ಜಿಲ್ಲಾ ನ್ಯಾಯಾಲಯಗಳ ಐದು ವರ್ಷಕ್ಕೂ ಹಳೆಯ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಕ್ರಿಯಾ ಯೋಜನೆ ರೂಪಿಸಿದ ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ, ಗೋವಾ, ಕೇಂದ್ರಾಡಳಿತ ಪ್ರದೇಶಗಳಾದ ದಾದರ್‌ ನಗರ್ ಹವೇಲಿ ಮತ್ತು ದಮನ್ ದಿಯು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ಹೈಕೋರ್ಟ್ ಹೊರಡಿಸಿದ ನೋಟಿಸ್‌ನಲ್ಲಿ ಒಂದು ವರ್ಷದ ಯೋಜನೆ ರೂಪಿಸಲಾಗಿದೆ.
Gavel outside Bombay High Court
Gavel outside Bombay High Court

ಮಹಾರಾಷ್ಟ್ರ, ಗೋವಾ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಾದರ್‌, ನಗರ್ ಮತ್ತು ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತೆರವುಗೊಳಿಸುವ ಸಲುವಾಗಿ ಬಾಂಬೆ ಹೈಕೋರ್ಟ್ ಗುರುವಾರ 2024 ರ ಕ್ರಿಯಾ ಯೋಜನೆ ಬಿಡುಗಡೆ ಮಾಡಿದೆ.

ಜನವರಿ 2024ರಿಂದ ಜಾರಿಗೆ ಬರುವಂತೆ ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ನೋಟಿಸ್ ಪ್ರಕಟಿಸಲಾಗಿದೆ. ಇದರ ಪ್ರಕಾರ, 5, 10, 20, 30 ಮತ್ತು 40 ವರ್ಷ ಎಂದು ಪ್ರಕರಣಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ.

30 ರಿಂದ 40 ವರ್ಷಗಳಷ್ಟು ಹಳೆಯದಾದ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಗಳು ಜೂನ್ 2024ರೊಳಗೆ ಇತ್ಯರ್ಥಪಡಿಸಬೇಕು ಮತ್ತು 10 ರಿಂದ 20 ವರ್ಷ ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸೆಪ್ಟೆಂಬರ್ 2024ರ ಗಡುವು ವಿಧಿಸಲಾಗಿದೆ. 5 ವರ್ಷಗಳಷ್ಟು ಹಳೆಯದಾದ ಪ್ರಕರಣಗಳನ್ನು ಡಿಸೆಂಬರ್ 2024 ರೊಳಗೆ ಇತ್ಯರ್ಥಪಡಿಸಲು ನಿರ್ದೇಶಿಸಲಾಗಿದೆ.

10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಾಕಿ ಇರುವ ಪ್ರಕರಣಗಳನ್ನು ಅದರ ಅಡಿಯಲ್ಲಿ ನ್ಯಾಯಾಲಯಗಳಲ್ಲಿ ಸಮಾನವಾಗಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶಿಸಲಾಗಿದೆ.

ಅಂತಿಮವಾಗಿ ಇತ್ಯರ್ಥಗೊಳ್ಳಲು ಸಿದ್ಧವಾಗಿರುವ ಎಲ್ಲಾ ಪ್ರಕರಣಗಳ ಪಟ್ಟಿಯನ್ನು ಸರ್ಕಾರಿ ಪ್ಲೀಡರ್‌ಗಳು, ಸರ್ಕಾರಿ ಅಭಿಯೋಜಕರು ಮತ್ತು ಪೊಲೀಸ್ ಠಾಣೆಗಳಿಗೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ.

