ತಿಂಗಳಲ್ಲಿ ಒಮ್ಮೆ ಸರ್ಕಾರಿ ಆಸ್ಪತ್ರೆಯಲ್ಲಿ ಸಮಯದಾಯ ಸೇವೆ: ವೈದ್ಯೆ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

ಮುಚ್ಚಳಿಕೆ ಮತ್ತು ಬೇಷರತ್‌ ಕ್ಷಮಾಪಣೆ ಅಫಿಡವಿಟ್‌ ಒಪ್ಪಿಕೊಂಡ ವಿಭಾಗೀಯ ಪೀಠವು ವೈದ್ಯೆ ಮೇಲಿನ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈ ಬಿಟ್ಟಿದೆ.
Karnataka High Court and doctor
Karnataka High Court and doctor

ಪತಿಯ ಸುಪರ್ದಿಗೆ ಅಪ್ರಾಪ್ತ ಪುತ್ರಿಯನ್ನು ಒಪ್ಪಿಸಲು ನ್ಯಾಯಾಲಯ ಹೊರಡಿಸಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್‌ಗೆ ಬೇಷರತ್‌ ಕ್ಷಮಾಪಣೆ ಕೋರಿದ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರು, ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ಪ್ರಕರಣ ಸಂಬಂಧ ಹೈಕೋರ್ಟ್‌ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 33 ವರ್ಷದ ಆರೋಪಿ ವೈದ್ಯೆ ವಿಚಾರಣೆಗೆ ಖುದ್ದು ಹಾಜರಾಗಿ, ತಮ್ಮ ತಪ್ಪಿಗೆ ಬೇಷರತ್‌ ಕ್ಷಮೆ ಕೋರಿ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದರು. ಜೊತೆಗೆ, ಭವಿಷ್ಯದಲ್ಲಿ ತಮ್ಮ ವಿರುದ್ಧ ನ್ಯಾಯಾಲಯವು ಯಾವುದೇ ಕ್ರಮ ತೆಗೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗದಂತೆ ನಡೆದುಕೊಳ್ಳಲಾಗುವುದು. ಆ ಮಾತನ್ನು ಸಾಬೀತುಪಡಿಸಲು ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಂಬಂಧಪಟ್ಟ ಮುಖ್ಯಸ್ಥರು, ಸರ್ಜನ್‌ ಅಥವಾ ನಿರ್ದೇಶಕರ ಪೂರ್ವಾನುಮತಿ ಪಡೆದು ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಸಹ ಬರೆದುಕೊಟ್ಟಿದ್ದಾರೆ.

ಆ ಮುಚ್ಚಳಿಕೆ ಮತ್ತು ಬೇಷರತ್‌ ಕಮ್ಷಾಪಣೆ ಅಫಿಡವಿಟ್‌ ಒಪ್ಪಿಕೊಂಡ ವಿಭಾಗೀಯ ಪೀಠವು ವೈದ್ಯೆ ಮೇಲಿನ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈ ಬಿಟ್ಟಿದೆ.

ಅಲ್ಲದೆ, ಸಮುದಾಯ ಸೇವೆ ಸಲ್ಲಿಸುವ ಸಂಬಂಧ ಆರೋಪಿ ವೈದ್ಯೆಯು ಬೆಂಗಳೂರಿನ ಯಾವುದೇ ಸರ್ಕಾರಿ ಆಸ್ಪತ್ರೆಗೆ ಮನವಿ ಮಾಡಿದರೆ, ಆ ಮನವಿಯನ್ನು ಆಸ್ಪತ್ರೆಯ ಮುಖ್ಯಸ್ಥರು ಪರಿಗಣಿಸಬೇಕು. ಆಕೆಯ ಮನವಿಯಂತೆ ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ನಿರ್ದೇಶಿಸಿದೆ.

ಆರು ತಿಂಗಳ ಕಳೆದ ನಂತರ ಆರೋಪಿ ವೈದ್ಯೆ, ತನ್ನ ಮುಚ್ಚಳಿಕೆಯನ್ನು ಪಾಲನೆ ಮಾಡಿದ ಸಂಬಂಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ವರದಿ ಸಲ್ಲಿಸಬೇಕು ಎಂದೂ ಪೀಠ ಇದೇ ವೇಳೆ ಸೂಚಿಸಿದೆ.

ಪ್ರಕರಣದ ಹಿನ್ನೆಲೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆರೋಪಿ ವೈದ್ಯೆಯು ಪತಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ದಂಪತಿಗೆ 8 ವರ್ಷದ ಪುತ್ರಿ ಇದ್ದಾರೆ. ವೈದ್ಯೆ ತನ್ನ ಸುಪರ್ದಿಯಲ್ಲಿ ಪುತ್ರಿಯನ್ನು ಇಟ್ಟುಕೊಂಡಿದ್ದರು. ಈ ನಡುವೆ ತಾತ್ಕಾಲಿಕವಾಗಿ ಮಗುವನ್ನು ತಂದೆಯ ಸುಪರ್ದಿಗೆ ನೀಡುವಂತೆ ವೈದ್ಯೆಗೆ ಹೈಕೋರ್ಟ್‌ 2023ರ ಜುಲೈನಲ್ಲಿ ನಿರ್ದೇಶಿಸಿತ್ತು. ಈ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ವೈದ್ಯೆ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

Related Stories

No stories found.
Kannada Bar & Bench
kannada.barandbench.com