ಜಾವೇದ್‌ ಅಖ್ತರ್‌ ಹೂಡಿದ್ದ ಮಾನಹಾನಿ ಪ್ರಕರಣ ಪ್ರಶ್ನಿಸಿ ಕಂಗನಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್‌

ಅಖ್ತರ್‌ ಅವರ ದೂರನ್ನು ಆಧರಿಸಿ ಮ್ಯಾಜಿಸ್ಟ್ರೇಟ್‌ ಅವರು ಚಾಲನೆ ನೀಡಿದ್ದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು, ಜಾರಿ ಮಾಡಲಾಗಿರುವ ಸಮನ್ಸ್‌ಗಳನ್ನು ರದ್ದುಪಡಿಸಲು ಕೋರಿ ಕಂಗನಾ ಮನವಿ ಸಲ್ಲಿಸಿದ್ದರು.
Kangana Ranaut, Javed Akhtar
Kangana Ranaut, Javed Akhtar

ಗೀತ ರಚನಾಕಾರ ಜಾವೇದ್ ಅಖ್ತರ್‌ ತಮ್ಮ ವಿರುದ್ಧ ದಾಖಲಿಸಿದ್ದ ದೂರಿನ ಆಧಾರದಲ್ಲಿ ಅಂಧೇರಿಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ಚಾಲನೆ ನೀಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್‌ ನಟಿ ಕಂಗನಾ ರನಾವತ್‌ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾಗೊಳಿಸಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈವರೆಗೆ ಅಖ್ತರ್‌ ದೂರಿನ ಹಿನ್ನೆಲೆಯಲ್ಲಿ ನೀಡಿರುವ ಆದೇಶಗಳು, ಸಮನ್ಸ್‌ಗಳನ್ನೂ ಒಳಗೊಂಡಂತೆ‌ ಅವರ ದೂರಿನ ಆಧಾರದಲ್ಲಿ ಚಾಲನೆ ನೀಡಿರುವ ಎಲ್ಲ ವಿಚಾರಣಾ ಪ್ರಕ್ರಿಯೆಗಳನ್ನು ರದ್ದುಪಡಿಸಿಬೇಕು ಎನ್ನುವುದು ಕಂಗನಾ ಅವರ ಮನವಿಯಾಗಿತ್ತು.

ಅಖ್ತರ್‌ ಅವರ ದೂರಿಗೆ ಸಂಬಂಧಿಸಿದಂತೆ ಪೊಲೀಸರಿಗೆ ವಿಚಾರಣೆ ನಡೆಸಲು ನಿರ್ದೇಶಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕಿರುವ ವಿವೇಚನಾಧಿಕಾರವನ್ನು ಎತ್ತಿ ಹಿಡಿದ ನ್ಯಾ. ರೇವತಿ ಮೋಹಿತೆ ದೆರೆ ಅವರು ಕಂಗನಾ ಮನವಿಯನ್ನು ವಜಾಗೊಳಿಸಿದರು.

ಕಂಗನಾ ಅವರನ್ನು ಪ್ರತಿನಿಧಿಸಿದ್ದ ವಕೀಲ ರಿಜ್ವಾನ್‌ ಸಿದ್ದಿಕಿ ಅವರು ದೂರುದಾರರನ್ನು ಪರೀಕ್ಷಿಸುವುದು ಹಾಗೂ ದೂರಿನಲ್ಲಿ ತಿಳಿಸಿರುವ ಸಾಕ್ಷಿಯನ್ನು ಪರೀಕ್ಷಿಸುವುದು ಮ್ಯಾಜಿಸ್ಟ್ರೇಟ್‌ ಅವರ ಕರ್ತವ್ಯವಾಗಿದೆ. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 202ರ ಪ್ರಕಾರ ಮ್ಯಾಜಿಸ್ಟ್ರೇಟ್‌ ಅವರು ಇದನ್ನು ಪಾಲಿಸಬೇಕಿತ್ತೇ ಹೊರತು ತಮ್ಮ ಪರವಾಗಿ ಜುಹು ಪೊಲೀಸರಿಗೆ ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ಸುಮ್ಮನೆ ಸೂಚಿಸಬಾರದಿತ್ತು ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ಅಖ್ತರ್‌ ಅವರ ವಕೀಲ ಜೇ ಕೆ ಭಾರಧ್ವಜ್‌ ಅವರು ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಮೂರು ಆಯ್ಕೆಗಳಿರುತ್ತವದ. ತಾವೇ ಖುದ್ದು ತನಿಖೆ ನಡೆಸುವುದು ಅಥವಾ ಪೊಲೀಸ್‌ ಅಧಿಕಾರಿಯ ಮೂಲಕ ತನಿಖೆ ನಡೆಸುವುದು ಇಲ್ಲವೇ ಮೂರನೇ ಪಕ್ಷದಿಂದ ತನಿಖೆ ನಡೆಸುವುದು ಎಂಬುದಾಗಿ ವಾದಿಸಿದ್ದರು. ಮ್ಯಾಜಿಸ್ಟ್ರೇಟ್‌ ಅವರು ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ಲೋಪವಿಲ್ಲ ಎಂದು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com