ರಾಷ್ಟ್ರ ಲಾಂಛನ ವಿವಾದ ಸುಪ್ರೀಂ ಕೋರ್ಟ್‌ ಕಟಕಟೆಗೆ; ಪಾವಿತ್ರ್ಯದ ಉಲ್ಲಂಘನೆ, ಭಾವನೆಗಳಿಗೆ ಧಕ್ಕೆ ಎಂದು ಆಕ್ಷೇಪ

ಸಾರನಾಥ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿರುವ "ಸೌಮ್ಯ ಹಾಗೂ ಗಾಂಭೀರ್ಯ"ದ ರಾಷ್ಟ್ರಲಾಂಛನಕ್ಕೆ ವ್ಯತಿರಿಕ್ತವಾಗಿ ನೂತನ ಲಾಂಛನವಿದೆ ಎಂದು ಆರೋಪ.
ರಾಷ್ಟ್ರ ಲಾಂಛನ ವಿವಾದ ಸುಪ್ರೀಂ ಕೋರ್ಟ್‌ ಕಟಕಟೆಗೆ; ಪಾವಿತ್ರ್ಯದ ಉಲ್ಲಂಘನೆ, ಭಾವನೆಗಳಿಗೆ ಧಕ್ಕೆ ಎಂದು ಆಕ್ಷೇಪ

ರಾಷ್ಟ್ರ ಲಾಂಛನವಾಗಿ ಬಳಸುವ ನಾಲ್ಕು ಸಿಂಹಗಳ ಗುರುತನ್ನು ತಿರುಚಿ 'ಕುಪಿತ ಸಿಂಹ'ಗಳ ರೀತಿಯಲ್ಲಿ ನಿರ್ಮಿಸಿರುವ ಲಾಂಛನವನ್ನು ನೂತನ ಸಂಸತ್‌ ಭವನದ ಮೇಲೆ ಅಳವಡಿಸಲಾಗಿದೆ ಎಂದು ವಿವಾದ ಎದ್ದಿರುವ ಹಿನ್ನೆಲೆಯಲ್ಲಿಯೇ ಇದೀಗ ಇಬ್ಬರು ವಕೀಲರು ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಸೆಂಟ್ರಲ್‌ ವಿಸ್ಟಾ ವ್ಯಾಪ್ತಿಯ ನೂತನ ಸಂಸತ್‌ ಭವನದ ಮೇಲೆ ನಿರ್ಮಿಸಲಾಗಿರುವ ಮಾದರಿಯು ಭಾರತದ ರಾಷ್ಟ್ರ ಲಾಂಛನ (ಅಸಮರ್ಪಕ ಬಳಕೆಯ ವಿರುದ್ಧದ ನಿಷೇಧ) ಕಾಯಿದೆ, 2005ರ ಉಲ್ಲಂಘನೆಯಾಗಿದೆ ಎಂದು ವಕೀಲರಾದ ಅಲ್ದನೀಶ್‌ ರೈನ್‌ ಮತ್ತು ರಮೇಶ್‌ ಕುಮಾರ್ ಮಿಶ್ರಾ ಅವರು ಮನವಿಯಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಅನಾವರಣ ಮಾಡಿರುವ ಲಾಂಛನದಲ್ಲಿರುವ ಸಿಂಹಗಳು ಬಾಯ್ದೆರದು ಕೋರೆಹಲ್ಲುಗಳನ್ನು ಪ್ರದರ್ಶಿಸುವ ಮೂಲಕ "ಭೀತಿಹುಟ್ಟಿಸುವಂತೆಯೂ, ಆಕ್ರಮಣಕಾರಿಯಾಗಿಯೂ" ಇವೆ. ಇದು ಸಾರನಾಥ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿರುವ "ಸೌಮ್ಯ ಹಾಗೂ ಗಾಂಭೀರ್ಯ"ದ ರಾಷ್ಟ್ರಲಾಂಛನಕ್ಕೆ ವ್ಯತಿರಿಕ್ತವಾಗಿದೆ ಎಂದು ಅವರು ಮನವಿಯಲ್ಲಿ ಆಕ್ಷೇಪಿಸಿದ್ದಾರೆ.

ಮುಂದುವರೆದು, ಕೇಂದ್ರ ಸರ್ಕಾರವು ಲಾಂಛನದ ಸ್ವರೂಪವನ್ನು ತಿರುಚುವ ಮೂಲಕ "ರಾಷ್ಟ್ರ ಲಾಂಛನದ ಪಾವಿತ್ರ್ಯವನ್ನು ಮನಸೋಇಚ್ಛೆ ಉಲ್ಲಂಘಿಸುವ ಧೋರಣೆಯನ್ನು ಪ್ರದರ್ಶಿಸಿದೆ," ಎಂದು ಮನವಿಯಲ್ಲಿ ದೂರಲಾಗಿದೆ. "ರಾಷ್ಟ್ರ ಲಾಂಛನವು ಭಾರತ ಗಣರಾಜ್ಯದ ಹೆಗ್ಗುರುತಾಗಿದ್ದು ಇದು ಪ್ರತಿ ಭಾರತೀಯರಿಗೂ ಸೇರಿದ್ದಾಗಿದೆ. ಈ ಅಸ್ಮಿತೆಯಲ್ಲಿನ ಮಧ್ಯಪ್ರವೇಶವು ನಾಗರಿಕರ ರಾಷ್ಟ್ರೀಯ ಭಾವನೆಗೆ ಧಕ್ಕೆಯುಂಟು ಮಾಡಿದೆ," ಎಂದು ಮನವಿಯಲ್ಲಿ ಹೇಳಲಾಗಿದೆ.

ಪ್ರಧಾನಿ ಮೋದಿಯವರು ಕೆಲ ವಾರಗಳ ಹಿಂದಷ್ಟೇ ನೂತನ ಸಂಸತ್‌ ಭವನದ ಮೇಲೆ ಈ ಲಾಂಛನವನ್ನು ಅನಾವರಣ ಮಾಡಿದ್ದರು. ಲಾಂಛನವನ್ನು ತಿರುಚಿರುವ ಬಗ್ಗೆ ವಿಪಕ್ಷಗಳ ಗಂಭೀರ ಆಪಾದನೆಯನ್ನು ಮಾಡಿವೆ. ಆದರೆ, ಕೇಂದ್ರ ಸರ್ಕಾರವು ವ್ಯಾಪಕ ಸಂಶೋಧನೆ ಮತ್ತು ಪ್ರಕ್ರಿಯಾ ವಿಧಾನಗಳ ನಂತರವೇ ಈ ಲಾಂಛನವನ್ನು ರೂಪಿಸಿರುವುದಾಗಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com