ಮಾಹಿತಿ ಸಚಿವಾಲಯದಿಂದ 4,474 ಆರ್ಟಿಐ ಕಾರ್ಯಕರ್ತರ ವೈಯಕ್ತಿಕ ವಿವರ ಆನ್ಲೈನ್ಗೆ ಅಪ್ಲೋಡ್; ಬಾಂಬೆ ಹೈಕೋರ್ಟ್ ಕಳವಳ
ಮಾಹಿತಿ ಹಕ್ಕು (ಆರ್ಟಿಐ) ಅರ್ಜಿ ಮೂಲಕ ಸಂಗ್ರಹಿಸಲಾದ ತಮ್ಮ ವೈಯಕ್ತಿಕ ದತ್ತಾಂಶವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವೆಬ್ಸೈಟಿನಲ್ಲಿ ಅಪ್ಲೋಡ್ ಮಾಡಿರುವುದನ್ನು ತೆಗೆದು ಹಾಕುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದ ಆದೇಶವನ್ನು ಗುರುವಾರ ಬಾಂಬೆ ಹೈಕೋರ್ಟ್ ಕಾಯ್ದಿರಿಸಿದೆ.
ಆರ್ಟಿಐ ಕಾರ್ಯಕರ್ತರ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆಯೇ ಅಥವಾ ಗೋಖಲೆ ಅವರ ಮಾಹಿತಿಯನ್ನಷ್ಟೇ ಅಪ್ಲೋಡ್ ಮಾಡಲಾಗಿದೆಯೇ ಎಂಬುದನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ತಿಳಿಯಲು ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಎಂ ಎನ್ ಜಾಧವ್ ಅವರನ್ನೊಳಗೊಂಡ ಪೀಠವು ಬಯಸಿತ್ತು.
ಪೂರಕ ಅಫಿಡವಿಟ್ ಸಲ್ಲಿಸಿರುವ ಮಾಹಿತಿ ಮತ್ತು ಪ್ರಸಾರ ಇಲಾಖೆಯು 4,474 ಆರ್ಟಿಐ ಕಾರ್ಯಕರ್ತರ ಮಾಹಿತಿಯನ್ನು ಕಚೇರಿಯ ಜ್ಞಾಪಕ ಪತ್ರಕ್ಕೆ ಅನುಸಾರವಾಗಿ ವೆಬ್ಸೈಟಿಗೆ ಅಪ್ಲೋಡ್ ಮಾಡಲಾಗಿದೆ. ಕೇವಲ ಗೋಖಲೆ ಅವರ ಮಾಹಿತಿಯನ್ನಷ್ಟೇ ಅಲ್ಲ ಎಂದು ವಿವರಿಸಲಾಗಿದೆ.
ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಆನಂತರದ ಜ್ಞಾಪಕ ಪತ್ರಗಳ ಬಗ್ಗೆ ತಿಳಿದಿರಲಿಲ್ಲ. ಅವುಗಳಲ್ಲಿ ಆರ್ಟಿಐ ಕಾರ್ಯಕರ್ತರ ವೈಯಕ್ತಿಕ ಮಾಹಿತಿ ನೀಡದಂತೆ ಸೂಚಿಸಿಲಾಗಿದ್ದು, ವೆಬ್ಸೈಟಿನಲ್ಲಿ ಹಾಲಿ ಇರುವ ಮಾಹಿತಿ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ಎಂಐಬಿ ಪರ ವಕೀಲ ರೂಯಿ ರೋಡ್ರಿಗಸ್ ಹೇಳಿದ್ದಾರೆ. ಗೋಖಲೆ ಅವರು ಈ ಸಂಬಂಧ ಸಚಿವಾಲಯವನ್ನು ಸಂಪರ್ಕಿಸಿದ ತಕ್ಷಣವೇ ಅವರ ಮಾಹಿತಿಯನ್ನು ವೆಬ್ಸೈಟಿನಿಂದ ತೆಗೆದುಹಾಕಲಾಯಿತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ವಿವರಿಸಲಾಗಿದೆ.
ಇದೇ ವೇಳೆ, ನ್ಯಾಯಾಲಯವು ಇಂತಹ ಲೋಪವಾದರೂ ಅದನ್ನು ಯಾರೂ ಗಮನಿಸದೆ ಹೋದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಹೀಗೆಂದಿತು:
ಮುಂದಿನ ವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದ್ದು, ವಿಚಾರಣೆಯ ಸಂದರ್ಭದಲ್ಲಿ ಎದ್ದಿರುವ ಎಲ್ಲಾ ಕಳವಳಗಳಿಗೂ ಅಂತಿಮ ತೀರ್ಪಿನಲ್ಲಿ ಉತ್ತರಿಸುವುದಾಗಿ ಹೇಳಿದೆ.


