ನ್ಯಾಯಮಂಡಳಿ ಸುಧಾರಣಾ ಕಾಯಿದೆ ಕುರಿತ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ: ಜುಲೈನಲ್ಲಿ ಅಂತಿಮ ವಿಲೇವಾರಿ

ಅರ್ಜಿ ತಿರಸ್ಕರಿಸಲು ಸೂಕ್ತ ಕಾರಣ ಇರಬೇಕೆಂದು ಸೂಚಿಸಿದ ಪೀಠ ಬುಧವಾರಕ್ಕೆ ಟಿಡಿಎಸ್ಎಟಿಗೆ ಸಂಬಂಧಿಸಿದ ಪ್ರಕರಣ ಪಟ್ಟಿ ಮಾಡಿತು.
ನ್ಯಾಯಮಂಡಳಿ ಸುಧಾರಣಾ ಕಾಯಿದೆ ಕುರಿತ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ: ಜುಲೈನಲ್ಲಿ ಅಂತಿಮ ವಿಲೇವಾರಿ

ನ್ಯಾಯಮಂಡಳಿ ಸುಧಾರಣಾ ಕಾಯಿದೆ 2021ರ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಎಲ್ಲಾ ಆಕ್ಷೇಪಣೆಗಳ ಅಂತಿಮ ವಿಲೇವಾರಿಗಾಗಿ ಸುಪ್ರೀಂ ಕೋರ್ಟ್ ಬುಧವಾರ ನಿರ್ಧರಿಸಿದೆ. ಅಂತಿಮ ವಿಲೇವಾರಿಗಾಗಿ ಪ್ರಕರಣಗಳ ವಿಚಾರಣೆಯನ್ನು ಜುಲೈ 26 ರಂದು ನಡೆಸುವುದಾಗಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಿಳಿಸಿದೆ.

ದೂರಸಂಪರ್ಕ ವ್ಯಾಜ್ಯ ಪರಿಹಾರ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್‌ಎಟಿ) ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಈ ವೇಳೆ, 2021 ರ ಕಾಯಿದೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಮಾಡಿದ ಅಂತಿಮ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುತ್ತದೆ ಎಂಬ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ವಾದ ಆಲಿಸಿತು.

Also Read
ಟಿಡಿಎಸ್ಎಟಿ ಅಧ್ಯಕ್ಷರಾಗಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ [ಚುಟುಕು]

"ವೇಣುಗೋಪಾಲ್ ಅವರು ನ್ಯಾಯಮಂಡಳಿ ಸುಧಾರಣಾ ಕಾಯಿದೆಯ ಸೆಕ್ಷನ್ 5 ಅನ್ನು ಅವಲಂಬಿಸಿದ್ದಾರೆ. ಅರ್ಜಿದಾರರ ಅವಧಿಯು ಏಪ್ರಿಲ್ 10, 2023 ರವರೆಗೆ ಮುಂದುವರೆಯುವುದರಿಂದ, ನ್ಯಾಯಮಂಡಳಿ ಸುಧಾರಣಾ ಕಾಯಿದೆಗೆ ಸಂಬಂಧಿಸಿದ ಮುಖ್ಯ ಆಕ್ಷೇಪಣೆಯನ್ನು ಪ್ರಸ್ತುತ ತೆಗೆದುಕೊಳ್ಳುವುದು ಉತ್ತಮ. ಆದರೆ, ಯಾವುದೇ ಕಾರಣಕ್ಕೂ ಮುಖ್ಯ ಕಾಯಿದೆಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಈಗ ತೆಗೆದುಕೊಳ್ಳುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಐಎಗಳನ್ನು ಅವುಗಳ ಸ್ವಂತ ಅರ್ಹತೆಯ ಮೇಲೆ ಆಲಿಸಲಾಗುವುದು" ಎಂದು ನ್ಯಾಯಾಲಯ ನುಡಿಯಿತು.

ನ್ಯಾ. ಎಲ್ ನಾಗೇಶ್ವರ ರಾವ್ ನೇತೃತ್ವದ ಸಮಿತಿಯು ಟಿಡಿಎಸ್‌ಎಟಿ ಹುದ್ದೆಗೆ ಅರ್ಜಿದಾರರ ಹೆಸರನ್ನು ಶಿಫಾರಸು ಮಾಡಿದೆ ಎಂದು ಹಿರಿಯ ವಕೀಲ ವಿಕಾಸ್ ಸಿಂಗ್ ಪೀಠಕ್ಕೆ ತಿಳಿಸಿದರು. 2020ರಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದ ನಂತರ ಅವರನ್ನು ಕಡೆಗಣಿಸಿದ್ದು ಏಕೆ ಎಂದು ಪೀಠ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಎಜಿ ಅವರನ್ನು ಕೇಳಿತು.

ಆಗ ಎಜಿ ಅವರು ಅಭ್ಯರ್ಥಿಗಳನ್ನು ತಿರಸ್ಕರಿಸಲು ನ್ಯಾಯಮಂಡಳಿ ಸುಧಾರಣಾ ಕಾಯಿದೆ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಒಮ್ಮೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ನಂತರ ಉಳಿದ ಇಲಾಖೆಗಳಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ. ಅಭ್ಯರ್ಥಿ ವಿರುದ್ಧ ಆದಾಯ ತೆರಿಗೆ ಬಾಕಿ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಹಾಗೊಂದು ವೇಳೆ ಬಾಕಿ ಇದ್ದರೆ ಅವರನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಇದೇ ವೇಳೆ ಅರ್ಜಿ ತಿರಸ್ಕರಿಸಲು ಸೂಕ್ತ ಕಾರಣ ಇರಬೇಕೆಂದು ಸೂಚಿಸಿದ ಪೀಠ ಬುಧವಾರಕ್ಕೆ ಟಿಡಿಎಸ್ಎಟಿಗೆ ಸಂಬಂಧಿಸಿದ ಪ್ರಕರಣ ಪಟ್ಟಿ ಮಾಡಿತು.

Related Stories

No stories found.
Kannada Bar & Bench
kannada.barandbench.com