ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ: ಶರಣಾಗಲು ಸಮಯ ವಿಸ್ತರಣೆ ಕೋರಿದ್ದ ಅಪರಾಧಿಗಳ ಅರ್ಜಿ ತಿರಸ್ಕರಿಸಿದ ಸುಪ್ರೀಂ

ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಅಪರಾಧಿಗಳು ಅಂತಹ ವಿನಂತಿಗಳನ್ನು ಅನುಮತಿಸಲು ಯಾವುದೇ ಸಮರ್ಪಕ ಕಾರಣಗಳನ್ನು ಉಲ್ಲೇಖಿಸಿಲ್ಲ ಎಂದು ಹೇಳಿದರು.
Supreme Court and Bilkis Bano
Supreme Court and Bilkis Bano

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಹನ್ನೊಂದು ಅಪರಾಧಿಗಳು ಸಂಬಂಧಪಟ್ಟ ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಹೆಚ್ಚುವರಿ ಸಮಯ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ನೇತೃತ್ವದ ವಿಭಾಗೀಯ ಪೀಠವು ಅಪರಾಧಿಗಳ ಅಂತಹ ವಿನಂತಿಯನ್ನು ಅನುಮತಿಸಲು ಯಾವುದೇ ಸಮರ್ಪಕ ಕಾರಣಗಳನ್ನು ಉಲ್ಲೇಖಿಸಿಲ್ಲ ಎಂದು ಹೇಳಿದರು.

"ವಿಸ್ತರಣೆಗೆ ಅನುಮತಿ ನೀಡಲು ಅರ್ಜಿಯಲ್ಲಿ ಯಾವುದೇ ಕಾರಣ ಕಂಡುಬಂದಿಲ್ಲ. ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಆದೇಶಿಸಿದೆ.

ಅಪರಾಧಿಗಳಾದ ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶ್ಯಾಮ್ ಭಗವಾನ್ ದಾಸ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರ್ ಭಾಯ್ ವೊಹಾನಿಯಾ, ಪ್ರದೀಪ್ ಮೊರ್ಧಿಯಾ, ಬಕಾಭಾಯ್ ವೊಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಅವರು ಜನವರಿ 22 ರೊಳಗೆ ಶರಣಾಗಬೇಕು.

Justice BV Nagarathna and Justice Ujjal Bhuyan
Justice BV Nagarathna and Justice Ujjal Bhuyan

ಜನವರಿ 8 ರಂದು ಸುಪ್ರೀಂ ಕೋರ್ಟ್ ಅಪರಾಧಿಗಳಿಗೆ ಎರಡು ವಾರಗಳಲ್ಲಿ ಶರಣಾಗುವಂತೆ ಆದೇಶಿಸಿತ್ತು. ಆದರೆ, ಅವರೆಲ್ಲರೂ ಕೌಟುಂಬಿಕ ಜವಾಬ್ದಾರಿಗಳು, ಬೆಳೆ ಕೊಯ್ಲು, ವೃದ್ಧಾಪ್ಯ ಮತ್ತು ಅನಾರೋಗ್ಯದಂತಹ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಶರಣಾಗಲು ಹೆಚ್ಚುವರಿ ನಾಲ್ಕರಿಂದ ಆರು ವಾರಗಳ ಸಮಯವನ್ನು ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ಸರ್ವೋಚ್ಚ ನ್ಯಾಯಾಲಯದ ಮೇ 2022 ರ ತೀರ್ಪನ್ನು ಆಧರಿಸಿ ಗುಜರಾತ್ ಸರ್ಕಾರವು ಆಗಸ್ಟ್ 2023 ರಲ್ಲಿ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿತ್ತು. ಈ ತೀರ್ಪಿನಲ್ಲಿ ನ್ಯಾಯಾಲಯವು ಅಪರಾಧ ನಡೆದ ರಾಜ್ಯದ (ಗುಜರಾತ್, ಈ ಪ್ರಕರಣದಲ್ಲಿ) ನೀತಿಗೆ ಅನುಗುಣವಾಗಿ ಕ್ಷಮಾದಾನದ ಅರ್ಜಿಯನ್ನು ಪರಿಗಣಿಸಬೇಕು ಮತ್ತು ವಿಚಾರಣೆ ನಡೆದ ಸ್ಥಳದಲ್ಲಿ ಅಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಇದರ ಅನುಸಾರ, ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿದ್ದರೂ ಗುಜರಾತ್ ಸರ್ಕಾರವು ಅಪರಾಧಿಗಳನ್ನು ಬಿಡುಗಡೆ ಮಾಡಲು ತನ್ನ ಕ್ಷಮಾದಾನ ನೀತಿಯನ್ನು ಅನ್ವಯಿಸಿತು. ಗುಜರಾತ್ ಸರ್ಕಾರದ ನಿರ್ಧಾರವನ್ನು ಬಾನೊ ಸೇರಿದಂತೆ ವಿವಿಧ ಅರ್ಜಿದಾರರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಗುಜರಾತ್ ಸರ್ಕಾರವು ಅಪರಾಧಿಗಳಿಗೆ ನೀಡಿದ ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ಜನವರಿ 8 ರಂದು ರದ್ದುಗೊಳಿಸಿತು. ಈ ಹನ್ನೊಂದು ಅಪರಾಧಿಗಳಿಗೆ ತನ್ನ ಕ್ಷಮಾದಾನ ನೀತಿಯನ್ನು ಅನ್ವಯಿಸಲು ಗುಜರಾತ್ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅದು ತೀರ್ಮಾನಿಸಿತು.

Kannada Bar & Bench
kannada.barandbench.com