್‌ ಮಾತ್ರವಲ್ಲದೆ ಮೂರನೇ ವ್ಯಕ್ತಿಗಳು ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದು ಇಂದಿನ ವಿಚಾರಣೆ ವೇಳೆ ಅವರು ʼಅಪರಾಧಿಗಳ ಬಿಡುಗಡೆ ಕೋರಿರುವ ಹಕ್ಕು ಶಾಸನಬದ್ಧವಾದುದಾಗಿದ್ದು ಅಂತಹ ಮನವಿಗಳನ್ನು ಕಾನೂನು ಮತ್ತು ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳಿಗೆ ಅನುಗುಣವಾಗಿ ಪರಿಗಣಿಸಬೇಕುʼ ಎಂದು ವಾದಿಸಿದರು.

ಇದಕ್ಕೆ ನ್ಯಾ. ನಾಗರತ್ನ ಅವರು, ನೀವು ಗಮನಿಸುವುದಾದರೆ ಆರೋಪಿಯನ್ನು ಸಮಾಜಕ್ಕೆ ಮರುಸೇರ್ಪಡೆಗೊಳಿಸುವುದು ಕೂಡ ಸಾಂವಿಧಾನಿಕ ಹಕ್ಕು. ಇದು ಶಾಸನಾತ್ಮಕ ಹಕ್ಕು ಮಾತ್ರವೇ ಅಲ್ಲದೆ ಸಂವಿಧಾನದ 161 ಹಾಗೂ 72ನೇ ವಿಧಿಯಡಿ ಕೂಡ ಅಪರಾಧಿಗಳ ಬಿಡುಗಡೆಗೆ ಅವಕಾಶ ಇದೆ ಎಂದು ತಿಳಿಸಿದರು.

ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ ಕೂಡ ಅರ್ಜಿ ಸಲ್ಲಿಸಿದ್ದು ಅದರ ಪರವಾಗಿ ವಾದ ಮಂಡಿಸಿದ ವಕೀಲ ನಿಜಾಮ್ ಪಾಷಾ ಅವರು, ಅಪರಾಧಿಯನ್ನು ಬಿಡುಗಡೆಗೊಳಿಸುವಂತೆ ಮಾಡಲಾದ ಮನವಿಯನ್ನು ಪುರಸ್ಕರಿಸುವುದು ಕಾರ್ಯಾಂಗದ ಸಾಂವಿಧಾನಿಕ ಅಧಿಕಾರ ಪ್ರಕ್ರಿಯೆಯ ಭಾಗವಾಗಿದ್ದು ಅದು ಸ್ವತಃ ಹಕ್ಕಲ್ಲ ಎಂದರು

Kannada Bar & Bench
kannada.barandbench.com