ಪುತ್ರನ ವಿವಾಹಕ್ಕೆ ದ್ವಾರಕಪುರಿ ಕಲ್ಯಾಣಮಂಟಪವನ್ನು ಮುಂಗಡ ಹಣ ನೀಡಿ ಕಾಯ್ದಿರಿಸಿ, ಬಳಿಕ ಅದನ್ನು ರದ್ದುಪಡಿಸಿದರೂ ಬಾಕಿ ಹಣ ಪಾವತಿಸದೇ ಸತಾಯಿಸುತ್ತಿದ್ದ ಬೆಂಗಳೂರಿನ ಇಸ್ಕಾನ್ಗೆ ನರಸಿಂಹ ಹೋಮಕ್ಕಾಗಿ ಪಡೆದಿದ್ದ ₹7,500 ಸೇರಿದಂತೆ ₹1,19,013 ಅನ್ನು ದೂರುದಾರರಿಗೆ ಪಾವತಿಸಲು ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈಚೆಗೆ ಆದೇಶ ಮಾಡಿದೆ.
ಬೆಂಗಳೂರಿನ ನಂಜುಂಡೇಗೌಡ ಅವರು ಗ್ರಾಹಕ ಸಂರಕ್ಷಣಾ ಕಾಯಿದೆ ಸೆಕ್ಷನ್ 35ರ ಅಡಿ ₹1,34,523 ಗಳನ್ನು ಬಡ್ಡಿ ಸಮೇತ ಪಾವತಿಸಲು ಇಸ್ಕಾನ್ಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಆಯೋಗದ ಅಧ್ಯಕ್ಷ ಕೆ ಎಸ್ ಬಗಲಿ ಮತ್ತು ಸದಸ್ಯೆ ರೇಣುಕಾದೇವಿ ದೇಶಪಾಂಡೆ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ಮಾಡಿ, ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಪುತ್ರನ ವಿವಾಹ ನಡೆಸಲು 2020ರ ಸೆಪ್ಟೆಂಬರ್ 12ರ ಮಧ್ಯಾಹ್ನ 3ರಿಂದ 13ರ ಸಂಜೆ 4ರವರೆಗೆ ಇಸ್ಕಾನ್ಗೆ ಸೇರಿದ ದ್ವಾರಕಪುರಿ ಕಲ್ಯಾಣ ಮಂಟಪವನ್ನು ದೂರುದಾರರು ₹37,801 ಜಿಎಸ್ಟಿ ಸೇರಿದಂತೆ ₹2,47,806 ಪಾವತಿಸಿ, ಕಾಯ್ದಿರಿಸಿದ್ದರು. ದೇಣಿಗೆ ರೂಪದಲ್ಲಿ ₹7,500 ಗಳನ್ನೂ ದೂರುದಾರರು ಇಸ್ಕಾನ್ಗೆ ಪಾವತಿಸಿದ್ದರು. ಕೋವಿಡ್ ಹಿನ್ನೆಲೆಯಲ್ಲಿ 2021ರ ಜನವರಿ 15ರ ವರೆಗೆ ಮದುವೆ ಮುಂದೂಡಿರುವುದಾಗಿ ದೂರುದಾರರು ಇಸ್ಕಾನ್ ಆಡಳಿತಕ್ಕೆ ತಿಳಿಸಿದ್ದರು. ಬಳಿಕ, ಕಲ್ಯಾಣ ಮಂಟಪ ಕಾಯ್ದಿರಿಸಿದ್ದನ್ನು ರದ್ದುಪಡಿಸಿದ್ದ ದೂರುದಾರರು ₹2,47,806 ಪೈಕಿ ₹1,13,283 ಪಡೆದಿದ್ದರು. ಹಲವು ಬಾರಿ ಕೋರಿಕೆ ಸಲ್ಲಿಸಿದ್ದರೂ ಬಾಕಿ ಹಣವನ್ನು ಇಸ್ಕಾನ್ ಪಾವತಿಸಿರಲಿಲ್ಲ. ಹೀಗಾಗಿ, ವ್ಯಾಜ್ಯ ಆರಂಭಿಸಲಾಗಿತ್ತು.
ಇಸ್ಕಾನ್ ವಾದ: ದೂರುದಾರರು ಮುಂಗಡ ಕಾಯ್ದಿರಿಸಿದ್ದ ದಿನದಂದು ಕಾರ್ಯಕ್ರಮ ರದ್ದುಪಡಿಸಿದ್ದರಿಂದ 2020ರ ಸೆಪ್ಟೆಂಬರ್ 14ರ ಬೆಳಿಗ್ಗೆ 6ರಿಂದ ಸಂಜೆ 3ರ ವರೆಗೆ ಬೇರೊಬ್ಬರು ಕಲ್ಯಾಣ ಮಂಟಪ ಕಾಯ್ದಿರಿಸಿದ್ದರು. ಹೀಗಾಗಿ, ಕಾನೂನಾತ್ಮಕವಾಗಿ ದೂರುದಾರರಿಗೆ ₹1,13,283 ಪಾವತಿಸಲಾಗಿದೆ. ನರಸಿಂಹ ಹೋಮ ನಡೆಸಿಲ್ಲವಾದ್ದರಿಂದ ₹7,500 ಮಾತ್ರ ಪಾವತಿಸಲು ಸಿದ್ಧವಿದ್ದು, ದೂರು ವಜಾ ಮಾಡಬೇಕು ಎಂದು ಇಸ್ಕಾನ್ ಪರ ವಕೀಲರು ಕೋರಿದ್ದರು.
ಆಯೋಗದ ತೀರ್ಪು: ಮುಂಗಡ ಕಾಯ್ದಿರಿಸಿದ್ದ ಕಲ್ಯಾಣ ಮಂಟಪದ ದಿನಾಂಕವನ್ನು ರದ್ದುಪಡಿಸಿದರೆ ಶೇ. 10ರಷ್ಟು ಹಣವನ್ನು ಮುರಿದುಕೊಳ್ಳಲಾಗುವುದು ಎಂದು ಇಸ್ಕಾನ್ ನಿಯಮವಿದೆ. ಅದರ ಪ್ರಕಾರ ₹1,23,903 ರಲ್ಲಿ ಶೇ.10 ಹಣ ಎಂದರೆ ₹12,390 ಆಗಿದೆ. ಇದನ್ನು ತೆಗೆದು ನರಸಿಂಹ ಹೋಮದ ₹7,500 ಸೇರಿಸಿದರೆ ಬಾಕಿ ₹1,19,013 ಅನ್ನು ದೂರುದಾರರಿಗೆ ಇಸ್ಕಾನ್ ಪಾವತಿಸಬೇಕು ಎಂದು ಆಯೋಗವು ಆದೇಶದಲ್ಲಿ ಹೇಳಿದೆ.