ಈ ಕೆಳಗಿನ ಪ್ರಕರಣಗಳ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಆದೇಶಿಸಲಾಗಿದೆ:

  • ಜಿಲ್ಲಾ / ಸತ್ರ ನ್ಯಾಯಾಲಯದಿಂದ ತಡೆಹಿಡಿಯಲ್ಪಟ್ಟ ಮತ್ತು ಈ ಹಿಂದೆ ವರದಿಯಾಗದ ಪ್ರಕರಣಗಳು. ತ್ವರಿತ ವಿಲೇವಾರಿಗೆ ಆದ್ಯತೆ ನೀಡಲಾಗುವುದು;

  • ಹೈಕೋರ್ಟ್ ತಡೆ ನೀಡಿರುವ ಮರುಪರಿಶೀಲನಾ ಪ್ರಕರಣಗಳು;

  • ಪ್ರಕರಣ ಮಾಹಿತಿ ವ್ಯವಸ್ಥೆ (ಸಿಐಎಸ್) ಪ್ರಕಾರ ದಿನಾಂಕಗಳಿಲ್ಲದ ಅಥವಾ ರಜಾದಿನಗಳಲ್ಲಿ ಪಟ್ಟಿ ಮಾಡಲಾದ ಪ್ರಕರಣಗಳು.

ಈ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಹಕಾರ ಕೋರಿ ಆಯಾ ವಕೀಲರ ಸಂಘಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ತಾಲ್ಲೂಕು ಮಟ್ಟದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮತ್ತು ಪ್ರಧಾನ ನ್ಯಾಯಾಧೀಶರನ್ನು ನೋಟಿಸ್‌ನಲ್ಲಿ ಕೋರಲಾಗಿದೆ.

"ಕ್ರಿಯಾ ಯೋಜನೆ ಅಡಿಯಲ್ಲಿ ಸೂಚಿಸಲಾದ ಎಲ್ಲಾ ಪ್ರಕರಣಗಳನ್ನು ಉಲ್ಲೇಖಿಸಲು ಸಿಐಎಸ್‌ನಲ್ಲಿ 'ತುರ್ತು ಪ್ರಕರಣ ಆಯ್ಕೆ' ಲಭ್ಯವಿದೆ. ಜಿಲ್ಲಾ ಮಟ್ಟದ ಉಪ ಸಮಿತಿಗಳು ಮಾಸಿಕ ಸಭೆಗಳಲ್ಲಿ ಇದನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ನ್ಯಾಯಾಲಯಗಳು 'ತುರ್ತು ಪ್ರಕರಣ ಆಯ್ಕೆ'ಯನ್ನು ಎಷ್ಟು ಪ್ರಕರಣಗಳಲ್ಲಿ ಬಳಸಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅದರ ಮಾಸಿಕ ವರದಿಯನ್ನು ಸಲ್ಲಿಸಬೇಕು" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಕ್ರಿಯಾ ಯೋಜನೆಯು ಮಹಾರಾಷ್ಟ್ರದ ಕೌಟುಂಬಿಕ ನ್ಯಾಯಾಲಯಗಳಿಗೆ ಮತ್ತು ಮಹಾರಾಷ್ಟ್ರದ 'ಎಕ್ಸ್‌ ಕೇಡರ್ ನ್ಯಾಯಾಲಯಗಳಿಗೂ' ಅನ್ವಯಿಸುತ್ತದೆ. ಇದರಲ್ಲಿ ಸಹಕಾರಿ ನ್ಯಾಯಾಲಯಗಳು, ಮೋಟಾರು ಅಪಘಾತ ಕ್ಲೇಮು ನ್ಯಾಯಮಂಡಳಿಗಳು, ಕೈಗಾರಿಕಾ ಮತ್ತು ಕಾರ್ಮಿಕ ನ್ಯಾಯಾಲಯಗಳನ್ನು ಇದು ಒಳಗೊಳ್ಳುತ್ತದೆ.

[ಸೂಚನೆ ಓದಿ]

Attachment
PDF
Action plan for District Courts 2024.pdf
Preview

Related Stories

No stories found.
Kannada Bar & Bench
kannada.barandbench.com