ಅಂತರ್ಜಾಲ ಸೇವೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ಸೂಚನೆ

ಬ್ರಾಡ್‌ಬ್ಯಾಂಡ್‌ ಮೂಲಕ ಅಂತರ್ಜಾಲ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದ ನಿಷೇಧವನ್ನು ತೆಗೆದುಹಾಕಿ ಆದೇಶ ಹೊರಡಿಸಲಾಗಿದ್ದು ಕೆಲ ಮೊಬೈಲ್ ಸಂಖ್ಯೆಗಳನ್ನು ಸಕ್ರಮಪಟ್ಟಿಗೆ ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸರ್ಕಾರ ಹೇಳಿದೆ.
Manipur HC
Manipur HC

ಗಲಭೆಪೀಡಿತ ಮಣಿಪುರ ರಾಜ್ಯದಲ್ಲಿ ಮತ್ತೆ ಮೊಬೈಲ್‌ ಅಂತರ್ಜಾಲ ಸೇವೆ ಒದಗಿಸಲು ವಿಧಾನ ರೂಪಿಸುವಂತೆ ಮಣಿಪುರ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಅರಿಬಮ್ ಧನಂಜಯ್ ಶರ್ಮಾ ಮತ್ತು ಮಣಿಪುರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿ ಅಹಂತೇಮ್ ಬಿಮೋಲ್ ಸಿಂಗ್ ಮತ್ತು ನ್ಯಾಯಮೂರ್ತಿ ಎ ಗುಣೇಶ್ವರ್ ಶರ್ಮಾ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

"... ಮೊಬೈಲ್ ಫೋನ್‌ಗಳ ಮೂಲಕ ಅಂತರ್ಜಾಲ ಸೇವೆಗಳನ್ನು ಒದಗಿಸುವ ಕಾರ್ಯತಂತ್ರ/ವಿಧಾನಗಳನ್ನು ರೂಪಿಸುವುದನ್ನು ಸರ್ಕಾರಿ ಅಧಿಕಾರಿಗಳು, ವಿಶೇಷವಾಗಿ, ಗೃಹ ಇಲಾಖೆ ಪರಿಗಣಿಸಬೇಕು. ಪ್ರಕರಣಗಳ ಆಧಾರದ ಮೇಲೆ ಮತ್ತು ಹಂತ-ಹಂತವಾಗಿ ಮೊಬೈಲ್‌ ಸಂಖ್ಯೆಗಳನ್ನು ಸಕ್ರಮ ಪಟ್ಟಿಗೆ ಸೇರಿಸುವ ಮೂಲಕ ಇದನ್ನು ಸಾಧ್ಯವಾಗಿಸಬೇಕು. ರಾಜ್ಯ ಅಧಿಕಾರಿಗಳು ಈ ಅಂಶವನ್ನು ಪರಿಗಣಿಸಿ ಮುಂದಿನ ವಿಚಾರಣೆ ವೇಳೆ ಮಾಹಿತಿ ಒದಗಿಸಬೇಕು ” ಎಂದು ಪೀಠ ಹೇಳಿದೆ.

Also Read
ಮಣಿಪುರ ಹಿಂಸಾಚಾರ: ತನಿಖೆ ಮತ್ತು ಪರಿಹಾರಕ್ಕಾಗಿ ಮೂವರು ನಿವೃತ್ತ ಮಹಿಳಾ ನ್ಯಾಯಮೂರ್ತಿಗಳ ಸಮಿತಿ ರಚಿಸಿದ ಸುಪ್ರೀಂ

ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿರ್ಬಂಧಿಸಲಾಗಿದ್ದ ಮೊಬೈಲ್‌ ಅಂತರ್ಜಾಲ ಸೇವೆಗಳನ್ನು ಮರಳಿ ಒದಗಿಸುವಂತೆ ಕೋರಿ ವಿವಿಧ ಕಕ್ಷಿದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ವಿಚಾರಣೆ ವೇಳೆ ಸರ್ಕಾರ ಬ್ರಾಡ್‌ಬ್ಯಾಂಡ್ ಮೂಲಕ ಅಂತರ್ಜಾಲ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದ ನಿಷೇಧವನ್ನು ತೆಗೆದುಹಾಕಿ ಆದೇಶ ಹೊರಡಿಸಲಾಗಿದ್ದು ಕೆಲ ಮೊಬೈಲ್‌ ಸಂಖ್ಯೆಗಳನ್ನು ಸಕ್ರಮಪಟ್ಟಿಗೆ ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. ಆಗಸ್ಟ್‌ 31ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com