
ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮತ್ತು ಅವುಗಳ ಬಳಕೆದಾರರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಹೊಣೆ ಎಂದು ಸುಪ್ರೀಂ ಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ [ಜ್ಞಾನ ಪ್ರಕಾಶ್ ಮತ್ತು ಕೇಂದ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಹೆದ್ದಾರಿ ನಿರ್ವಹಣೆ ಎಂದರೆ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿಡುವುದು ಅತಿಕ್ರಮಣಮುಕ್ತಗೊಳಿಸುವುದು ಮಾತ್ರವಲ್ಲದೆ ಅಪಘಾತ ಕಡಿಮೆ ಮಾಡಲು ಸಾಕಷ್ಟು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.
" ರಾಷ್ಟ್ರೀಯ ಹೆದ್ದಾರಿ ಕಾಯಿದೆ- 1956 ಸೆಕ್ಷನ್ 4ರ ಅಡಿಯಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ ... ಆದ್ದರಿಂದ, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಹಿಸುವುದು ಕೇಂದ್ರ ಸರ್ಕಾರದ ಹೊಣೆ. ಹೆದ್ದಾರಿಗಳ ನಿರ್ವಹಣೆಯಲ್ಲಿ ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡುವ ಹೊಣೆ ಸೇರಿದೆ. ಜೊತೆಗೆ ಅತಿಕ್ರಮಣಗಳಿಂದ ಮುಕ್ತವಾಗಿಡುವುದು ಮುಖ್ಯವಾಗಿ, ಅಪಘಾತಗಳ ಸಾಧ್ಯತೆ ಕಡಿಮೆ ಮಾಡಲು ಸಾಕಷ್ಟು ಸುರಕ್ಷತಾ ಕ್ರಮ ಕೈಗೊಳ್ಳುವುದು ಇದರಲ್ಲಿ ಸೇರಿದೆ " ಎಂದು ನ್ಯಾಯಾಲಯ ಹೇಳಿದೆ.
ಹೆದ್ದಾರಿಗಳು ಸುರಕ್ಷಿತವಾಗಿರಲು ಮತ್ತು ಅತಿಕ್ರಮಣದಿಂದ ಮುಕ್ತವಾಗಿರಲು ನಿಯಮಿತ ಗಸ್ತು ತಿರುಗುವಿಕೆ ಮತ್ತು ಸಿಸಿಟಿವಿ ಕ್ಯಾಮೆರಾ ಆಧಾರಿತ ಮೇಲ್ವಿಚಾರಣೆ ಮುಖ್ಯ ಎಂದು ಕೂಡ ಅದು ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸುರಕ್ಷತೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಲಿಸಿತು. 2017ರಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಹೆದ್ದಾರಿ ಅಪಘಾತಗಳಲ್ಲಿ 53,181 ಜನಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೂಚಿಸುವ ವರದಿಯನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ (ಭೂಮಿ ಮತ್ತು ಸಂಚಾರ) ಕಾಯಿದೆ- 2002 ಮತ್ತು ಹೆದ್ದಾರಿ ಆಡಳಿತ ನಿಯಮಾವಳಿ- 2004ನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಅರ್ಜಿ ಕೋರಿತ್ತು.
ಅರ್ಜಿಯಲ್ಲಿ ಎತ್ತಲಾದ ಸಮಸ್ಯೆಗಳು ಹೆದ್ದಾರಿ ಸುರಕ್ಷತೆಗೆ ನಿರ್ಣಾಯಕವಾಗಿವೆ ಎಂದಿರುವ ನ್ಯಾಯಾಲಯ ಅತಿಕ್ರಮಣ ತಡೆ, 'ರಾಜಮಾರ್ಗಯಾತ್ರೆ' ಮೊಬೈಲ್ ಅಪ್ಲಿಕೇಶನ್ಗೆ ವ್ಯಾಪಕ ಪ್ರಚಾರ, ತಪಾಸಣಾ ತಂಡಗಳ ರಚನೆ ಸೇರಿದಂತೆ ವಿವಿಧ ನಿರ್ದೇಶನಗಳನ್ನು ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 15ರಂದು ನಡೆಯಲಿದೆ.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]