ಅಂತಿಮ ಬಾರಿ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದವರಿಗೆ ಮತ್ತೊಂದು ಅವಕಾಶ; ವಯೋಮಿತಿ ಮೀರಿದ್ದರೆ ಇಲ್ಲ: ಕೇಂದ್ರ ಸರ್ಕಾರ

ಕಳೆದ ವರ್ಷ ನಾಗರಿಕ ಸೇವಾ ಪರೀಕ್ಷೆ ಎದುರಿಸಿದ್ದವರಿಗೆ ಪ್ರಸಕ್ತ ಸಾಲಿನಲ್ಲಿ ಮತ್ತೊಂದು ಬಾರಿಗೆ ಕೊನೆಯ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಅವರು ವಯೋಮಿತಿ ಮೀರಿರಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.
UPSC
UPSC

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದಿದ್ದ ನಾಗರಿಕ ಸೇವಾ ಪರೀಕ್ಷೆಯೊಂದಿಗೆ ತಮ್ಮೆಲ್ಲಾ ಅವಕಾಶಗಳನ್ನು ಪೂರ್ಣಗೊಳಿಸಿದ್ದ ನಾಗರಿಕ ಸೇವಾ ಪರೀಕ್ಷಾ ಅಕಾಂಕ್ಷಿಗಳಿಗೆ ಅಂತಿಮ ಅವಕಾಶ ಕಲ್ಪಿಸುವ ಮೂಲಕ ವಿನಾಯಿತಿ ಕಲ್ಪಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ (ರಚನಾ ವರ್ಸಸ್‌ ಭಾರತ ಸರ್ಕಾರ).

ಕಳೆದ ವರ್ಷ ಸಿಇಸಿ-2020 ಪರೀಕ್ಷೆಯನ್ನು ಅಂತಿಮ ಅವಕಾಶವಾಗಿ ಎದುರಿಸಿದ್ದ ಅಭ್ಯರ್ಥಿಗಳಿಗೆ ಪ್ರಸಕ್ತ ವರ್ಷಕ್ಕೆ ಸೀಮಿತಗೊಳಿಸಿ ಸಿಇಸಿ-2021 ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದು. ಆದರೆ, ಸಿಇಸಿ-2021 ಬರೆಯಲು ಅವರು ತಮ್ಮ ನಿರ್ದಿಷ್ಟ ವಯೋಮಿತಿ ಮೀರಿರಬಾರದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

“ವಿನಾಯಿತಿಯು ನಿರ್ದಿಷ್ಟವಾಗಿ ಸಿಎಸ್‌ಇ-2021ರ ಪರೀಕ್ಷೆಗೆ ಸೀಮಿತವಾಗಿರುತ್ತದೆ. ಸಿಎಸ್‌ಇ-2020 ಪರೀಕ್ಷೆಯನ್ನು ಅಂತಿಮ ಅವಕಾಶವಾಗಿ ಎದುರಿಸಿದ್ದವರಿಗೆ ಮಾತ್ರ ಮತ್ತೊಂದು ಅವಕಾಶ ನೀಡಲಾಗುತ್ತಿದ್ದು, ಸಿಎಸ್‌ಇ-2021ರಲ್ಲಿ ಪರೀಕ್ಷೆ ಬರೆಯಲು ವಯೋಮಿತಿ ಮೀರಿಲ್ಲದ ಪಕ್ಷದಲ್ಲಿ ಅವಕಾಶ ದೊರೆಯಲಿದೆ," ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಸಿಎಸ್‌ಇ-2021ರ ಪರೀಕ್ಷೆಗೆ ಮಾತ್ರ ಈ ವಿನಾಯಿತಿ ಮೀಸಲಾಗಿದ್ದು, ಇದನ್ನು ದೃಷ್ಟಾಂತವನ್ನಾಗಿ ಪರಿಗಣಿಸಬಾರದು ಎಂದು ಕೇಂದ್ರ ಹೇಳಿದೆ.

ಅವಕಾಶಗಳು ಮುಗಿಯದೆ ಇರುವ ಅಭ್ಯರ್ಥಿಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಇಂತಿಷ್ಟು ಬಾರಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು ಎಂದು ಅವಕಾಶಗಳನ್ನು ನಿಗದಿಗೊಳಿಸಿರುತ್ತದೆ.

Also Read
ಕಳೆದ ವರ್ಷ ಅಂತಿಮ ಯತ್ನವಾಗಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದವರಿಗೆ ಮತ್ತೆ ಅವಕಾಶವಿಲ್ಲ: ಸುಪ್ರೀಂಗೆ ಕೇಂದ್ರದ ಮಾಹಿತಿ

ಪ್ರಸ್ತುತ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 32 ವಯೋಮಿತಿಯೊಳಗೆ ಆರು ಅವಕಾಶಗಳನ್ನು ಕಲ್ಪಿಸಲಾಗಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 35 ವಯೋಮಿತಿಯೊಳಗೆ ಒಂಭತ್ತು ಅವಕಾಶಗಳನ್ನು ನೀಡಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶಗಳಿಗೆ ಮಿತಿಯನ್ನು ಹಾಕಲಾಗಿಲ್ಲ, ಕೇವಲ ಗರಿಷ್ಠ 37 ವಯೋಮಿತಿಯನ್ನು ಮಾತ್ರ ನೀಗದಿಪಡಿಸಲಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಉಂಟಾದ ಸಮಸ್ಯೆಗಳಿಂದ ಯುಪಿಎಸ್‌ಸಿಯ ಸಿಎಸ್‌ಇ-2020 ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆ ಬರೆಯಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಿಎಸ್‌ಇ-2021 ಪೂರ್ವಭಾವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಹಿಂದೆ ಇದೇ ಮನವಿಯನ್ನು ವಿರೋಧಿಸಿ ಕೇಂದ್ರ ಸರ್ಕಾರ ಅಫಿಡವಿಟ್‌ ಸಲ್ಲಿಸಿತ್ತು.

Related Stories

No stories found.
Kannada Bar & Bench
kannada.barandbench.com