ಪಂಢರಾಪುರ ದೇಗುಲಗಳ ಕಾಯಿದೆ ರದ್ದತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಸುಬ್ರಮಣ್ಯಂ ಸ್ವಾಮಿ ಅರ್ಜಿ

ಪಂಢರಾಪುರ ದೇವಾಲಯ ಸ್ವಾಧೀನಪಡಿಸಿಕೊಳ್ಳುವ ಮೂಲಕ ಸರ್ಕಾರ ಹಿಂದೂಗಳ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
Subramaniam Swamy and Bombay High Court
Subramaniam Swamy and Bombay High Court

ಪಂಢರಾಪುರ ದೇಗುಲದ ಆಡಳಿತವನ್ನು ಮಹಾರಾಷ್ಟ್ರ ಸರ್ಕಾರವು ನಿರಂಕುಶವಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಆರೋಪಿಸಿ ಪಂಢರಾಪುರ ದೇವಾಲಯಗಳ ಕಾಯಿದೆ-1973 ಅನ್ನು ರದ್ದುಪಡಿಸಲು ಕೋರಿ ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಅವರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ [ಸುಬ್ರಮಣ್ಯಂ ಸ್ವಾಮಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ವಕೀಲರಾದ ಮನೋಹರ್ ಶೆಟ್ಟಿ, ಸತ್ಯ ಸಬರ್ವಾಲ್, ವಿಶೇಷ್ ಕನೋಡಿಯಾ ಮತ್ತು ಶಂತನು ಶೆಟ್ಟಿ ಅವರ ಮೂಲಕ ಸಲ್ಲಿಸಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಕಾಯಿದೆ ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ಲೋಪದೋಷಗಳ ಪರಿಹಾರಕ್ಕಾಗಿ ದೇಗುಲ ನಿರ್ವಹಣೆಯನ್ನು ಸರ್ಕಾರ ವಹಿಸಿಕೊಂಡಿದ್ದರೂ ಅದು ನಿವಾರಣೆಯಾದ ಬಳಿಕ ದೇಗುಲ ಹೊಣೆಗಾರಿಕೆಯನ್ನು ಸಂಬಂಧಪಟ್ಟ ವ್ಯಕ್ತಿಗೆ ಹಸ್ತಾಂತರಿಸಬೇಕು. ಲೋಪದೋಷ ತೀರಿದ ಬಳಿಕವೂ ಸ್ವಾಧೀನತೆ ಮುಂದುವರಿಸುವುದು ಎಂದರೆ ಅದು ಮಾಲೀಕತ್ವವನ್ನು ಕಸಿದುಕೊಳ್ಳುವುದು ಅಥವಾ ಸಂವಿಧಾನ ಒದಗಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಸಮನಾಗಿರುತ್ತದೆ.

  • ಪಂಢರಾಪುರ ದೇವಸ್ಥಾನದ ಮೇಲೆ ಹಿಡಿತ ಸಾಧಿಸುವ ಮೂಲಕ ಸರ್ಕಾರವು ಹಿಂದೂಗಳಿಗೆ ತಮ್ಮ ಧರ್ಮ ಪ್ರತಿಪಾದಿಸುವ, ಆಚರಣೆ ಮಾಡುವ ಹಾಗೂ ಪ್ರಚಾರ ಮಾಡುವ, ಹಿಂದೂ ಧಾರ್ಮಿಕ ದತ್ತಿಯನ್ನು ನಿರ್ವಹಿಸುವ ಹಕ್ಕುಗಳನ್ನು ಹಾಗೂ ಧಾರ್ಮಿಕ ವಿಷಯ ಕುರಿತಾದ ಸ್ವಂತ ವ್ಯವಹಾರಗಳನ್ನು ಕಸಿದುಕೊಂಡಿದೆ.

  • ದೇವಾಲಯ ನಿರ್ವಹಿಸಲು ಧಾರ್ಮಿಕ ಸಮುದಾಯದೊಳಗೆ ಇರುವ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಕಾಯಿದೆ ನಿರಾಕರಿಸಿದೆ.

  • ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರೋಹಿತರ ಪಾತ್ರವು ಸಂಪೂರ್ಣವಾಗಿ ಧಾರ್ಮಿಕ ವಿಷಯವಾಗಿದ್ದು ಇದರಲ್ಲಿ ಮಾಡುವ ಹಸ್ತಕ್ಷೇಪವು ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆರಾಧನಾ ಸ್ವಾತಂತ್ರ್ಯಹಾಗೂ ಇದರೊಂದಿಗೆ ಸಹವಾಚನ ಮಾಡಲಾದ 25 ಮತ್ತು 26 ನೇ ವಿಧಿಗಳ ಉಲ್ಲಂಘನೆಯಾಗುತ್ತದೆ.

  • ಅರ್ಜಿದಾರರ ಮತ್ತು ಹಿಂದೂ ಸಮುದಾಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿರುವ ಕಾರಣಕ್ಕೆ ಕಾಯಿದೆಯನ್ನು ರದ್ದುಗೊಳಿಸಬೇಕು. 

Related Stories

No stories found.
Kannada Bar & Bench
kannada.barandbench.com